ಜೆಡಿಎಸ್ನ ಬಂಡಾಯ ಶಾಸಕರು ರಾಜೀನಾಮೆ
ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಾ.25ರಂದು ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು, ಮಾ. 24: ರಾಜ್ಯಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಜೆಡಿಎಸ್ನ ಏಳು ಮಂದಿ ಬಂಡಾಯ ಶಾಸಕರು ಮಹತ್ವದ ಬೆಳವಣಿಗೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶನಿವಾರ ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ಖುದ್ದು ಭೇಟಿ ಮಾಡಿದ ಶಾಸಕರಾದ ಎನ್.ಚಲುವರಾಯಸ್ವಾಮಿ, ಭೀಮಾನಾಯ್ಕಾ, ಬಿ.ಝಡ್. ಝಮೀರ್ ಅಹ್ಮದ್ ಖಾನ್, ಅಖಂಡ ಶ್ರೀನಿವಾಸ ಮೂರ್ತಿ, ಎಚ್.ಸಿ.ಬಾಲಕೃಷ್ಣ ಇಕ್ಬಾಲ್ ಅನ್ಸಾರಿ ಹಾಗೂ ರಮೇಶ್ ಬಂಡೀಸಿದ್ದೇಗೌಡ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಅಂಗೀಕಾರ: ಶಾಸಕರ ರಾಜೀನಾಮೆ ಪತ್ರ ಸ್ಪೀಕರಿಸಿದ ಬಳಿಕ ಮಾತನಾಡಿದ ಸ್ಪೀಕರ್ ಕೋಳಿವಾಡ, ನಿನ್ನೆ ಒಬ್ಬರು ಮತ್ತು ಇಂದು ನಾಲ್ವರು ಸೇರಿ 5ಮಂದಿ ಶಾಸಕರು ಸ್ವ ಹಸ್ತಾಕ್ಷರದಲ್ಲಿ ಬರೆದು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆ ಅಂಗೀಕರಿಸಲು ಸಮರ್ಥನೀಯವಾಗಿದೆ. ಹೀಗಾಗಿ ಅವರ ರಾಜೀನಾಮೆ ಅಂಗೀಕರಿಸಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಏಳು ಮಂದಿ ಬಂಡಾಯ ಶಾಸಕರ ವಿರುದ್ಧದ ವಿಚಾರಣೆ ಪೂರ್ಣಗೊಂಡಿಲ್ಲ. ಜೆಡಿಎಸ್ ನಿನ್ನೆ ಒಂದು ದೂರನ್ನು ನೀಡಿದೆ. ಎಲ್ಲ ದೂರುಗಳನ್ನು ಸಮೀಕರಿಸಿ ವಿಚಾರಣೆ ನಡೆಸುತ್ತೇನೆ. ರಾಜೀನಾಮೆ ಅಂಗೀಕಾರವಾದ ಕೂಡಲೇ ಪ್ರಕರಣ ಇತ್ಯರ್ಥವಾಗುತ್ತದೆ ಎಂದೇನೂ ಇಲ್ಲ. ಯಾವಾಗ ವಿಚಾರಣೆ ಮಾಡಬೇಕು, ಯಾವಾಗ ತೀರ್ಪು ನೀಡಬೇಕೆಂಬುದು ನನ್ನ ವಿವೇಚನೆಗೆ ಬಿಟ್ಟ ವಿಷಯ ಎಂದು ಅವರು ನುಡಿದರು.
ನಾನು ಯಾವುದೇ ಒತ್ತಡಕ್ಕೆ ಮಣಿದಿಲ್ಲ. ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ. ಪತ್ರಕರ್ತ ರವಿಬೆಳಗೆರೆ, ಶಾಸಕ ಅಶೋಕ್ ಖೇಣಿ ಅವರ ಪ್ರಕರಣದಲ್ಲಿ ಕಾನೂನು ಪ್ರಕಾರವೇ ಕ್ರಮ ಕೈಗೊಂಡಿದ್ದೇನೆ ಎಂದ ಕೋಳಿವಾಡ, ಯಾರ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಣೆ ನೀಡಿದರು.
ಕಾಂಗ್ರೆಸ್ ಸೇರ್ಪಡೆ: ಮಾ.25ರ ರಂದು ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಏಳು ಮಂದಿ ಬಂಡಾಯ ಶಾಸಕರು ವಿದ್ಯುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಂದು ಗೊತ್ತಾಗಿದೆ.
2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ಮಾಡಿದ್ದ ಹಿನ್ನೆಲೆಯಲ್ಲಿ ಇವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಅಂದಿನಿಂದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಇವರು ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲೂ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು.
‘ತನ್ನ ಅಣ್ಣನ ಮಗ ಪ್ರಜ್ವಲ್ ರೇವಣ್ಣನನ್ನೇ ರಾಜಕಾರಣದಲ್ಲಿ ಬೆಳೆಯಲು ಮಾಜಿ ಸಿಎಂ ಕುಮಾರಸ್ವಾಮಿ ಬಿಟ್ಟಿಲ್ಲ. ಇನ್ನು ಅವರಿಗೆ ನಾವೆಲ್ಲ ಯಾವ ಲೆಕ್ಕ. ಎಚ್ಡಿಕೆಗೆ ತಾನೊಬ್ಬನೇ ನಾಯಕನಾಗಿ ಬೆಳೆಯಬೇಕೆಂಬ ಆಸೆ. ಅವರು ತನ್ನ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾತನ್ನೇ ಕೇಳುತ್ತಿಲ್ಲ’
-ಬಿ.ಝಡ್.ಝಮೀರ್ ಅಹ್ಮದ್ಖಾನ್ ಮಾಜಿ ಸಚಿವ
‘ಜೆಡಿಎಸ್ ಜೊತೆಗಿನ 12ವರ್ಷಗಳ ಸಂಬಂಧ ಕಡಿದುಕೊಂಡಿದ್ದೇವೆ. ನಾವು ಬಹಳ ಸಂತೋಷದಿಂದ ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ. ಜೆಡಿಎಸ್ ಜೊತೆಗಿನ ಸಂಬಂಧ ಇದೀಗ ಮುಗಿದ ಅಧ್ಯಾಯ, ಆ ಪಕ್ಷದಲ್ಲಿ ಮುಂದುವರೆಯುವ ಆಸೆ ಇಲ್ಲ. ಇದ್ದಿದ್ದರೆ, ಕೆ.ಗೋಪಾಲಯ್ಯ ಜೊತೆ ನಾವು ಆ ಪಕ್ಷಕ್ಕೆ ಮರಳುತ್ತಿದ್ದೆವು’
-ಎಚ್.ಸಿ.ಬಾಲಕೃಷ್ಣ ಮಾಜಿ ಶಾಸಕ