ಮಲಬಾರ್ನಲ್ಲಿ ಟಿಪ್ಪು
ಭಾಗ-2
ಟಿಪ್ಪು ತಂದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗಳಿಂದ, ಮಲಬಾರ್ನ ಜನಸಂಖ್ಯೆಯ ಐದನೇ ಒಂದು ಭಾಗದಷ್ಟಿದ್ದ ನಾಯರ್ಗಳುಮತ್ತು ನಂಬೂದಿರಿಗಳು ಹೆಚ್ಚು ತೊಂದರೆಗೊಳಗಾದರು. ಇವರ ಜಾತಿ ಹಾಗೂ ವರ್ಗಗಳ ಸವಲತ್ತುಗಳಿಗೆ ಹೊಡೆತ ಬಿದ್ದು ಸಾಮಾಜಿಕ ಉತ್ಪಾತ ಸಂಭವಿಸಿತು. ಇದರಿಂದಾಗಿಯೇ ಟಿಪ್ಪುವಿನ ವಿರುದ್ಧ ಧಾರ್ಮಿಕ ಮತಾಂಧತೆಯ ಆರೋಪಗಳು ಹುಟ್ಟಿಕೊಳ್ಳುವಂತಾಯಿತು
ಹೆದರ್ ಮಲಬಾರ್ಗೆ ಬಂದಾಗ ಇಂಗ್ಲಿಷರು, ಡಚ್ಚರು, ಫ್ರೆಂಚರು ಇತ್ಯಾದಿ ಯುರೋಪಿಯನ್ ಶಕ್ತಿಗಳು ಸ್ಥಳೀಯ ವ್ಯವಹಾರಗಳ ಹಲವು ಮಟ್ಟಗಳಲ್ಲಿ ಅದಾಗಲೇ ತಮ್ಮನ್ನು ತೊಡಗಿಸಿಕೊಂಡಿದ್ದರು. ದ್ವಿತೀಯ ಆಂಗ್ಲೊ-ಮೈಸೂರು ಯುದ್ಧದ ವೇಳೆ(1780-1784) ಟಿಪ್ಪು ಮಲಬಾರ್ನಲ್ಲಿ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ. ಆತ ಇನ್ನೇನು ಜಯಗಳಿಸುತ್ತಾನೆ ಎನ್ನುವಷ್ಟರಲ್ಲಿ ಹೈದರ್ನ ಸಾವಿನ ಸುದ್ದಿ ಬಂತು. ಕೂಡಲೇ ಆತ ಶ್ರೀರಂಗ ಪಟ್ಟಣಕ್ಕೆ ಮರಳಿದನಾದರೂ 1784ರ ಮೈಸೂರು ಒಪ್ಪಂದದ ಪ್ರಕಾರ ಮಲಬಾರ್ನ ಅವನ ಪ್ರದೇಶವನ್ನು ಅವನಿಗೆ ಮರಳಿಸಲಾಯಿತು. ಮೂರನೆಯ ಆಂಗ್ಲೊ-ಮೈಸೂರು ಯುದ್ಧದವರೆಗೆ(1792) ಮಲಬಾರ್ ಟಿಪ್ಪುವಿನ ಆಡಳಿತದ ಭಾಗವೇ ಆಗಿತ್ತು.
ಮೈಸೂರು ಆಡಳಿತದ ಪರಿಣಾಮ ಮಲಬಾರನ್ನು ಟಿಪ್ಪು ಕೇವಲ 6 ವರ್ಷಗಳ ಕಾಲ ನೇರವಾಗಿ ಆಳಿದ್ದನಾದರೂ, ಹೈದರ್ ಮತ್ತು ಟಿಪ್ಪು ಮಲಬಾರ್ ಸಮಾಜದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರಿದರು. ಅಲ್ಲಿಯ ಚಿಕ್ಕಪುಟ್ಟ ಪ್ರಾಂತಗಳನ್ನು ಒಗ್ಗೂಡಿಸಿ ಕೇಂದ್ರೀಕೃತ ಆಡಳಿತ ತಂದು ತೆರಿಗೆ ಸುಧಾರಣೆ, ರಸ್ತೆಗಳ ನಿರ್ಮಾಣ, ವ್ಯಾಪಾರೋದ್ಯಮದಲ್ಲಿ ಅಭಿವೃದ್ಧಿ ಇತ್ಯಾದಿಗಳನ್ನು ಸಾಧಿಸಿದರು.
