ಲೋಕಾಯುಕ್ತರ ಹತ್ಯೆ ಯತ್ನ: ಉನ್ನತ ತನಿಖೆ ಅತ್ಯಗತ್ಯ
ತನ್ನ ಕಾರ್ಯನಿರ್ವಹಣೆಗಾಗಿ ಕರ್ನಾಟಕದ ಲೋಕಾಯುಕ್ತ ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ. ದೇಶದ ಕೆಲವೇ ಕೆಲವು ರಾಜ್ಯಗಳಲ್ಲಿ ಲೋಕಾಯುಕ್ತ ಅಸ್ತಿತ್ವದಲ್ಲಿದೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಲೋಕಾಯುಕ್ತ ಸಂಸ್ಥೆ ಉಳಿದ ರಾಜ್ಯಗಳಿಗಿಂತ ಭಿನ್ನವಾಗಿ ಹೆಚ್ಚು ಚಟುವಟಿಕೆಯಲ್ಲಿದೆ. ಲೋಕಾಯುಕ್ತ ವೆಂಕಟಾಚಲಯ್ಯ ಅವರ ಆಗಮನದ ಬಳಿಕ ಈ ಹುದ್ದೆ ಮಾಧ್ಯಮಗಳಲ್ಲಿ ಸದ್ದು ಮಾಡತೊಡಗಿತು. ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಯಿತೋ, ಇಲ್ಲವೋ ಆದರೆ ಮಾಧ್ಯಮಗಳಲ್ಲಿ ಭ್ರಷ್ಟ ಅಧಿಕಾರಿಗಳ ಮಾನ ಹರಾಜಾಗತೊಡಗಿದವು. ಅನಿರೀಕ್ಷಿತವಾಗಿ ಲೋಕಾಯುಕ್ತರು ಸರಕಾರ ಕಚೇರಿಗಳಿಗೆ ದಾಳಿ ಮಾಡಿ, ಅಲ್ಲಿನ ಅಧಿಕಾರಿಗಳ ಬೆವರಿಳಿಸುವುದು ಮಾಧ್ಯಮಗಳಲ್ಲಿ ಮುಖಪುಟದ ಸುದ್ದಿಯಾಗ ತೊಡಗಿದವು. ಇದೇ ಸಂದರ್ಭದಲ್ಲಿ ವೆಂಕಟಾಚಲಯ್ಯ ಅವರನ್ನು ‘ಪೇಪರ್ ಟೈಗರ್’ ಎಂದು ವ್ಯಂಗ್ಯವಾಡಿದವರೂ ಇದ್ದಾರೆ. ಅದೇನೇ ಇರಲಿ, ಜನಸಾಮಾನ್ಯರಿಗೆ ಲೋಕಾಯುಕ್ತವೆನ್ನುವ ಸಂಸ್ಥೆಯೊಂದು ಅಸ್ತಿತ್ವದಲ್ಲಿದೆ ಎನ್ನುವುದು ಗೊತ್ತಾಗಿದ್ದು ಇವರ ಅಧಿಕಾರಾವಧಿಯಲ್ಲಿ.
