ರಾಜ್ಯ ಬಜೆಟ್-2018: ರಾಜ್ಯ ನಾಯಕರ ಪ್ರತಿಕ್ರಿಯೆಗಳು ಹೀಗಿವೆ..
ಜನಪರವಲ್ಲ
‘ಸಿದ್ದರಾಮಯ್ಯ ಮಂಡಿಸಿದ ಈ ಬಾರಿಯ ಬಜೆಟ್ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅತ್ಯಂತ ಕಡಿಮೆ ಹಣ ನೀಡಿ ಕಡೆಗಣಿಸಲಾಗಿದೆ. ಈ ಬಜೆಟ್ ಜನಪರವಲ್ಲ. ಜನಪ್ರಿಯವೂ ಅಲ್ಲ. ಚುನಾವಣೆ ಇರುವುದರಿಂದ ಹೆಬ್ಬಾವು ಅಥವಾ ಕೆರೆ ಹಾವನ್ನಾದರೂ ತೆಗಿತಾರೆ ಅಂತ ತಿಳಿದಿದ್ದೆವು. ಆದರೆ, ಕೆರೆಹಾವೂ ಇಲ್ಲ, ಹೆಬ್ಬಾವೂ ಇಲ್ಲ’
-ಸಿ.ಟಿ.ರವಿ ಮಾಜಿ ಸಚಿವ, ಹಾಲಿ ಶಾಸಕ
ಅವೈಜ್ಞಾನಿಕ ಬಜೆಟ್
‘ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅವೈಜ್ಞಾನಿಕ. ಚುನಾವಣೆಯ ಸೋಲಿನ ಭೀತಿ ಈ ಬಜೆಟ್ನಲ್ಲಿ ಸ್ಪಷ್ಟವಾಗಿದೆ. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ನೀರಾವರಿಗೆ ಹೆಚ್ಚಿನ ಹಣ ಕೊಟ್ಟಿಲ್ಲ. ಹಿಂದೆ ಕೊಟ್ಟ ಹಣ ಖರ್ಚು ಮಾಡಿಲ್ಲ’
-ಬಸವರಾಜ ಬೊಮ್ಮಾಯಿ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ
ಶುಗರ್ ಲೆಸ್
‘ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯರದ್ದು ಒಂದು ರೀತಿ ಶುಗರ್ ಲೆಸ್ ಬಜೆಟ್. ರಾಜ್ಯದ ಜನತೆ ಸಿಹಿಯ ನಿರೀಕ್ಷೆ ಮಾಡಿದ್ದರು. ಆದರೆ, ಅಭಿವೃದ್ಧಿ ಬಜೆಟ್ ಅಂತ ಹೇಳೋಕೆ ಅಭಿವೃದ್ಧಿಯೇ ಇಲ್ಲ, ಸಿದ್ದರಾಮಯ್ಯ ಮಾನಸಿಕವಾಗಿ ಸೋಲೊಪ್ಪಿಕೊಂಡಿದ್ದಾರೆ’
-ಆರ್.ಅಶೋಕ್ ಮಾಜಿ ಸಚಿವ
ಜನರ ಮೂಗಿಗೆ ಸವರಿದ ತುಪ್ಪ
‘ಐತಿಹಾಸಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಬಿಟ್ಟರೆ, ಸಾಲಮನ್ನಾ ಭಾಗ್ಯ ನಿರೀಕ್ಷೆಯಲಿದ್ದ ರೈತರಿಗೆ, ಕನಿಷ್ಠ ಕೂಲಿ ನಿರೀಕ್ಷೆಯಲ್ಲಿದ್ದ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಮಿಕರಿಗೂ ಈ ಬಜೆಟ್ ನಿರಾಸೆ ತಂದಿದೆ. ಚುನಾವಣಾ ವರ್ಷದಲ್ಲಿ ದುಡಿಯುವವರ ಪ್ರೀತಿ ಗಳಿಸುವ ಅವಕಾಶವನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಬಿಟ್ಟರೆ ಉಳಿದವು ಜನರ ಮೂಗಿಗೆ ಜೇನುತುಪ್ಪ ಸವರುವ ಕೆಲಸವಷ್ಟೇ’
-ಸಾಥಿ ಸುಂದರೇಶ್, ಸಿಪಿಐ ರಾಜ್ಯ ಕಾರ್ಯದರ್ಶಿ