ಕೊಳ್ಳೇಗಾಲ: ವಿದ್ಯುತ್ ತಂತಿ ಸ್ಪರ್ಶಿಸಿ ಚಿರತೆ ಸಾವು
ಕೊಳ್ಳೇಗಾಲ,ಫೆ.17: ಆಹಾರ ಅರಸಿ ಕಾಡಿನಿಂದ ಬಂದ ಚಿರತೆಯೊಂದು ವಿದ್ಯುತ್ ತಂತಿ ಸ್ಪರ್ಶಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ತಾಲೂಕಿನ ತಿಮ್ಮರಾಜೀಪುರದ ಗ್ರಾಮದ ಜರುಗಿದೆ.
ಮಧುವನಹಳ್ಳಿ ಬೀಟ್ನ ಕರುನ ಗುಡ್ಡೆಯಿಂದ ತಿಮ್ಮರಾಜೀಪುರ ಕಡೆಗೆ ಬಂದ ಚಿರತೆ ಗ್ರಾಮದ ಸುರೇಶ್ ಎಂಬಾತನಿಗೆ ಸೇರಿದ 171 ಬಿ ಸರ್ವೇ ನಂಬರ್ ನ 1.32 ಎಕರೆ ಜಮೀನಿನಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದೆ. ಜಮೀನಿನ ಮಾಲೀಕ ಸುರೇಶ್ನನ್ನು ಅರಣ್ಯ ಇಲಾಖೆ ಪೊಲೀಸರು ಬಂಧಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು, ಆರೋಪಿಯನ್ನು ಬಂಧಿಸಿ, ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ದೂರು ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು ಚಿರತೆಯ ಶವ ಪರೀಕ್ಷೆಗೆ ಕಳುಹಿಸಿದ್ದಾರೆ.
ಸ್ಥಳದಲ್ಲಿ ಅರಣ್ಯಾಧಿಕಾರಿ ಶಂಕರ್, ರುದ್ರಾಯ್ಯನ್, ನಾಗರಾಜು, ಆರ್.ಎಫ್.ಓಗಳಾದ ಧನು, ಮಹದೇವಸ್ವಾಮಿ, ಚೆಸ್ಕಾಂ ಎಇಇ ಲಿಂಗರಾಜು, ಪಶು ವೈದ್ಯಾಧಿಕಾರಿ ಶಿವಕುಮಾರ್ ಹಾಜರಿದ್ದರು.
Next Story