ಪ್ರೀತಿ ಇದ್ದರೆ ಭಕ್ತಿ, ಜ್ಞಾನ ಅನುಸರಣೆ: ಲಕ್ಷ್ಮಿಶ ತೋಳ್ಪಾಡಿ
ಉಡುಪಿ, ಫೆ. 17: ಎಚ್ಚರಿಕೆಯಿಂದ ಮಾತನಾಡುವುದಕ್ಕಿಂತ ಪರವಶತೆ ಯಿಂದ ಮಾತನಾಡುವುದು ಹೆಚ್ಚು ಮುಖ್ಯ. ದೇವರಿಗೆ ಜ್ಞಾನಕ್ಕಿಂತ ಭಕ್ತಿ ಹೆಚ್ಚು ಪ್ರಿಯ. ಪ್ರೀತಿ ಇದ್ದರೆ ಭಕ್ತಿ, ಜ್ಞಾನ, ಕರ್ಮ ಎಲ್ಲವೂ ಅನುಸರಿಸಿಕೊಂಡು ಬರುತ್ತದೆ ಎಂದು ಚಿಂತ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.
ನ್ಯೂಜೆರ್ಸಿಯ ಕನ್ನಡ ಸಾಹಿತ್ಯ ರಂಗ ಮತ್ತು ಬೆಂಗಳೂರಿನ ಅಭಿನವ ಪ್ರಕಾಶನದ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ಸಭಾಂಗಣದಲ್ಲಿ ಶನಿವಾರ ನಡೆದ ‘ಭಕ್ತಿಯ ವಿಭಕ್ತಿ’ ಸಂವಾದ ಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಜೀವನ ಪ್ರೀತಿಗೂ ಭಗವತ್ಪ್ರೀತಿಗೂ ವಿಶಿಷ್ಟ ಬೆಸುಗೆ ಇದೆ. ಭಕ್ತಿ ಎಂದರೆ ಹಾಗೆ, ಹೀಗೆ ಎನ್ನುವ ಭಕ್ತಿ ಸಿದ್ಧಾಂತ ದೇವರಿಗೆ ಪ್ರಿುವಲ್ಲ ಎಂದು ತೋಳ್ಪಾಡಿ ಹೇಳಿದರು. ಗುರು ಬನ್ನಂಜೆ ಸಂಜೀವ ಸುವರ್ಣ ಅವರು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಸಂಪಾದಿಸಿ ಅನುವಾದಿಸಿದ, ಎ.ಕೆ.ರಾಮಾನುಜನ್ ಅವರ ಭಕ್ತಿ ಕುರಿತ ಲೇಖನಗಳ ಅನುವಾದ ಭಕ್ತಿ ಕಂಪಿತ’ ಹಾಗೂ ಲಕ್ಷ್ಮೀಶ ತೋಳ್ಪಾಡಿ ಅವರ ಕೃತಿ ‘ಭಕ್ತಿಯ ನೆಪದಲ್ಲಿ’ ಕೃತಿಗಳನ್ನು ಬಿಡುಗಡೆಗೊಳಿಸಿದರು. ತೋಳ್ಪಾಡಿ ಅವರ ಕೃತಿ ಅವರು ಅಮೆರಿಕದ ಪ್ರವಾಸದಲ್ಲಿ ಮಾಡಿದ ಭಕ್ತಿ ಕುರಿತ ಉಪನ್ಯಾಸಗಳ ಸಂಗ್ರವಾಗಿದೆ.
‘ವಿಧುರ ಭಕ್ತಿ’ ಯಕ್ಷ ರೂಪಕವನ್ನು ಪ್ರಸ್ತುತ ಪಡಿಸುವ ಮೂಲಕ ಗುರು ಬನ್ನಂಜೆ ಸಂಜೀವ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ಯನ್ನು ಹಿರಿಯ ವಿದ್ವಾಂಸ ಕೆ.ಪಿ.ರಾವ್ ವಹಿಸಿದ್ದರು. ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷೆ ನಳಿನಿ ಮಯ್ಯ ಸ್ವಾಗತಿಸಿ, ಅಧ್ಯಕ್ಷ ಮೈ.ಶ್ರೀ. ನಟರಾಜ ‘ಅಮೆರಿಕದಲ್ಲಿ ಭಕ್ತಿ’ ಕುರಿತು ಮಾತನಾಡಿದರು. ಕಾತ್ಯಾಯಿನಿ ಕುಂಜಿಬೆಟ್ಟು ಕಾರ್ಯಕ್ರಮ ನಿರ್ವಹಿಸಿ, ಅಭಿನವ ಪ್ರಕಾಶನದ ರವಿಕುಮಾರ್ ಪ್ರಸ್ತಾವನೆಗೈದರು.