ಮಲಬಾರ್ ಪ್ರದೇಶದಲ್ಲಿ ಹೈದರ್ ಮತ್ತು ಟಿಪ್ಪುವಿನಿಂದಾದ ಅತ್ಯಂತ ದೊಡ್ಡ ಪರಿಣಾಮವೆಂದರೆ ಭೂ ಆಡಳಿತದಲ್ಲಿ ಆದ ಸುಧಾರಣೆ.
ಈ ಕ್ಷೇತ್ರದಲ್ಲಿ ಅವರು ಪ್ರಭಾವೀ ಜಾತಿಗಳ ಕೈಯಲ್ಲಿದ್ದ ಭೂಮಿಯ ಒಡೆತನವನ್ನು ಮಾಪಿಳ್ಳೆಗಳ (ಕೆಳಜಾತಿಯ ಹಿಂದುಗಳ) ಕೈಗೆ ಸಿಗುವಂತೆ ಮಾಡಿದರು. ಹಾಗೆಯೇ ದೇವಾಲಯಗಳ ಜಮೀನಿಗೆ ತೆರಿಗೆ ವಿಧಿಸದಂತೆ ನೋಡಿಕೊಂಡರು. ಜಮೀನುಗಳ ಮಾಲಕರಾಗಿದ್ದ ನಂಬೂದಿರಿಗಳು ಮತ್ತು ನಾಯರ್ಗಳು ಮಲಬಾರ್ನಿಂದ ತಿರುವಾಂಕೂರಿಗೆ ಪಲಾಯನಗೈದದ್ದರಿಂದ ಮಾಪಿಳ್ಳೆಗಳಿಗೆ ಅನುಕೂಲವಾಯಿತು. ಪ್ರಬಲ ಜಾತಿಗಳ ಕೈಯಿಂದ ಜಮೀನು ತಪ್ಪಿಹೋದಾಗ ಅವರು ಟಿಪ್ಪುವಿನ ಮೇಲೆ ಧಾರ್ಮಿಕ ಮತಾಂಧತೆಯ ಆರೋಪ ಹೊರಿಸಿದರು.
ಟಿಪ್ಪು ಓರ್ವ ಸಮಾಜ ಸುಧಾರಕನಾಗಿಯೂ ಕೆಲಸ ಮಾಡಿದ:
ನಾಯರ್ ಸಮಾಜದ ಕೆಲವು ಸಾಂಪ್ರದಾಯಿಕ ಆಚರಣೆಗಳನ್ನು ಬದಲಾಯಿಸಲು ಪ್ರಯತ್ನಿಸಿದ. ಉದಾಹರಣೆಗೆ, ನಾಯರ್ ಮಹಿಳೆಯರು ಹಲವು ಪುರುಷರೊಂದಿಗೆ, ವಿವಾಹವಾಗದೆ ಸಂಬಂಧವಿಟ್ಟುಕೊಳ್ಳುತ್ತಾರೆಂದು ತಿಳಿದಾಗ ಟಿಪ್ಪುವಿಗೆ ಆಶ್ಚರ್ಯವಾಯಿತು. ಕೆಳ ಜಾತಿಯ ಹೆಂಗಸರು ತಮ್ಮ ಎದೆಯನ್ನು ಮುಚ್ಚಿಕೊಳ್ಳುವಂತಿಲ್ಲ ಎಂಬ ಆಚರಣೆ ಆತನಿಗೆ ಅಸಹ್ಯವೆನಿಸಿತು. ಟಿಪ್ಪು ಈ ಆಚರಣೆಗಳನ್ನು ನಿಷೇಧಿಸಿದ. ಇದನ್ನು ವಿರೋಧಿಸಿದ ನಾಯರ್ಗಳು ಇದು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಹಕ್ಕುಗಳ ಮೇಲೆ ನಡೆದ ದಾಳಿ ಎಂದು ಬೊಬ್ಬೆ ಹೊಡೆದರು.
