ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ತಾಯಿ-ಮಗಳು
ಅನಾಮಿಕ ಮಿಶ್ರಾ
ಕಾನ್ಪುರ, ಮಾ. 13: ಸ್ನಾಯು ಕ್ಷಯದಿಂದ ಬಳಲುತ್ತಿರುವ ಮಹಿಳೆ ಹಾಗೂ ಅವರ 33 ವರ್ಷದ ಪುತ್ರಿ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಉತ್ತರಪ್ರದೇಶದ ಕಾನ್ಪುರ ಮೂಲದವರಾದ ಶಶಿ ಮಿಶ್ರಾ (59) ಹಾಗೂ ಅನಾಮಿಕ ಮಿಶ್ರಾ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ. ‘‘ಪತ್ರವನ್ನು ನೇರವಾಗಿ ರಾಷ್ಟ್ರಪತಿ ಅವರ ಕಚೇರಿಗೆ ಕಳುಹಿಸಿ ಕೊಡಲಾಗಿದೆ’’ ಎಂದು ನಗರ ದಂಡಾಧಿಕಾರಿ ರಾಜ್ ನಾರಾಯಣ ಪಾಂಡೆ ತಿಳಿಸಿದ್ದಾರೆ.
ತನ್ನ ಕಾಯಿಲೆಗೆ ಚಿಕಿತ್ಸೆ ನೀಡಲು ಹಣಕಾಸು ನೆರವು ನೀಡಬೇಕು ಅಥವಾ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಕೋರಿ ನಾವು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಪತ್ರ ಬರೆದಿದ್ದೇವು ಎಂದು ಅನಾಮಿಕ ಮಿಶ್ರಾ ಹೇಳಿದ್ದಾರೆ. ‘‘ಸ್ನಾಯು ಕ್ಷಯದಿಂದ ಬಳಲುತ್ತಿದ್ದ ನನ್ನ ತಂದೆ ಗಂಗಾ ಮಿಶ್ರಾ 15 ವರ್ಷಗಳ ಹಿಂದೆ ನಿಧನರಾದರು. ಅನಂತರ ನಮ್ಮ ಕುಟುಂಬದ ಜವಾಬ್ದಾರಿಯನ್ನು ಯಾರೊಬ್ಬರೂ ವಹಿಸಿಕೊಳ್ಳಲಿಲ್ಲಿ. 1985ರಲ್ಲಿ ನನ್ನ ತಾಯಿಗೆ ಕೂಡ ಸ್ನಾಯು ಕ್ಷಯ ರೋಗ ಇದೆ ಎಂಬುದು ಗೊತ್ತಾಯಿತು. ಆರು ವರ್ಷಗಳ ಹಿಂದೆ ತನೆಗೆ ಕೂಡ ಈ ರೋಗ ಇರುವುದು ಪತ್ತೆಯಾಯಿತು’’ ಎಂದು ಅನಾಮಿಕ ಹೇಳಿದ್ದಾರೆ.