ಸಂತೋಷ್ ಹೆಗ್ಡೆಯ ಅಧಿಕಾರಾವಧಿಯಲ್ಲಿ ಲೋಕಾಯುಕ್ತ ರಾಜಕೀಯ ವಲಯದೊಳಗೆ ಸಂಚಲನವನ್ನು ಸೃಷ್ಟಿಸಿತ್ತು. ಆರಂಭದಲ್ಲಿ ತಣ್ಣಗಿದ್ದ ಸಂತೋಷ್ ಹೆಗ್ಡೆ, ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಅಕ್ರಮ ಗಣಿಗಾರಿಕೆಯ ಹುತ್ತಕ್ಕೆ ಕೈ ಹಾಕಿದರು. ಭಾರೀ ಮಿಕಗಳನ್ನು ಹಿಡಿದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರು. ರಾಜ್ಯದ ಮುಖ್ಯಮಂತ್ರಿಯೊಬ್ಬರ ರಾಜೀನಾಮೆಗೂ ಕಾರಣರಾದರು. ಬಿಜೆಪಿಯ ಒಂದು ಗುಂಪು ಸಂತೋಷ್ ಹೆಗ್ಡೆಯನ್ನು ಬಳಸಿಕೊಂಡು ಯಡಿಯೂರಪ್ಪರನ್ನು ಗದ್ದುಗೆಯಿಂದ ಕೆಳಗಿಳಿಸುವಂತೆ ಮಾಡಿತು ಎನ್ನುವ ಆರೋಪವೂ ಇದೆ. ಗಣಿ ರೆಡ್ಡಿಗಳಿಗೆ ಮೂಗುದಾರ ಹಾಕಲು, ಅಡ್ವಾಣಿಯೇ ಸಂತೋಷ್ ಹೆಗ್ಡೆಯನ್ನು ರಾಜ್ಯಕ್ಕೆ ಕಳುಹಿಸಿದರು ಎನ್ನುವ ಮಾತೂ ಇದೆ. ಅದೇನೇ ಇರಲಿ, ಆವರೆಗೆ ಅಧಿಕಾರ ವರ್ಗವಷ್ಟೇ ಹೆದರುತ್ತಿದ್ದ ಲೋಕಾಯುಕ್ತ, ರಾಜಕಾರಣಿಗಳ ಎದೆಯೊಳಗೂ ಕಂಪನವನ್ನು ಹುಟ್ಟಿಸಿತು. ಯಾವಾಗ ಲೋಕಾಯುಕ್ತ ರಾಜಕಾರಣಿಗಳ ಮೇಲೂ ದಾಳಿ ಮಾಡ ತೊಡಗಿತೋ ಅಲ್ಲಿಂದ ರಾಜಕಾರಣಿಗಳು ಪಕ್ಷ ಭೇದ ಮರೆತು ಲೋಕಾಯುಕ್ತದ ಮೇಲೆ ಮುಗಿಬಿದ್ದರು. ಬಹುಶಃ ಸಂತೋಷ್ ಹೆಗ್ಡೆಯ ಬಳಿಕ ಲೋಕಾಯುಕ್ತ ಸ್ಥಾನವನ್ನು ತುಂಬಲು ನ್ಯಾಯಾಧೀಶರು ಹಿಂದೇಟು ಹಾಕಲಾರಂಭಿಸಿದ್ದು ಇದೇ ಕಾರಣಕ್ಕೆ ಇರಬೇಕು.
ಅಧಿಕಾರಕ್ಕೇರಿದ ನ್ಯಾಯಮೂರ್ತಿಗಳ ಇತಿಹಾಸವನ್ನು ಕೆದಕಿ, ಅವರು ಮಾಡಿರುವ ಭ್ರಷ್ಟಾಚಾರವನ್ನು ಹುಡುಕಿ ತೆಗೆದು ರಾಜಕಾರಣಿಗಳು ಮಾಧ್ಯಮಗಳಲ್ಲಿ ಸುದ್ದಿ ಮಾಡುವುದಕ್ಕೆ ಶುರು ಹಚ್ಚಿದರು. ಇದರಿಂದ ಲೋಕಾಯುಕ್ತ ಸ್ಥಾನವನ್ನು ತುಂಬಲು ನ್ಯಾಯಾಧೀಶರು ಹಿಂಜರಿಯಬೇಕಾಯಿತು. ಕೊನೆಗೂ ಸುದೀರ್ಘ ಅವಧಿಯ ಬಳಿಕ ಲೋಕಾಯುಕ್ತರಾಗಿ ಪಿ. ವಿಶ್ವನಾಥ ಶೆಟ್ಟಿಯವರು ಅಧಿಕಾರ ಸ್ವೀಕರಿಸಿದರು. ಆದರೆ ಇದೀಗ ಭಿನ್ನವಾದ ಕಾರಣಕ್ಕೆ ಅವರು ಸುದ್ದಿಯಲ್ಲಿದ್ದಾರೆ. ಲೋಕಾಯುಕ್ತ ಕಚೇರಿಗೆ ನುಗ್ಗಿದ ಆರೋಪಿಯೊಬ್ಬ ವಿಶ್ವನಾಥ ಶೆಟ್ಟಿಯವರ ಮೇಲೆ ದಾಳಿ ನಡೆಸಿ, ಕೊಲೆಗೆ ಯತ್ನಿಸಿದ್ದಾನೆ. ಆಯುಕ್ತರಿಗೆ ದುಷ್ಕರ್ಮಿ ಹಲವು ಬಾರಿ ಇರಿದಿರುವುದರಿಂದ ಅವರ ಸ್ಥಿತಿ ಗಂಭೀರವಾಗಿದೆ. ಬಹುಶಃ ಕರ್ನಾಟಕದ ಲೋಕಾಯುಕ್ತ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂತಹದೊಂದು ಆಘಾತಕಾರಿ ಕೃತ್ಯ ನಡೆದಿದೆ. ಆರೋಪಿ ತುಮಕೂರು ಜಿಲ್ಲೆಯವನು ಎಂದು ಗುರುತಿಸಲಾಗಿದೆ. ಈತ ಮೂಲತಃ ರಾಜಸ್ತಾನದವನೆನ್ನಲಾಗಿದ್ದು, ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ. ಡಿಡಿಪಿಐ ಮತ್ತು ಕೆಲವು ಸರಕಾರಿ ಅಧಿಕಾರಿಗಳ ಮೇಲೆ ಈತ ದೂರು ಸಲ್ಲಿಸಿದ್ದ. ಆದರೆ ಆ ದೂರನ್ನು ಲೋಕಾಯುಕ್ತರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬ ಕಾರಣಕ್ಕೆ ಈತ ಕೊಲೆಗೆ ಯತ್ನಿಸಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಕಳೆದ ವರ್ಷ ಆರೋಪಿ ಲೋಕಾಯುಕ್ತರಿಗೆ ದೂರನ್ನು ಸಲ್ಲಿಸಿದ್ದ. ಆದರೆ ಸೂಕ್ತವಾದ ಸಾಕ್ಷಾಧಾರಗಳಿಲ್ಲದ ಕಾರಣ ದೂರು ವಜಾಗೊಂಡಿತ್ತು ಎನ್ನಲಾಗಿದೆ.
ದೂರುಗಳನ್ನು ನೀಡಿದಾಕ್ಷಣ ಲೋಕಾಯುಕ್ತರು ಕ್ರಮ ಕೈಗೊಳ್ಳಬೇಕು ಎಂದೇನೂ ಇಲ್ಲ. ದೂರು ನೀಡಿದವನು ಗುತ್ತಿಗೆದಾರ. ಆತ ಪೂರೈಸಿದ ಪೀಠೋಪಕರಣಗಳು ಕಳಪೆಯಾಗಿದ್ದುದರಿಂದ ಶಿಕ್ಷಣ ಇಲಾಖೆ ಡಿಡಿಪಿಐ ಟೆಂಡರ್ ರದ್ದು ಪಡಿಸಿದ್ದರು. ಈ ದ್ವೇಷದಿಂದ ಗುತ್ತಿಗೆದಾರ ತೇಜ್ ರಾಜ್ ಶರ್ಮಾ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ ಎನ್ನಲಾಗಿದೆ. ಲೋಕಾಯುಕ್ತರು ದೂರನ್ನು ಸ್ವೀಕರಿಸಲಿಲ್ಲ ಎನ್ನುವ ಕಾರಣಕ್ಕಾಗಿ ಲೋಕಾಯುಕ್ತರನ್ನು ಕೊಲ್ಲುವುದಕ್ಕೆ ಓರ್ವ ಮುಂದಾಗುತ್ತಾನೆಯೇ? ಆತನಿಗೆ ದ್ವೇಷವಿದ್ದುದು ಸ್ಥಳೀಯ ಅಧಿಕಾರಿಗಳ ಮೇಲೆ. ಹೀಗಿರುವಾಗ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ನುಗ್ಗಿ ಆಯುಕ್ತರನ್ನು ಕೊಲೆಗೈಯುವಂತಹ ಸಾಹಸವನ್ನು ಈತ ಯಾಕೆ ಮಾಡುತ್ತಾನೆ? ಇದರಿಂದ ಈತನ ಸಮಸ್ಯೆ ಪರಿಹಾರವಾಗುತ್ತದೆಯೇ? ಇಷ್ಟೊಂದು ಸಣ್ಣ ಕಾರಣಕ್ಕೆ ಒಬ್ಬ ಅತ್ಯುನ್ನತ ಅಧಿಕಾರಿಯನ್ನು ಕೊಲೆಗೈಯಲು ಮುಂದಾಗುತ್ತಾನೆ ಎನ್ನುವುದು ನಂಬುವುದಕ್ಕೆ ಸಾಧ್ಯವೇ? ಹಾಗೆ ನೋಡಿದರೆ, ವಿಶ್ವನಾಥ ಶೆಟ್ಟಿಯವರು ಅಧಿಕಾರ ಸ್ವೀಕರಿಸಿ ಹೆಚ್ಚು ಸಮಯ ಆಗಿಲ್ಲ. ವೆಂಕಟಾಚಲಯ್ಯ ಮತ್ತು ಸಂತೋಷ್ ಹೆಗ್ಡೆಯವರು ಮುಖಾಮುಖಿಯಾದ ಅಕ್ರಮ ಪ್ರಕರಣಗಳಿಗೆ ಹೋಲಿಸಿದರೆ ವಿಶ್ವನಾಥ ಶೆಟ್ಟಿಯವರು ಇನ್ನೂ ಕೆಲಸವೇ ಸರಿಯಾಗಿ ಶುರು ಹಚ್ಚಿಲ್ಲ.
ಒಂದು ಸರಕಾರವೇ ಉರುಳುವುದಕ್ಕೆ ಕಾರಣವಾದ ಸಂತೋಷ್ ಹೆಗ್ಡೆ ರಾಜಕೀಯ ವೈರಿಗಳನ್ನು ಕಟ್ಟಿಕೊಂಡಿದ್ದರು. ಜೊತೆಗೆ ಅಧಿಕಾರಿಗಳ ಪಾಲಿಗೂ ಮಗ್ಗುಲ ಮುಳ್ಳಾಗಿದ್ದರು. ಹೀಗಿದ್ದರೂ ಅವರ ಮೇಲೆ ಹಲ್ಲೆಯಾಗುವುದು ಇರಲಿ, ಟೀಕೆ ಮಾಡುವುದಕ್ಕೂ ಹೆದರುವಂತಹ ಸ್ಥಿತಿಯಿತ್ತು. ಇವರೆಲ್ಲರ ಮೇಲೆ ನಡೆಯದ ದಾಳಿ ಒಂದು ಸಣ್ಣ ಕಾರಣಕ್ಕಾಗಿ ಲೋಕಾಯುಕ್ತ ವಿಶ್ವನಾಥ ಶೆಟ್ಟಿಯವರ ಮೇಲೆ ಯಾಕೆ ನಡೆಯಿತು? ದುಷ್ಕರ್ಮಿ ಯಾವುದೋ ಆವೇಶದಿಂದ ನಡೆಸಿರುವ ಹಲ್ಲೆ ಇದಲ್ಲ. ಉದ್ದೇಶಪೂರ್ವಕವಾಗಿ, ಕೊಲೆ ಮಾಡುವುದಕ್ಕೆಂದೇ ಆತ ಬಂದಿದ್ದ. ಲೋಕಾಯುಕ್ತರಿಗೆ ಮೇಲಿಂದ ಮೇಲೆ ಇರಿದಿರುವುದರ ಹಿಂದೆ, ಆರೋಪಿಗೆ ಕೊಲೆಗೈಯುವ ಉದ್ದೇಶ ಇತ್ತು ಎನ್ನುವುದು