ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ : ರಾಹುಲ್ ಗಾಂಧಿ ಭರವಸೆ
ಸುರತ್ಕಲ್, ಮಾ.18: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲಿ ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸುವುದಾಗಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಸುರತ್ಕಲ್ ಜಂಕ್ಷನ್ನಲ್ಲಿ ‘ಜನಾಶೀರ್ವಾದ ಯಾತ್ರೆ’ಯಲ್ಲಿ ಅವರು ಮಾತನಾಡಿದರು.
ಕರಾವಳಿ ಪ್ರದೇಶದಲ್ಲಿ ಮೀನುಗಾರರು ಅನೇಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರ ಸಂಕಷ್ಟವನ್ನು ಪರಿಗಣಿಸಿ ಹಾಗೂ ಅವರಿಗೆ ಧ್ವನಿಯಾಗಲು ಕೇಂದ್ರದಲ್ಲಿ ಸಚಿವಾಲಯವನ್ನು ಆರಂಭಿಸುವುದಾಗಿ ಹೇಳಿದರು.
‘ಮಿತ್ರರೆಗ್ ಎನ್ನ ನಮಸ್ಕಾರ’
‘ಮಿತ್ರರೆಗ್ ಎನ್ನ ನಮಸ್ಕಾರ’ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ರಾಹುಲ್ ಗಾಂಧಿಯವರು ಸ್ಥಳೀಯ ತುಳು ಭಾಷೆಯಲ್ಲಿ ಭಾಷಣ ಪ್ರಾರಂಭಿಸುತ್ತಿದ್ದಂತೆ ವೇದಿಕೆ ಮುಂದೆ ನೆರೆದಿದ್ದ ಸಭಿಕರ ಮಧ್ಯೆ ಹರ್ಷೋದ್ಘಾರ ಕೇಳಿ ಬಂತು.
‘ಬಿಜೆಪಿಯಂತೆ ಸುಳ್ಳು ಆಶ್ವಾಸನೆ ನೀಡುವುದಿಲ್ಲ’
ಬಿಜೆಪಿಯಂತೆ ಕಾಂಗ್ರೆಸ್ ಪಕ್ಷ ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಅಧಿಕಾರ ಅಲಂಕರಿಸುವ ಮುನ್ನ ನರೇಂದ್ರ ಮೋದಿಯವರು ಭಾರತದ ಪ್ರತಿ ಕುಟುಂಬದ ಖಾತೆಗೆ 15 ಲಕ್ಷ ರೂ.ವನ್ನು ಜಮೆ ಮಾಡುವುದಾಗಿ ಹೇಳಿದ್ದರು. ಆದರೆ, ನಾನು ಈ ವೇದಿಕೆಯಲ್ಲಿ ನಿಂತು ಆ ರೀತಿಯ ಆಶ್ವಾಸನೆ ನಿಮಗೆ ನೀಡುವುದಿಲ್ಲ. ಯಾಕೆಂದರೆ ಅದು ಕಾರ್ಯರೂಪಕ್ಕೆ ತರುವುದು ಅಸಾಧ್ಯ. ರೈತರ ಸಾಲ ಮನ್ನಾದ ಆಶ್ವಾಸನೆ ನೀಡುತ್ತೇನೆ. ಹೆಣ್ಮಕ್ಕಳಿಗೆ ಶಿಕ್ಷಣ, ಅಗತ್ಯವಿರುವಲ್ಲಿ ಆಸ್ಪತ್ರೆಗಳ ಸ್ಥಾಪನೆಯ ಆಶ್ವಾಸನೆ ನೀಡುತ್ತೇನೆ. ಆದರೆ, ಬಿಜೆಪಿಯಂತೆ ಸುಳ್ಳು ಆಶ್ವಾಸನೆಗಳನ್ನು ನೀಡಿ ನಾನು ಜನರಿಗೆ ಮೋಸ ಮಾಡಲು ಬಯಸುವುದಿಲ್ಲ.
ಅಧಿಕಾರಕ್ಕೆ ಮುಂಚೆ ಬಿಜೆಪಿಯವರು 2 ಕೋಟಿ ಯುವಕರಿಗೆ ಉದ್ಯೋಗವನ್ನು ನೀಡುವುದಾಗಿ ಹೇಳಿದ್ದರು. ಇದೇ ವಿಷಯವನ್ನು ಪಾರ್ಲಿಮೆಂಟ್ನಲ್ಲಿ ನಾನು ಪ್ರಶ್ನಿಸಿದ್ದೆ. ಪ್ರಧಾನ ನರೇಂದ್ರ ಮೋದಿ ಅವರು ಸುಳ್ಳುಗಳನ್ನು ಹೇಳಿ ಜನರನ್ನು ವಂಚಿಸಬಾರದು. ಅವರು ನುಡಿದಂತೆ ನಡೆಯಲಿ ಎಂದರು.