ಸಣ್ಣ ನೀರಾವರಿ ಯೋಜನೆಗಳಿಗೆ 2,114 ಕೋಟಿ ರೂ.ಗಳು ಅನುದಾನ: ಸಿದ್ದರಾಮಯ್ಯ
ರಾಜ್ಯ ಬಜೆಟ್-2018
ಬೆಂಗಳೂರು, ಫೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2018-19 ನೆ ಸಾಲಿನ ರಾಜ್ಯ ಬಜೆಟ್ನಲ್ಲಿ ಸಣ್ಣ ನೀರಾವರಿ ಯೋಜನೆಗಳಿಗೆ 2,114 ಕೋಟಿ ರೂ.ಗಳು ಅನುದಾನ ಒದಗಿಸಲಾಗಿದೆ.
* ರಾಜ್ಯದಲ್ಲಿ ಅನಿರ್ಬಂಧಿತ ಅಂತರ್ಜಲದ ಬಳಕೆಯಿಂದ 43 ತಾಲೂಕುಗಳನ್ನು ಅತಿ ಬಳಕೆ ತಾಲೂಕುಗಳೆಂದು ವರ್ಗೀಕರಿಸಲಾಗಿದೆ. ಈ ತಾಲೂಕುಗಳಲ್ಲಿ ಅಂತರ್ಜಲ ಅಭಿವದ್ಧಿಪಡಿಸಲು ಚೆಕ್ಡ್ಯಾಂ, ಬ್ಯಾರೇಜ್ ಬಾಂದಾರ ಹಾಗೂ ರೀಚಾರ್ಜ್ ಶ್ಯಾಫ್ಟ್ಗಳಂತಹ ರಚನೆಗಳನ್ನು 50 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
* ಇಲಾಖೆಯ ವ್ಯಾಪ್ತಿಯಲ್ಲಿ 403 ಏತ ನೀರಾವರಿ ಯೋಜನೆಗಳು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 183 ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಇವುಗಳನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು.
* ಪಶ್ಚಿಮವಾಹಿನಿ ಯೋಜನೆಯನ್ನು 2017-18ನೇ ಸಾಲಿನಲ್ಲಿ ಜಾರಿಗೆ ತಂದಿದ್ದು, ಇದರ ಸಮಗ್ರ ಯೋಜನೆಯಲ್ಲಿ ಸೇರಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳ ಎಂಬಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ನೇತ್ರಾವತಿ ನದಿಗೆ ಉಪ್ಪುನೀರು ತಡೆಯುವ ಕಿಂಡಿ ಅಣೆಕಟ್ಟನ್ನು 174 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು.
* ಕೆ.ಆರ್.ಪುರಂ ಸಂಸ್ಕರಣಾ ಘಟಕದಿಂದ ಹೊಸಕೋಟೆ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
* 2018-19ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಟ್ಟಾರೆಯಾಗಿ 2,114 ಕೋಟಿ ರೂ.ಗಳನ್ನು ಒದಗಿಸಲಾಗಿದೆ.