ಗೊತ್ತಾಗುತ್ತದೆ. ಆರೋಪಿ ಒಂದೋ ಮಾನಸಿಕವಾಗಿ ಅಸ್ವಸ್ಥನಿರಬೇಕು. ತೀರಾ ಖಿನ್ನತೆ, ಹತಾಶೆಯಲ್ಲಿರುವ ವ್ಯಕ್ತಿಗಳು ಇಂತಹ ದಾಳಿ ಮಾಡುವುದು ಸಹಜ. ಈ ಕೊಲೆಗೆ ಮಾನಸಿಕ ಅಸ್ವಸ್ಥತೆಯೇ ಕಾರಣವಿರಬಹುದು ಎಂದು ಈವರೆಗೆ ನಂಬಲಾಗಿದೆ. ಆದರೆ ಈ ಸಂದರ್ಭದಲ್ಲಿ ಭದ್ರತಾ ವೈಫಲ್ಯವನ್ನು ನಾವು ಗಂಭೀರವಾಗಿ ಸ್ವೀಕರಿಸಲೇಬೇಕಾಗುತ್ತದೆ. ಅಹಲವು ಉನ್ನತ ಅಧಿಕಾರಿಗಳು, ರಾಜಕಾರಣಿಗಳನ್ನು ಎದುರು ಹಾಕಿಕೊಳ್ಳುವ ಸನ್ನಿವೇಶಗಳಿರುವುದರಿಂದ ಲೋಕಾಯುಕ್ತರಿಗೆ ಸಹಜವಾಗಿಯೇ ಶತ್ರುಗಳು ಹುಟ್ಟಿಕೊಳ್ಳುತ್ತಾರೆ.
ಈ ಹಿನ್ನೆಲೆಯಲ್ಲಿ ಕಚೇರಿ ಸೂಕ್ತ ಭದ್ರತೆಯನ್ನು ಹೊಂದಿರಬೇಕಾಗುತ್ತದೆ. ಒಬ್ಬ ದುಷ್ಕರ್ಮಿ ಮಾರಕಾಯುಧಗಳ ಜೊತೆಗೆ ಕಚೇರಿಯನ್ನು ಸುಲಭವಾಗಿ ಪ್ರವೇಶಿಸಬಹುದು ಎನ್ನುವುದೇ ಆಘಾತಕಾರಿ ಅಂಶವಾಗಿದೆ. ಭದ್ರತಾ ವೈಫಲ್ಯಕ್ಕೆ ಏನು ಕಾರಣ ಎನ್ನುವುದೂ ತನಿಖೆಯಾಗಬೇಕು. ದುಷ್ಕರ್ಮಿಯನ್ನು ಇತರರು ತಮ್ಮ ದುರುದ್ದೇಶಕ್ಕಾಗಿ ಬಳಸಿಕೊಂಡಿರುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ. ಆದುದರಿಂದ ಉನ್ನತ ಮಟ್ಟದ ತನಿಖೆ ನಡೆಯಬೇಕಾದ ಅಗತ್ಯವಿದೆ. ಕೊಲೆಯತ್ನದ ಕಾರಣಗಳು ಮತ್ತು ದುಷ್ಕರ್ಮಿಯ ಬೆನ್ನ ಹಿಂದಿರುವವರು ಯಾರು ಎನ್ನುವುದು ಆದಷ್ಟು ಬೇಗ ಬಹಿರಂಗವಾಗಬೇಕಾಗಿದೆ. ಬೇರೆ ಬೇರೆ ಕಾರಣಗಳಿಂದ ಲೋಕಾಯುಕ್ತ ಸ್ಥಾನಗಳನ್ನು ವಹಿಸಿಕೊಳ್ಳಲು ನ್ಯಾಯಾಧೀಶರು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ, ಈ ಕೊಲೆಯತ್ನ ಪ್ರಕರಣ ಲೋಕಾಯುಕ್ತ ಸಂಸ್ಥೆಗೆ ಇನ್ನೊಂದು ಹಿನ್ನಡೆಯಾಗಿದೆ. ಲೋಕಾಯುಕ್ತರು ಆತ್ಮಸ್ಥೈರ್ಯದಿಂದ ತಮ್ಮ ಸ್ಥಾನವನ್ನು ನಿಭಾಯಿಸುವ ವಾತಾವರಣವನ್ನು ತಕ್ಷಣ ಸರಕಾರ ಮಾಡಿಕೊಡಬೇಕಾಗಿದೆ.