ಅರುಣಾಚಲ ಪ್ರದೇಶ: ಹಿಮದಲ್ಲಿ ಸಿಲುಕಿದ 680 ಜನರು
ಇಟಾನಗರ್, ಮಾ. 13: ಅರುಣಾಚಲಪ್ರದೇಶದ ತವಾಂಗ್ ಸಮೀಪ ಅನಿರೀಕ್ಷಿತವಾಗಿ ಭಾರೀ ಹಿಮಪಾತ ಸಂಭವಿಸಿದ ಪರಿಣಾಮ ಸ್ಥಳೀಯರು, ಪ್ರವಾಸಿಗಳು ಸೇರಿದಂತೆ 680 ಜನರು ಸಿಲುಕಿಕೊಂಡಿದ್ದು, ಸೇನಾ ಪಡೆ ಸೋಮವಾರ ರಾತ್ರಿಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಪ್ರಯಾಣಿಕರು ವಾಹನಗಳಲ್ಲಿ ಸಂಚರಿಸುತ್ತಿದ್ದಾಗ ಸೇಲಾ ಪಾಸ್ ಸಮೀಪ ಹಿಮಪಾತ ಆರಂಭವಾಯಿತು. ಸಮುದ್ರ ಮಟ್ಟದಲ್ಲಿ 13,000 ಅಡಿ ಎತ್ತರದಲ್ಲಿರುವ ಹಿಮ ಪರ್ವತದಲ್ಲಿ ಜನರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ದೊರಕಿದ ಕೂಡಲೇ ಬೈಸಾಖಿಯಲ್ಲಿರುವ ಸೇನಾ ನೆಲೆಯಿಂದ ರಕ್ಷಣಾ ತಂಡವೊಂದನ್ನು ಕಳುಹಿಸಿ ಕೊಡಲಾಗಿತ್ತು.
ಹವಿಲ್ದಾರ್ ಪ್ರಸನ್ ಜೋಷಿ ನೇತೃತ್ವದ ತಂಡ ಹಿಮದಿಂದ ಸ್ಥಗಿತಗೊಂಡಿದ ವಾಹನಗಳ ಸಂಚಾರಕ್ಕೆ ನೆರವು ನೀಡಿತು ಹಾಗೂ 400 ಜನರನ್ನು ಜಸ್ವಂತ್ಗಢದ ರಕ್ಷಣಾ ಶಿಬಿರಕ್ಕೆ ಕರೆ ತರುವಲ್ಲಿ ಯಶಸ್ವಿಯಾಯಿತು,
ರಕ್ಷಿಸಲಾದ ಒಂದೂವರೆ ವರ್ಷದ ಶಿಶು ಉಸಿರಾಡಲು ತೊಂದರೆ ಎದುರಿಸುತ್ತಿತ್ತು ಹಾಗೂ 70 ವರ್ಷದ ಪ್ರವಾಸಿಯ ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕೆ ತಲುಪಿತ್ತು. ಅಸ್ವಸ್ಥಗೊಂಡ ಹಲವರಿಗೆ ಇಲ್ಲಿನ ವೈದ್ಯಕೀಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಅನಂತರ ಅವರನ್ನು ರಕ್ಷಣಾ ಶಿಬಿರಕ್ಕೆ ವರ್ಗಾಲಾಗಿದೆ.