ಮಡಿಕೇರಿ: ಜಿಲ್ಲಾ ಉಸ್ತುವಾರಿ ಸಚಿವರಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ; ಸರಕಾರದ ಸೌಲಭ್ಯಗಳ ವಿತರಣೆ
ಮಡಿಕೇರಿ, ಮಾ.21: ಜಿಲ್ಲಾ ಉಸ್ತುವಾರಿ ಸಚಿವಾರಾದ ಎಂ.ಅರ್.ಸೀತಾರಾಂ ಅವರು ವಿರಾಜಪೇಟೆಯ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಬುಧವಾರ ನೇರವೇರಿಸಿದರು.
ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಸಿವು ಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟಿನ್ನನ್ನು ಆರಂಭಿಸಿದೆ ಎಂದು ಅವರು ತಿಳಿಸಿದರು. ಸರ್ಕಾರದ ಮಹತ್ವಕಾಂಕ್ಷೆ ಕಾರ್ಯಕ್ರಮಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್ ರಾಜ್ಯದ 175 ತಾಲೂಕು ಕೇಂದ್ರಗಳ ಪೈಕಿ ಈಗಾಗಲೇ 150ಕ್ಕೂ ಹೆಚ್ಚು ತಾಲೂಕುಗಳಲ್ಲಿ ಆರಂಭಿಸಲಾಗಿದೆ. ಹಾಗೆಯೇ ಜಿಲ್ಲಾ ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲಾಗಿದೆ. ಬಡವರು ಶ್ರಮಿಕರು ಹೀಗೆ ಎಲ್ಲಾ ಜನರಿಗೂ ಕಡಿಮೆ ದರದಲ್ಲಿ ಉಪಹಾರ ಊಟ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಇದನ್ನು ಆರಂಭಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ವಿವರಿಸಿದರು.
ಕಳೆದ ಐದು ವರ್ಷಗಳಲ್ಲಿ ಸರ್ಕಾರ ಅನ್ನಭಾಗ್ಯ ಕ್ಷೀರಭಾಗ್ಯ, ಪಶುಭಾಗ್ಯ ರಾಜೀವ್ ಅರೋಗ್ಯ ಭಾಗ್ಯ, ಕೃಷಿಭಾಗ್ಯ ಅನಿಲಭಾಗ್ಯ, ನಿರ್ಮಲ ಭಾಗ್ಯ, ವಿದ್ಯಾಸಿರಿ ಸಾಲ ಮನ್ನ ಹೀಗೆ ಹತ್ತು ಹಲುವು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರ ನುಡಿದಂತೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಬಜೆಟ್ನಲ್ಲಿ ಹಲವು ಕಾರ್ಯಕ್ರಮಗಳನ್ನು, ವಿಶೇಷ ಪ್ಯಾಕೇಜ್ಗಳನ್ನು ಗುರುತಿಸುವ ಮೂಲಕ ಅಭಿವೃದ್ಧಿಗೆ ಪ್ರಯತ್ನಿಸಲಾಗಿದೆ. ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಉತ್ತಮ ಕೆಲಸಗಳು ಆಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ವಿರಾಜಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟಿನ್ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ವೀಣಾ ಆಚ್ಚಯ್ಯ, ಇತರರು ಇದ್ದರು.
ಜಿಲ್ಲಾ ಉಸ್ತುವಾರಿ ಸಚಿವಾರಾದ ಎಂ.ಅರ್.ಸೀತಾರಾಂ ಅವರು ತಿತಿಮತಿಯಲ್ಲಿ ಸಮಗ್ರ ಗಿರಿಜನ ಇಲಾಖೆ ವತಿಯಿಂದ ನಿರ್ಮಾಣ ಮಾಡಿರುವ ಆಶ್ರಮ ಶಾಲೆಯ ಹೆಚ್ಚುವರಿ ಕಟ್ಟಡ, ಇಗ್ಗತ್ತಪ್ಪ ದೇವಸ್ಥಾನದ ರಸ್ತೆ ಉದ್ಘಾಟಿಸಿದರು. ವಿಕಲ ಚೇತನರಿಗೆ ಗಾಲಿಚಕ್ರ ವಿತರಣೆ ಮಾಡಿದರು. ಅಪಘಾತ ಜೀವ ರಕ್ಷಕ ಯೋಜನೆಯಡಿ ತರಬೇತಿ ಪಡೆದ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡಾಪಟುಗಳಿಗೆ ಸ್ಪೋಟ್ಸ್ ಕಿಟ್ ವಿತರಣೆ ಮಾಡಿದರು.