ಬಜೆಟ್ ಮೂಲಕ ರಾಜಕೀಯ ಉದ್ದೇಶ ಸಾಧಿಸಲು ಪ್ರಯತ್ನಿಸಿದ ಸಿದ್ದರಾಮಯ್ಯ: ಯಡಿಯೂರಪ್ಪ ಟೀಕೆ
ಬೆಂಗಳೂರು, ಫೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್, ವಾಸ್ತವದಲ್ಲಿ ಚುನಾವಣೆಯಲ್ಲಿ ಜನರನ್ನು ಓಲೈಸಲು ಮಂಡಿಸಿರುವ ಘೋಷಣೆಗಳಾಗಿವೆ. ಇನ್ನು ಎರಡು ತಿಂಗಳ ನಂತರ ಚುನಾವಣೆಗಳು ನಡೆಯುವುದರಿಂದ, ಈ ಬಜೆಟ್ ಪ್ರಸ್ತಾವಗಳ ಅನುಷ್ಠಾನ ಪ್ರಶ್ನಾರ್ಥಕವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅಗತ್ಯ ಲೇಖಾನುದಾನವನ್ನು ಮಂಡಿಸಿ ಒಪ್ಪಿಗೆ ತೆಗೆದುಕೊಂಡು ಮುಂದೆ ಜನಾದೇಶ ಪಡೆದು ಅಧಿಕಾರಕ್ಕೆ ಬರುವ ಸರಕಾರ ಪೂರ್ಣಪ್ರಮಾಣದ ಬಜೆಟ್ ಮಂಡಿಸಲು ಅವಕಾಶ ನೀಡಬೇಕಾಗಿತ್ತು. ಎಲ್ಲ ವರ್ಗಗಳನ್ನು ಓಲೈಸಲು ಚುನಾವಣಾ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ಆ ಮೂಲಕ ರಾಜಕೀಯ ಉದ್ದೇಶವನ್ನು ಸಾಧಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
2017-18ನೆ ಸಾಲಿನ ಬಜೆಟ್ನಲ್ಲಿ ಇಲಾಖಾವಾರು ನಿಗದಿತ ಅನುದಾನದಲ್ಲಿ ಶೇ.40 ರಿಂದ ಶೇ.50ರಷ್ಟು ಖರ್ಚು ಮಾಡಲು ಸಿದ್ದರಾಮಯ್ಯ ಸರಕಾರಕ್ಕೆ ಸಾಧ್ಯವಾಗಿಲ್ಲ. ಈಗ ಮತ್ತೆ ಹೊಸ ಕಾರ್ಯಕ್ರಮಗಳನ್ನು ಘೋಷಿಸಿ, ಇದು ಕೇವಲ ಘೋಷಣೆಗಳಷ್ಟೇ ಎನ್ನುವುದನ್ನು ನಿರೂಪಿಸಿದ್ದಾರೆ ಎಂದು ಯಡಿಯೂರಪ್ಪ ದೂರಿದ್ದಾರೆ.