ಉಪ್ಪಿನಂಗಡಿ: ಅತ್ಯಾಚಾರ ಪ್ರಕರಣ; 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಉಪ್ಪಿನಂಗಡಿ, ಮಾ. 22: ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
34ನೆ ನೆಕ್ಕಿಲಾಡಿ ಗ್ರಾಮದ ಬೀತಲಪ್ಪು ನಿವಾಸಿ ಹಿತೇಶ್ ಬಂಧಿತ ಆರೋಪಿ.
ಈತ ಹಾಗು 34ನೆ ನೆಕ್ಕಿಲಾಡಿ ಗ್ರಾಮದ ಪೆಟ್ರೋಲ್ ಪಂಪ್ ಬಳಿಯ ನಿವಾಸಿ ಗಿರೀಶ್ ಎಂಬಾತ 2004ರಲ್ಲಿ ಬೆಳ್ತಂಗಡಿ ತಾಲೂಕಿನ ಕರಾಯದ ಮನೆಯೊಂದಕ್ಕೆ ನುಗ್ಗಿ ಪತಿ ಮತ್ತು ಮಕ್ಕಳ ಎದುರೇ ಮಹಿಳೆಯನ್ನು ಅತ್ಯಾಚಾರ ನಡೆಸಿದ್ದು, ಬಳಿಕ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು. ಈ ಪ್ರಕರಣದ ಬೆನ್ನು ಹತ್ತಿದ್ದ ಉಪ್ಪಿನಂಗಡಿ ಪೊಲೀಸರು ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿ ಹಿತೇಶ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದ.ಕ. ಜಿಲ್ಲಾ ಎಸ್ಪಿ ರವಿಕಾಂತೇ ಗೌಡ, ಹೆಚ್ಚುವರಿ ಎಸ್ಪಿ ಸಜಿತ್ ಕುಮಾರ್, ಡಿವೈಎಸ್ಪಿ ಶ್ರೀನಿವಾಸ್ ಹಾಗು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ್ ನಾಯಕ್ ಅವರ ಮಾರ್ಗದರ್ಶನದಂತೆ ಉಪ್ಪಿನಂಗಡಿ ಠಾಣೆ ಉಪ ನಿರೀಕ್ಷಕ ನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಠಾಣೆ ಸಿಬ್ಬಂದಿಗಳಾದ ಹರಿಶ್ಚಂದ್ರ, ಪ್ರವೀಣ್ ರೈ, ಇರ್ಷಾದ್ ಹಾಗು ಜಗದೀಶ್ ಭಾಗವಹಿಸಿದ್ದರು.