ಹೀಗೆ, ಟಿಪ್ಪು ತಂದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗಳಿಂದ, ಮಲಬಾರ್ನ ಜನಸಂಖ್ಯೆಯ ಐದನೇ ಒಂದು ಭಾಗದಷ್ಟಿದ್ದ ನಾಯರ್ಗಳು ಮತ್ತು ನಂಬೂದಿರಿಗಳು ಹೆಚ್ಚು ತೊಂದರೆಗೊಳಗಾದರು. ಇವರ ಜಾತಿ ಹಾಗೂ ವರ್ಗಗಳ ಸವಲತ್ತುಗಳಿಗೆ ಹೊಡೆತ ಬಿದ್ದು ಸಾಮಾಜಿಕ ಉತ್ಪಾತ ಸಂಭವಿಸಿತು. ಇದರಿಂದಾಗಿಯೇ ಟಿಪ್ಪುವಿನ ವಿರುದ್ಧ ಧಾರ್ಮಿಕ ಮತಾಂಧತೆಯ ಆರೋಪಗಳು ಹುಟ್ಟಿಕೊಳ್ಳುವಂತಾಯಿತು ಎನ್ನುತ್ತಾರೆ ಲೇಖಕ ಸಿ.ಕೆ. ಕರೀಮ್.
ಸಮಸ್ಯಾತ್ಮಕ ಮೂಲಗಳು.
1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ನಡೆದ ಅಂತಿಮ ದಾಳಿಯಲ್ಲಿ ಭಾಗವಹಿಸಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಓರ್ವ ಅಧಿಕಾರಿ ಮಾರ್ಕ್ ವಿಲ್ಕ್ಸ್ ಬರೆದಿರುವಂತೆ, ಟಿಪ್ಪು ನಾಯರ್ಗಳಿಗೆ ತಮ್ಮ ಜಾತೀಯ ಆಚರಣೆಗಳನ್ನು ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದ: ತನ್ನ ಎಚ್ಚರಿಕೆಯನ್ನು, ಆಜ್ಞೆಗಳನ್ನು ಪಾಲಿಸದೆ ಇದ್ದಲ್ಲಿ ತಾನು ಅವರನ್ನೆಲ್ಲ ಶ್ರೀರಂಗಪಟ್ಟಣಕ್ಕೆ ಕೊಂಡೊಯ್ದು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳಿಸುವುದಾಗಿ ಹೇಳಿದ್ದ. ಇದನ್ನೇ ಆಧಾರವಾಗಿಟ್ಟುಕೊಂಡು, ಮಲಬಾರ್ನ ಕಲೆಕ್ಟರ್ ಆಗಿದ್ದ ವಿಲಿಯಂ ಲೋಗನ್ನಂತಹ ಲೇಖಕರು ಟಿಪ್ಪುವಿನ ವಿರುದ್ಧ ಮತಾಂಧತೆಯ ಆರೋಪಗಳನ್ನು ಮುಂದುವರಿಸಿದರು.
