ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ಬಂಧನ ಖಂಡಿಸಿ ಫೆ.19 ರಂದು ಪ್ರತಿಭಟನೆ
ಬೆಂಗಳೂರು, ಫೆ.18: ಮ್ಯಾನ್ಹೋಲ್ ದುರಂತ ಹಾಗೂ ಬಹುಮಹಡಿ ಕಟ್ಟಡ ಕುಸಿತ ಪ್ರಕರಣ ಸಂಬಂದ ಬೃಹತ್ ಬೆಂಗಳೂರು ಪಾಲಿಕೆ(ಬಿಬಿಎಂಪಿ) ಅಧಿಕಾರಿಗಳನ್ನು ಬಂಧಿಸುತ್ತಿರುವ ಕ್ರಮ ಖಂಡಿಸಿ, ಬಿಬಿಎಂಪಿ ಅಧಿಕಾರಿಗಳು,ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರು ಫೆ.19 ರಂದು ಬೆಳಿಗ್ಗೆ 9ಗಂಟೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ.
ಮ್ಯಾನ್ಹೋಲ್ ದುರಂತ ಹಾಗೂ ಬಹು ಮಹಡಿ ಕಟ್ಟಡ ಕುಸಿತ ಪ್ರಕರಣ ಕ್ಕೆ ಸಂಬಂಧಿಸಿದಂತೆ ಮಹದೇವಪುರ ವಲಯ ಉಪ ಆರೋಗ್ಯಾಧಿಕಾರಿ ಡಾ.ಕಲ್ಪನ, ಹಿರಿಯ ಆರೋಗ್ಯಪರಿವೀಕ್ಷಕ ದೇವರಾಜ್ ಸೇರಿದಂತೆ ಕಾರ್ಯಪಾಲಕ ಇಂಜಿನಿಯರ್ ಮುನಿರೆಡ್ಡಿಯನ್ನು ಯಾವುದೇ ತನಿಖೆ ನಡೆಸದೆ ಬಂಧಿಸಿರುವುದನ್ನು ವಿರೋಧಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ಕ್ಷೇಮಾಭಿವೃದ್ಧಿ ಸಂಘ ಕರೆ ನೀಡಿದೆ.
ಯಾವುದೇ ಅನಾಹುತಗಳು ಸಂಭವಿಸಿದಾಗ ಅಧಿಕಾರಿಗಳು, ನೌಕರರ ಮೇಲೆ ತನಿಖೆ ನಡೆಸದೇ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ. ಇಂತಹ ಘಟನೆಗಳಿಂದ ಅಧಿಕರಿಗಳು, ನೌಕರರು ಒತ್ತಡದಿಂದ ಕೆಲಸ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಹೋರಾಟ ಅನಿವಾರ್ಯ. ದಾವಣಗೆರೆ, ಮೈಸೂರು, ಹುಬ್ಬಳ್ಳಿ, ಗುಲ್ಬರ್ಗಾ, ವಿಜಯಪುರ, ಬಳ್ಳಾರಿ, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆ ಕಚೇರಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಬೆಕೆಂದು ಸಂಘದ ಅಧ್ಯಕ್ಷ ಎ.ಅಮೃತ್ರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.