ಉಪ್ಪಿನಂಗಡಿ: ಸಾಮೂಹಿಕ ಅತ್ಯಾಚಾರ ಪ್ರಕರಣ; ಇಬ್ಬರು ಆರೋಪಿಗಳು ಸೆರೆ
ಉಪ್ಪಿನಂಗಡಿ, ಫೆ. 17: ಯುವತಿಯೋರ್ವಳನ್ನು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಕ್ಕಡ ಗ್ರಾಮದವರಾದ ಧನಂಜಯ (26) ಹಾಗೂ ಕುಶಾಲಪ್ಪ (24) ಬಂಧಿತ ಆರೋಪಿಗಳು.
ಬೆಟ್ಟಂಪಾಡಿಯ ಯುವತಿಯೋರ್ವಳು ತನ್ನ ಅಕ್ಕನ ಮನೆಯಾದ ದೇಲಂಪಾಡಿಯಲ್ಲಿದ್ದ ಸಂದರ್ಭ ಫೆ.15ರಂದು ರಾತ್ರಿ 10ರ ಸುಮಾರಿಗೆ ಕುಶಾಲಪ್ಪನೊಂದಿಗೆ ಅಲ್ಲಿಗೆ ಆಗಮಿಸಿ ಜಾತ್ರೆಗೆ ಹೋಗುವ ಎಂದು ಬೈಕ್ನಲ್ಲಿ ಆಕೆಯನ್ನು ಕರೆದುಕೊಂಡು ಬಂದು ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದ ನೆಲ್ಯಾಡಿ ಸಮೀಪ ಇರುವ ಖಾಲಿ ಮನೆಯ ಶೆಡ್ವೊಂದರಲ್ಲಿ ಆಕೆಯನ್ನು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಳಿಕ ಆಕೆಯನ್ನು ತಡರಾತ್ರಿ 1 ಗಂಟೆಯ ಸುಮಾರಿಗೆ ಉಪ್ಪಿನಂಗಡಿ ಪೇಟೆಯಲ್ಲಿ ಬಿಟ್ಟು ಪರಾರಿಯಾಗಿದ್ದರು.
ಫೆ.16ರಂದು ಸಂಜೆ ಯುವತಿ ಉಪ್ಪಿನಂಗಡಿ ಪೊಲೀಸರಿಗೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ದೂರು ನೀಡಿದ್ದರು. ಆದರೆ ಈಕೆಗೆ ಅತ್ಯಾಚಾರ ನಡೆದ ಸ್ಥಳದ ಮಾಹಿತಿಯಾಗಲೀ, ಧನಂಜಯನೊಂದಿಗಿದ್ದ ಇನ್ನೊಬ್ಬನ ಪರಿಚಯವಾಗಲೀ ಇರಲಿಲ್ಲ. ಅಲ್ಲದೇ, ಧನಂಜಯನ ಫೋನಿನ ಮೂಲಕ ಪರಿಚಯವಿತ್ತೇ ಹೊರತು ಆತನ ವಿಳಾಸದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೂ ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಉಪ್ಪಿನಂಗಡಿ ಪೊಲೀಸರು ನಿನ್ನೆ ಸಂಜೆಯಿಂದಲೇ ಬಿರುಸಿನ ತನಿಖೆ ನಡೆಸಿ, ಇಂದು ಬೆಳಗ್ಗೆ ಆರೋಪಿಗಳನ್ನು ಕೊಕ್ಕಡ ಪೇಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವೀಕಾಂತೇ ಗೌಡ, ಹೆಚ್ಚುವರಿ ಎಸ್ಪಿ ಸುಜಿತ್ ಕುಮಾರ್, ಡಿವೈಎಸ್ಪಿ ಶ್ರೀನಿವಾಸ್ ಅವರ ಮಾರ್ಗದರ್ಶನ ದಂತೆ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಹರೀಶ್ಚಂದ್ರ, ಹರೀಶ, ಪ್ರವೀಣ್ ರೈ, ಜಗದೀಶ್, ಇರ್ಷಾದ್, ಸಚಿನ್, ಯೊಗೀಶ್ ಭಾಗವಹಿಸಿದ್ದರು.