ಹೀಗೆ, ಟಿಪ್ಪುವಿನ ಚಾರಿತ್ರಹನನ ಮಾಡುವ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅವುಗಳಲ್ಲಿ ಎರಡು ರೀತಿಯ ದಾಖಲೆಗಳು ಕಂಡುಬರುತ್ತವೆ. ಮೊದಲನೆಯದಾಗಿ ಟಿಪ್ಪುವಿನಲ್ಲಿ ತಮ್ಮ ಮುಖ್ಯ ಪ್ರತಿಸ್ಪರ್ಧಿಯನ್ನು, ಖಳನಾಯಕನನ್ನು ಕಂಡ ಬ್ರಿಟಿಷ್ ಲೇಖಕರ ಬರವಣಿಗೆಗಳು ಮತ್ತು ಎರಡನೆಯದಾಗಿ, ಮೈಸೂರು ಅರಸರ ಆಡಳಿತದ ಕಾಲದಲ್ಲಿ ಗಣನೀಯ ಸಂಖ್ಯೆಯ ಸವಲತ್ತುಗಳನ್ನು ಕಳೆದುಕೊಂಡ ಸ್ಥಳೀಯ ಮೇಲ್ಜಾತಿಯ ಹಿಂದೂಗಳ ಬರವಣಿಗೆಗಳು.
ಇದೇ ವೇಳೆ, ಯುವ ಇತಿಹಾಸಕಾರರಾಗಿರುವ ಎಂ.ಪಿ. ಮುಜೀಬುರೆಹಮಾನ್, ಅಭಿಲಾಷ್ ಮಲಯಿಲ್ರಂತಹ ಲೇಖಕರು, ವಿದ್ವಾಂಸರು ವಸ್ತುನಿಷ್ಠವಾಗಿ ಮಲಬಾರ್ನ ಇತಿಹಾಸದಲ್ಲಿ ಮೈಸೂರಿನ ಅರಸರ ಪಾತ್ರವನ್ನು ವಿಶ್ಲೇಷಿಸಿದ್ದಾರೆ: ‘‘ವಸಾಹತುಶಾಹಿ ಮತ್ತು ರಾಷ್ಟ್ರೀಯವಾದಿ ಇತಿಹಾಸಕಾರರು-ಇಬ್ಬರು ಕೂಡ ಮೈಸೂರಿನ ಮಧ್ಯಂತರದ ರಾಜಕೀಯ ಅಥವಾ ಆರ್ಥಿಕ ಮುಖಗಳನ್ನು ಮರೆಮಾಚಿ ಅದರ ಧಾರ್ಮಿಕ ಮುಖಗಳನ್ನು ಮಾತ್ರ ದೊಡ್ಡದು ಮಾಡಿ ಬರೆದಿದ್ದಾರೆ. ಉದಾಹರಣೆಗೆ, ಈ ಇತಿಹಾಸಕಾರರು, ಟಿಪ್ಪು ಮಲಬಾರನ್ನು ಆಕ್ರಮಿಸಿ, ದಾಳಿ ನಡೆಸಿ ಸಾವಿರಾರು ಮಂದಿ ಸ್ಥಳೀಯ ಮುಸ್ಲಿಮೇತರರನ್ನು ನೇಣಿಗೆ ಹಾಕಿಸಿದ ಎಂದು ಹೇಳುತ್ತಾರೆ. ಆದರೆ, ವಸಾಹತುಶಾಹಿ ಕಥಾನಕಗಳಲ್ಲದೆ ಇಂತಹ ಆಪಾದನೆಗಳಿಗೆ ಬೇರೆ ಯಾವುದೇ ಪುರಾವೆಗಳಿಲ್ಲ’’.
