ಭಾರತಕ್ಕೊಂದು ಕಾರ್ಯಸೂಚಿ ಬೇಕು
ನಾನು ಓದಿದ ಪುಸ್ತಕ
ಪ್ರದೀಪ್ ಖಂಡ್ವಾಲ
ನಮ್ಮ ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ಸಾಕಷ್ಟು ನ್ಯೂನತೆಗಳಿವೆ. ಚುನಾವಣಾ ಪದ್ಧತಿಯಂತೆ, ಒಟ್ಟು ಚಲಾವಣೆಯಾದ ಮತಗಳೇ ಶೇ. 40ಕ್ಕಿಂತ ಕಡಿಮೆ ಇದ್ದರೆ; ಅದರಲ್ಲಿ ಹೆಚ್ಚು ಮತಗಳು ಯಾರಿಗೆ ಬಿದ್ದರೂ ಚುನಾವಣೆಗೆ ನಿಂತ ಆ ವ್ಯಕ್ತಿ ಗೆಲ್ಲುತ್ತಾನೆ/ಳೆ. ಇದು ‘‘ಮತ ಬ್ಯಾಂಕ್’’ ರಾಜಕಾರಣವನ್ನು ಪೋಷಿಸುತ್ತದೆ. ಶಾಸಕಾಂಗದಲ್ಲಿ ತೀವ್ರ ತರದ ಅಪರಾಧ ಎಸಗುವವರ ಸಂಖ್ಯೆ ಹೆಚ್ಚುತ್ತಿದೆ ಎಂಬುದಾಗಿ ನಮ್ಮ ಅಂಕೆ-ಸಂಖ್ಯೆಗಳು ಸಾಬೀತು ಪಡಿಸುತ್ತಲಿವೆ. ಅಷ್ಟೇ ಸಂಖ್ಯೆಯಲ್ಲಿ ಅವರ ವಿರುದ್ಧ ಇರುವ ಕೇಸುಗಳು ಬಾಕಿಯಾಗಿಯೇ ಇವೆ.
ಮಹೋಪಾಧ್ಯಾಯ ಪ್ರದೀಪ್ ಖಂಡ್ವಾಲರ ಪುಸ್ತಕ - ‘ನಾಗರಿಕತೆಯ ಮೇಲ್ಮೆಯತ್ತ ವೇಗದ ಗತಿ: ಭಾರತಕ್ಕೊಂದು ಕಾರ್ಯಸೂಚಿ’- (ಅಕಾಡಮಿ ಆಫ್ ಹ್ಯೂಮನ್ ರಿಸೋರ್ಸ್ ಡೆವಲಪ್ಮೆಂಟ್ ಹಾಗೂ ಅಹ್ಮದಾಬಾದ್ ಮ್ಯಾನೇಜ್ಮೆಂಟ್ ಅಸೋಸಿಯೇಶನ್ನಿಂದ ಪ್ರಕಟಿತ, 2017, ಬೆಲೆ ರೂ. 25, ಪಿ.ಪಿ. 1-288)
ನಮ್ಮ ಸಮಾಜದಲ್ಲಿ ಹಾಗೂ ಇತರೇ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಮಾನವೀಯ ಕಳಕಳಿ, ರಚನಾತ್ಮಕ ಸೃಜನಶೀಲತೆ ಮತ್ತು ಕಾರ್ಯಾತ್ಮಕ ಉತ್ತುಂಗಗಳನ್ನು ಸಾಧಿಸಲು ನಾವು ಯಾವ ಯಾವ ಉಪಕ್ರಮಗಳನ್ನು ಇಟ್ಟುಕೊಂಡು ಮುಂದುವರಿಯಬೇಕು? ಹೆಚ್ಚುತ್ತಿರುವ ದೊಂಬಿ, ಅಪರಾಧ, ಲಂಚಗುಳಿತನ ಮತ್ತು ವಿಭಿನ್ನ ಅಭಿಪ್ರಾಯಗಳಿಂದ ವಿಷಚಕ್ರದಂತೆ ತಿರುತಿರುಗಿ ಆಗಾಗ ಎದ್ದೇಳುತ್ತಿರುವ ಅಸಾಮರಸ್ಯಗಳನ್ನು ಹೇಗೆ ಕಡಿಮೆಗೊಳಿಸಬಹುದು? ಈ ಪುಸ್ತಕವು ಇದೇ ವಿಚಾರವನ್ನು ಸುದೀರ್ಘವಾಗಿ ಚರ್ಚಿಸುತ್ತಾ, ಇದನ್ನು ಹೇಗೆ ಸಾಧಿಸಬಹುದು ಎನ್ನುವುದನ್ನು ಹಲವು ಉದಾಹರಣೆಗಳ ಮೂಲಕ ಪ್ರಾತ್ಯಕ್ಷೀಕರಿಸುತ್ತದೆ. ಪ್ರತಿಯೊಂದು ದೇಶವು ನಾಗರಿಕತೆಯ ಉತ್ತುಂಗವನ್ನು ತಲುಪುವ ಎಲ್ಲ ಸಾಧ್ಯತೆಗಳನ್ನು ಈ ಪುಸ್ತಕವು ದೃಢೀಕರಿಸುತ್ತದೆ. ಅದು ತಾವು ಮಾಡುವ ಆಯ್ಕೆಗಳನ್ನು ಅವಲಂಬಿಸಿರುತ್ತವೆ. ಯಾವುದೇ ರಾಷ್ಟ್ರವಾಗಲೀ, ತನ್ನ ಒಳಗೊಳ್ಳುವ ಕಾರ್ಯತಂತ್ರದ ಮೂಲಕವೇ ಇದನ್ನು ಅಭಿವ್ಯಕ್ತಿಸಿಕೊಳ್ಳಬೇಕಾಗುತ್ತದೆ. ಇದೊಂದು ಒಳ್ಳೆಯ ಪ್ರವೇಶಿಕೆ. ಯಾವುದೇ ರಾಷ್ಟ್ರವಾಗಲೀ, ತನ್ನ ಸಕಾರಾತ್ಮಕ ಸಮಗ್ರತೆಯನ್ನು ಕಾಯ್ದುಕೊಳ್ಳುವ ಪರಿ ಇದು. ಈ ಪುಸ್ತಕವು, ಇದನ್ನು ಕಾಯ್ದುಕೊಂಡ ದೇಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಮತ್ತು ಪುರಾವೆಗಳನ್ನು ವ್ಯಷ್ಟಿಯಾಗಿ ಹಾಗೂ ಸಮಷ್ಟಿಯಾಗಿ; ಪುರಾವೆಗಳ ಸಹಿತ ನೀಡುತ್ತದೆ. ಸ್ವೀಡನ್, ಜಪಾನ್, ಮತ್ತು ಜರ್ಮನಿ ದೇಶಗಳು ಈ ನಿರ್ದೇಶನಗಳನ್ನು ಸಾಕ್ಷಾತ್ಕರಿಸುತ್ತವೆ.
ಪ್ರದೀಪ್ ಖಂಡ್ವಾಳರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್- ಅಹ್ಮದಾಬಾದ್ನ ಮಾಜಿ ನಿರ್ದೇಶಕರು. ಅವರು ಸುಮಾರು 30 ಪುಸ್ತಕಗಳ ಮತ್ತು 100 ಬಿಡಿ ಲೇಖನಗಳ ಬರಹಗಾರರೂ ಹೌದು. ಅವರು ಬರೆದ 4 ಪುಸ್ತಕಗಳಿಗೆ ‘‘ಅತ್ಯುತ್ತಮ ವಾರ್ಷಿಕ ನಿರ್ವಹಣಾ ಕೃತಿಗಳು’’ ಎನ್ನುವ ಪ್ರಶಸ್ತಿಗಳು ಕೂಡಾ ಸಂದಿವೆ. ಅವರ ಆಡಳಿತ ಮತ್ತು ಸೃಜನಶೀಲತೆಗೆ 3 ಬಾರಿ ‘‘ಜೀವನ ಶ್ರೇಷ್ಟ’’ ಪಾರಿತೋಷಕ ಲಭಿಸಿದೆೆ. ಅವರು ಸೇವಾ ಸಂಸ್ಥೆ ಮತ್ತು ಇತರೇ ಮಂಡಳಿಗಳ ಸ್ಥಾಪಕರೂ ಆಗಿದ್ದಾರೆ. ಅವರು ಬಹಳಷ್ಟು ಕಾರ್ಯಾಗಾರ, ನಿರ್ವಹಣಾ ಕೌಶಲ ಹಾಗೂ ಶೈಕ್ಷಣಿಕ ನಾಯಕರ ಸೃಷ್ಟಿಗೆ ಕಾರಣೀಭೂತರಾಗಿದ್ದಾರೆ. ಅವರು ಓರ್ವ ಕವಿ ಮತ್ತು ಅನುವಾದಕರೂ ಹೌದು.
