ಹೊಸಂಗಡಿ: ತಂಡದಿಂದ ಮೂವರ ಮೇಲೆ ತಲವಾರು ದಾಳಿ
5 ದ್ವಿಚಕ್ರ ವಾಹನದಲ್ಲಿ ಬಂದ ತಂಡ
ಹೊಸಂಗಡಿ, ಫೆ. 20: ಸುಮಾರು 15 ಮಂದಿಯ ತಂಡವೊಂದು ಮೂವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ಹೊಸಂಗಡಿ ಜಂಕ್ಷನ್ ನಲ್ಲಿ ನಡೆದಿದೆ.
ಘಟನೆಯಲ್ಲಿ ಹೊಸಂಗಡಿ ನಿವಾಸಿ ನಝೀರ್ (37), ಪೋಸೋಟ್ ನಿವಾಸಿ ಆತಿಫ್ (20) ಮತ್ತು ಮಂಜೇಶ್ವರ ಗಾಂಧಿನಗರ ನಿವಾಸಿ ಮುಹಮ್ಮದ್ ಅಶ್ರಫ್ (33) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಝೀರ್ ಅವರು ಹೊಸಂಗಡಿಯಲ್ಲಿ ಜ್ಯೂಸ್ ಅಂಗಡಿ ಹೊಂದಿದ್ದು, ಅಲ್ಲಿ ಆತಿಫ್ ಕೆಲಸ ಮಾಡುತ್ತಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಅಂಗಡಿ ಬಂದ್ ಮಾಡುವ ಸಂದರ್ಭ 5 ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ತಂಡ ಅವರ ಮೇಲೆ ತಲವಾರು ದಾಳಿ ನಡೆಸಿದೆ. ಈ ಸಂದರ್ಭ ಅಂಗಡಿಗೆ ಜ್ಯೂಸ್ ಕುಡಿಯಲು ಬಂದಿದ್ದ ಅಶ್ರಫ್ ಮೇಲೂ ಗುಂಪು ತಲವಾರು ದಾಳಿ ನಡೆಸಿದೆ.
ಘಟನೆಯಲ್ಲಿ ಆತಿಫ್ ರಿಗೆ ಕುತ್ತಿಗೆಗೆ ಹಲ್ಲೆ ಮಾಡುವ ಸಂದರ್ಭ ಅವರು ಕೈಯೊಡ್ಡಿದ ಪರಿಣಾಮ ಕೈಗೆ ತಲವಾರು ದಾಳಿಯಾಗಿದೆ. ನಝೀರ್ ರಿಗೆ ಕುತ್ತಿಗೆಗೆ ಏಟು, ಅಶ್ರಫ್ ರಿಗೆ ತಲೆಗೆ ಗಾಯವಾಗಿದೆ.
ದಾಳಿ ನಡೆಸಿದವರು ಗಾಂಜಾ ವ್ಯಸನಿಗಳು ಮತ್ತು ಗಾಂಜಾ ವ್ಯವಹಾರ ನಡೆಸುತ್ತಿದ್ದವರು ಎಂದು ಆರೋಪಿಸಲಾಗಿದೆ.
ಇದೇ ಗಾಂಜಾ ವ್ಯವಹಾರದ ಬಗ್ಗೆ ಕೆಲವು ಸ್ಥಳೀಯ ಯುವಕರು ಮಂಜೇಶ್ವರ ಠಾಣೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಈ ಗುಂಪಿನ ಕೆಲವರು ನನ್ನನ್ನು ಬರಲೆಂದು ಕರೆಯುತ್ತಿದ್ದರು. ಈ ಗಾಂಜಾ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನಝೀರ್ ತಿಳಿಸಿದ್ದಾರೆ.
ಮಂಜೇಶ್ವರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವುದಾಗಿ ನಝೀರ್ ತಿಳಿಸಿದ್ದಾರೆ.