10ನೆ ದಿನಕ್ಕೆ ಕಾಲಿಟ್ಟ ಕಿದ್ವಾಯಿ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ
ಬೆಂಗಳೂರು, ಮಾ.21: ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿಯರು ಹಾಗೂ ಪ್ರಯೋಗಾಲಯ ತಂತ್ರಜ್ಞರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯು 10ನೆ ದಿನಕ್ಕೆ ಕಾಲಿಟ್ಟಿದೆ.
ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕವೂ (ಐಸಿಯು) ಸೇರಿದಂತೆ ಹಲವು ವಿಭಾಗಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಹಲವು ವರ್ಷಗಳಿಂದ ಗುತ್ತಿಗೆಯ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸುಮಾರು 170 ಶುಶ್ತೂಷಕ ಮತ್ತು 25 ಟೆಕ್ನಾಲಾಜಿಸ್ಟ್ ಸಿಬ್ಬಂದಿ ವೇತನ ತಾರತಮ್ಯ, ಗುತ್ತಿಗೆ ಅವಧಿ ಮುಗಿದ ನಂತರ ಗುತ್ತಿಗೆ ನವೀಕರಿಸದೆ ಇರುವುದು, ಗುತ್ತಿಗೆ ಅವಧಿ ಮುಗಿಸಿದ ನಂತರ ಬೇರೆಡೆ ಸೇರಲು ಬಿಡುಗಡೆ ಪತ್ರ ನೀಡದೆ ಇರುವುದನ್ನು ವಿರೋಧಿಸಿ, ಇಂದಿನಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಕೆಲಸಕ್ಕೆ ಗೈರು ಹಾಜರಾಗಿ ಕಳೆದ ಒಂಬತ್ತು ದಿನಗಳಿಂದ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅವರು, ಸೇವೆ ಮುಂದುವರಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುರುತಿನ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.
ವಿಕ್ಟೋರಿಯಾ ಆಸ್ಪತ್ರೆಯ 120 ಟ್ರೈನಿ ನರ್ಸ್ಗಳು ಹಾಗೂ 80 ನರ್ಸ್ಗಳನ್ನು ಕಿದ್ವಾಯಿ ಆಸ್ಪತ್ರೆ ಆಡಳಿತ ಮಂಡಳಿ ನಿಯೋಜಿಸಿಕೊಂಡು, ರೋಗಿಗಳಿಗೆ ಸೇವೆ ಒದಗಿಸುತ್ತಿದೆ.