ಇತಿಹಾಸಕಾರ ಎಸ್. ರಾಜೇಯ ಹಾಗೂ ‘ಮೈಸೂರು ಆಡಳಿತ-250 ವರ್ಷಗಳು’ (2017) ಪುಸ್ತಕದ ಲೇಖಕ ಹೇಳುತ್ತಾರೆ: ‘‘ಹೈದರ್ ಮತ್ತು ಟಿಪ್ಪು ದೇವಾಲಯಗಳನ್ನು ಕೊಳ್ಳೆ ಹೊಡೆದ ಉದಾಹರಣೆಗಳಿವೆ. ಆದರೆ, ಅದಕ್ಕೆ ಕಾರಣ ಮಲಬಾರಿನಲ್ಲಿ ಸಂಪತ್ತನ್ನು ದೇವಸ್ಥಾನಗಳಲ್ಲಿ ಕೂಡಿಡಲಾಗಿತ್ತು ಎನ್ನುವುದಲ್ಲದೆ ಬೇರೆ ಯಾವ ಕಾರಣವೂ ಅಲ್ಲ. ಆತ ಹಾಗೆ ಮಾಡುವಾಗ ರಾಷ್ಟ್ರ ಅಥವಾ ಧರ್ಮದ ಪರಿಕಲ್ಪನೆ(ಈಗ ಇರುವ ಹಾಗೆ) ಇರಲೇ ಇಲ್ಲ’’.
ಮಂಜೇರಿಯ ಅಥನ್ ಗುರುಕ್ಕಲ್ನಂತಹ ಮಾಪಿಳ್ಳೆಗಳು ಕೂಡ 1788-89ರಲ್ಲಿ ಟಿಪ್ಪುವಿನ ವಿರುದ್ಧ ದಂಗೆ ಎದ್ದರು ಮತ್ತು ಆ ದಂಗೆಯನ್ನು ಟಿಪ್ಪು, ಜಮೊರಿನ್ ಕುಟುಂಬಕ್ಕೆ ಸೇರಿದ್ದ ರವಿವರ್ಮನ ಸಹಾಯದಿಂದ ಹತ್ತಿಕ್ಕಿದ ಎಂಬುದನ್ನು ನಾವು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ.
ಟಿಪ್ಪು ಮಲಬಾರ್ನಲ್ಲಿ ಒಂದು ದೀರ್ಘಕಾಲಿಕ ನೆಲೆಯನ್ನು ಸ್ಥಾಪಿಸಲು ಉದ್ದೇಶಿಸಿ, ಕೋಟೆಯೊಂದನ್ನು(ಫರೂಕಾಬಾದ್) ಕಟ್ಟಲು ಆರಂಭಿಸಿದ್ದನಾದರೂ, ಅದನ್ನು ಪೂರ್ಣಗೊಳಿಸುವ ಮೊದಲೇ ಟಿಪ್ಪುವಿನ ಸೇನೆಯನ್ನು ಅಲ್ಲಿಂದ ಹೊರದಬ್ಬಲಾಯಿತಾದ್ದರಿಂದ ಆ ಕೋಟೆ ಅಪೂರ್ಣವಾಗಿಯೇ ಉಳಿಯಿತು. ತನ್ನ ಮಲಬಾರ್ ರಾಜ್ಯಕ್ಕೆ ಫರೂಕಾಬಾದನ್ನು ರಾಜಧಾನಿಯಾಗಿ ಮಾಡುವುದು ಟಿಪ್ಪುವಿನ ಯೋಜನೆಯಾಗಿತ್ತು.
ಬಳಿಕ, ಸ್ವಲ್ಪವೇ ಸಮಯದಲ್ಲಿ ಟಿಪ್ಪು ಮಲಬಾರನ್ನು ಬಿಟ್ಟುಕೊಡಬೇಕಾಯಿತು ಮತ್ತು ಈಸ್ಟ್ ಇಂಡಿಯಾ ಕಂಪೆನಿಯ ಮಹಾವಿಸ್ತರಣೆಯ ವಿರುದ್ಧ ಒಂದು ರಕ್ಷಣೆಯಾಗಿ ನಿಂತಿದ್ದ ಆತ 1799ರಲ್ಲಿ ಯುದ್ಧರಂಗದಲ್ಲಿ ಕೊಲ್ಲಲ್ಪಟ್ಟ.
ಕೃಪೆ: frontline.in