ಜಲಸಂಪನ್ಮೂಲ: ವಿವಿಧ ನೀರಾವರಿ ಯೋಜನೆಗಳಿಗಾಗಿ 15,998 ಕೋಟಿ ರೂ. ಅನುದಾನ ಹಂಚಿಕೆ
ರಾಜ್ಯ ಬಜೆಟ್-2018
ಬೆಂಗಳೂರು, ಫೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2018-19 ನೆ ಸಾಲಿನ ರಾಜ್ಯ ಬಜೆಟ್ನಲ್ಲಿ ರಾಜ್ಯಾದ್ಯಂತ ವಿವಿಧ ನೀರಾವರಿ ಯೋಜನೆಗಳ ಅನುಷ್ಟಾನ, ಕಾಮಗಾರಿಗಳಿಗೆ ಸಂಬಂಧಿಸಿದಂತೆ 15, 998 ಕೋಟಿ ಅನುದಾನ ಹಂಚಿಕೆ ಮಾಡಿದ್ದಾರೆ.
* ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ವಿಸ್ತರಣೆಯಡಿ ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ಸುರಪುರ ತಾಲ್ಲೂಕುಗಳಡಿ ಹೆಚ್ಚುವರಿ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ.
* ನಂದವಾಡಗಿ ಏತ ನೀರಾವರಿ ಯೋಜನೆ ವಿಸ್ತರಣೆಯಡಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನಡಿ ಹೆಚ್ಚುವರಿ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ.
* ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ 46 ಕೆರೆಗಳಿಗೆ 540 ಕೋಟಿ ರೂ.ಗಳ ವೆಚ್ಚದಲ್ಲಿ ಘಟಪ್ರಭಾ ನದಿಯಿಂದ ನೀರು ಹರಿಸುವ ಸಾಲಾಪುರ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ.
* ಬಾಗಲಕೋಟೆ ಜಿಲ್ಲೆಯ ಸಸಾಲಟ್ಟಿ ಏತ ನೀರಾವರಿ ಯೋಜನೆಯನ್ನು 140 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
* ಬೆಳಗಾವಿ ಜಿಲ್ಲೆಯ ಸತ್ತಿಗೇರಿ ಏತ ನೀರಾವರಿ ಯೋಜನೆಯನ್ನು 210 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
* ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ, ಕೊಟ್ಟಲಗಿ, ಐಗಳಿ, ಕಕಮರಿ, ಹಾಲಳ್ಳಿ, ಅಡಹಳ್ಳಿ, ಅಡಾಳಟ್ಟಿ, ಕೋಕಟನೂರ, ಕನ್ನಾಳ, ಪಡತರವಾಡಿ, ಅರಟಾಳ ಗ್ರಾಮಗಳ 17 ಕೆರೆಗಳನ್ನು 137 ಕೋಟಿ ರೂ.ಗಳ ವೆಚ್ಚದಲ್ಲಿ ಝಂಜರವಾಡ ಗ್ರಾಮದ ಹತ್ತಿರದ ಕೃಷ್ಣಾ ನದಿಯಿಂದ ನೀರನ್ನು ಎತ್ತಿ ತುಂಬಿಸುವ ಯೋಜನೆ.
* ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರು ಕೆರೆಯನ್ನು 50 ಕೋಟಿ ರೂ. ವೆಚ್ಚದಲ್ಲಿ ತುಂಬಿಸುವ ಯೋಜನೆ.
* ಗೋಕಾಕ ತಾಲೂಕಿನ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಕುಡಿಯುವ ನೀರು ಪೂರೈಕೆಗಾಗಿ ಹಾಗೂ ಮಾರ್ಕಂಡೇಯ ಕಾಲುವೆಯಡಿ ಬಿಟ್ಟು ಹೋದ ಅಚ್ಚುಕಟ್ಟಿನ ನೀರಾವರಿಗಾಗಿ 250 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
* ಅರಕಲಗೂಡು ತಾಲೂಕು ಕೊಣನೂರು ಗ್ರಾಮದ ಕೆರೆಯಿಂದ ಕೊಣನೂರು ಸುತ್ತಮುತ್ತಲಿನ 40 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
* ಹಾಸನ ನಗರಕ್ಕೆ ಹೊಂದಿಕೊಂಡಿರುವ ಚೆನ್ನಪಟ್ಟಣ ಕೆರೆ, ಸತ್ಯಮಂಗಲ ಕೆರೆ, ಹುನಸಿನಕೆರೆ ಕೆರೆಗಳ ಪುನಶ್ಚೇತನ ಹಾಗೂ ಹಂದಿನಕೆರೆಯಿಂದ ಸತ್ಯಮಂಗಲ ಕೆರೆಗೆ ನೀರು ತುಂಬಿಸುವ ಯೋಜನೆಗಳನ್ನು 20 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
* ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-2ರ ನಾರಾಯಣಪುರ ಬಲದಂಡೆ ಕಾಲುವೆ ಯಿಂದ 95.00ರವರೆಗಿನ ಕಾಲುವೆ ಆಧುನೀಕರಣ ಯೋಜನೆಯನ್ನು 750 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
* ತುಂಗಭದ್ರಾ ಜಲಾಶಯದ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸುವ ಪರ್ಯಾಯ ಮಾರ್ಗೋಪಾಯವಾಗಿ ಪ್ರವಾಹ ಹರಿವು ನಾಲೆ ಮೂಲಕ ನವಿಲೆ ಹತ್ತಿರ ಸಮತೋಲನ ಜಲಾಶಯ ನಿರ್ಮಾಣ ಯೋಜನೆಯ ಕಾರ್ಯಸಾಧ್ಯತೆ ಅಧ್ಯಯನವನ್ನು ಹಾಗೂ ವಿಸ್ತತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು.
* ಜಗಳೂರು ತಾಲೂಕಿನ 46 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು 250 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
* ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಯ 33 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು 250 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
* ದಾವಣಗೆರೆ ತಾಲೂಕಿನ ಬೇತೂರು, ಮಾಗನಳ್ಳಿ, ರಾಂಪುರ, ಮೇಗಲಗೇರಿ ಮತ್ತು ಖಡಜ್ಜಿ ಗ್ರಾಮಗಳ ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು 135 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
* ಜಮಖಂಡಿ ತಾಲೂಕಿನ ಗಲಗಲಿ-ಮರೆಗುದ್ದಿ ಏತ ನೀರಾವರಿ ಯೋಜನೆಯನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
* 2018-19ನೇ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆಗೆ ಒಟ್ಟಾರೆಯಾಗಿ 15,998 ಕೋಟಿ ರೂ.ಗಳನ್ನು ಒದಗಿಸಲಾಗಿದೆ