ನ್ಯಾ.ಲೋಯಾ ಸಾವು ಪ್ರಕರಣಕ್ಕೆ ಸಂಬಂಧಿಸಿ ಅಮಿತ್ ಶಾ ವಿಚಾರಣೆ ಯಾವಾಗ ನಡೆಸುತ್ತೀರಿ?
ತನ್ನ ನಿವಾಸದ ಮೇಲಿನ ಪೊಲೀಸ್ ದಾಳಿಗೆ ಸಂಬಂಧಿಸಿ ಕೇಜ್ರಿವಾಲ್ ಪ್ರಶ್ನೆ
ಹೊಸದಿಲ್ಲಿ, ಫೆ.23: ದಿಲ್ಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ರಿಗೆ ಆಪ್ ಶಾಸಕರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಾಕ್ಷಿ ಸಂಗ್ರಹಿಸಲು ಪೊಲೀಸರು ತಂಡ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಗೆ ಆಗಮಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ತನಿಖಾ ಸಂಸ್ಥೆಗಳು ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ನ್ಯಾಯಾಧೀಶ ಬಿ.ಎಚ್. ಲೋಯಾರ ಸಾವಿನ ತನಿಖೆಗೂ ಸಮಾನ ಆಸಕ್ತಿ ತೋರಿಸಬೇಕು ಎಂದಿದ್ದಾರೆ.
ತನ್ನ ಮನೆ ಮೇಲೆ ನಡೆದ ದಾಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಅವರು, “ಪೊಲೀಸರ ದೊಡ್ಡ ತಂಡವನ್ನೇ ನನ್ನ ಮನೆಗೆ ಕಳುಹಿಸಲಾಗಿದೆ. ಕಪಾಳಮೋಕ್ಷದ ಆರೋಪಕ್ಕಾಗಿ ಮುಖ್ಯಮಂತ್ರಿಯ ಇಡೀ ಮನೆಯನ್ನೇ ಪರಿಶೀಲಿಸಲಾಗುತ್ತಿದೆ. ನ್ಯಾ.ಲೋಯಾ ಸಾವು ಪ್ರಕರಣಕ್ಕೆ ಸಂಬಂಧಿಸಿ ಅಮಿತ್ ಶಾ ಅವರ ವಿಚಾರಣೆ ನಡೆಸುತ್ತೀರಿ” ಎಂದು ಕೇಜ್ರಿವಾಲ್ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.
“ದಿಲ್ಲಿ ಮುಖ್ಯ ಕಾರ್ಯದರ್ಶಿಯ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿ ಸಿಸಿಟಿವಿ ಫೂಟೇಜ್ ಸಹಿತ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಲು ಪೊಲೀಸ್ ತಂಡವನ್ನು ಮುಖ್ಯಮಂತ್ರಿಯ ನಿವಾಸಕ್ಕೆ ಕಳುಹಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ಹರೀಂದರ್ ಸಿಂಗ್ ಹೇಳಿದ್ದಾರೆ.