ಬೆಂಗಳೂರು: ಕ್ಯಾನ್ಸರ್ ಜಾಗೃತಿಗಾಗಿ ವಾಕಾಥಾನ್
ಬೆಂಗಳೂರು,ಫೆ.17: ಕ್ಯಾನ್ಸರ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ಯಾನ್ಸರ್ ಗುಣಮುಖರಾಗಿರುವವರು ಹಾಗೂ ನಾಗರಿಕರು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆ ಬಳಿ ವಾಕಥಾನ್ ನಡೆಸಿದರು.
ಶನಿವಾರ ಅಪೋಲೊ ಆಸ್ಪತೆವತಿಯಿಂದ ಆಯೋಜಿಸಿದ್ದ ವಾಕಥಾನ್ಗೆ ಬಿಗ್ಬಾಸ್-5ನೇ ಸರಣಿ ವಿಜೇತ ಚಂದನ್ ಶೆಟ್ಟಿ ಚಾಲನೆ ನೀಡಿದರು. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆ ಆವರಣದಿಂದ ವಾಕಥಾನ್ ಆರಂಭವಾಯಿತು. ಬಳಿಕ ಮೂರು ಕಿಲೋಮೀಟರ್ ಜಾಥಾ ನಡೆಸಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಯಿತು.
ವಾಕಥಾನ್ನಲ್ಲಿ ಪಾಲ್ಗೊಂಡಿದ್ದ ಹಿರಿಯ ಕ್ಯಾನ್ಸರ್ ಸಲಹಾ ತಜ್ಞ ಡಾ.ಸಿ.ಎನ್.ಪಾಟೀಲ್ ಮಾತನಾಡಿ, ಕ್ಯಾನ್ಸರ್ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವುದು ಅತ್ಯಂತ ಮಹತ್ವದ್ದು. ಭಾರತದಲ್ಲಿ ಕ್ಯಾನ್ಸರ್, ಸಾವಿಗೆ ಕಾರಣವಾಗುವ ಎರಡನೇ ಅತಿದೊಡ್ಡ ರೋಗವಾಗಿದೆ. ಹೀಗಾಗಿ, ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು. ವಿವಿಧ ವಯೋಮಾನದ 400ಕ್ಕೂ ಹೆಚ್ಚು ಮಂದಿ ನಾಗರಿಕರು, ವಿವಿಧ ಕ್ಷೇತ್ರಗಳ ಸಾಧಕರು, ಅಧಿಕಾರಿಗಳು ಈ ವಿಶಿಷ್ಟ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.