ಅವರು ತಮ್ಮ ‘ನಾಗರಿಕತೆಯ ಮೇಲ್ಮೆಯತ್ತ ವೇಗದ ಗತಿ: ಭಾರತಕ್ಕೊಂದು ಕಾರ್ಯಸೂಚಿ’ ಎಂಬ ಪುಸ್ತಕದಲ್ಲಿ ಶಿಫಾರಸು ಮಾಡಿದ ಕೆಲವೊಂದು ಅಸಾಮಾನ್ಯ ಸಂಗತಿಗಳು ಈ ಕೆಳಗಿನಂತಿವೆ:
1. ನಮ್ಮ ಶಾಲಾ ಶಿಕ್ಷಣದಲ್ಲಿ ಸಾಕಷ್ಟು ನ್ಯೂನತೆಗಳಿವೆ. ಅವುಗಳನ್ನು ನಿವಾರಿಸಲು ನಮ್ಮ ನೆಲದ ನುರಿತ ಅಧ್ಯಾಪಕರಿಂದ ತಯಾರಿಸಲ್ಪಟ್ಟ ‘ಇಂಟರ್-ನೆಟ್’ ಮತ್ತು ದೂರದರ್ಶನದ ಮೂಲಕ ಕೊಡಲ್ಪಡುವ ಬೋಧನ ವಿಧಾನಗಳ ಅಳವಡಿಕೆಯ ಅಗತ್ಯವಿದೆ. ಇವುಗಳು ನಮ್ಮ ಶಾಲೆಗಳಲ್ಲಿ ಕಲಿಯುತ್ತಿರುವ 200 ಮಿಲಿಯದಷ್ಟು ಸಂಖ್ಯೆಯ ಮಕ್ಕಳಿಗೆ ಕಲಿಕಾ ಶ್ರೀಮಂತಿಕೆಯನ್ನು ಒದಗಿಸಬಲ್ಲವು. ಈ ಎರಡೂ ವಿಧಾನಗಳು ಭಾರತದಲ್ಲಿ ಲಕ್ಷಾಂತರ ಮಕ್ಕಳನ್ನು ಸಫಲವಾಗಿ ತಲುಪಿವೆ. ಇವುಗಳ ಉಪಯೋಗಗಳನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ.
2. ಅಂತಾರಾಷ್ಟ್ರೀಯ ಸಂಶೋಧನೆಗಳು ಶೋಧಿಸಿದ ಪ್ರಕಾರ - ಯಾವ ಕಂಪೆನಿಗಳು ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪಾಲಿಸುತ್ತಾ ಬಂದುವೋ, ಆ ಕಂಪೆನಿಗಳು ಇತರೇ ಲಾಭದಾಯಕ ಉದ್ದಿಮೆಗಳನ್ನು ಮಾತ್ರವೇ ತನ್ನ ಪ್ರಮುಖ ಉದ್ದೇಶವನ್ನಿಟ್ಟುಕೊಂಡ ಕಂಪೆನಿಗಳನ್ನು ಮೀರಿ ನಿಂತಿವೆ. ಈ ಮಾದರಿಗಳು ವ್ಯಾಪಾರ ವಹಿವಾಟುಗಳಲ್ಲಿ ಅಸ್ತಿತ್ವಕ್ಕೆ ಬಂದು, ಅವುಗಳನ್ನು ವಿಶಾಲ ಹಂತಗಳಲ್ಲಿ ನಮ್ಮ ನಿರ್ವಹಣಾ ವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ಉದ್ಯುಕ್ತವಾದರೆ ತುಂಬಾ ಒಳ್ಳೆಯದು. ಇದು ನಾಗರಿಕತೆಯ ಉತ್ತುಂಗತೆಯ ದಾರಿಯನ್ನು ಕ್ರಮಿಸುವಲ್ಲಿ ಸ್ಥಿರವಾದ ಹೆಜ್ಜೆಯಾಗಬಹುದು.
3. ತುಲನಾತ್ಮಕವಾಗಿ ನೋಡಿದರೆ, ನಮ್ಮ ಆಡಳಿತವು ದುರ್ಬಲವಾಗಿದೆ ಎಂದೇ ಹೇಳಬಹುದು. ಇದರ ಪರಿಣಾಮವಾಗಿ ನಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯನ್ನು ಸಾಧಿಸುವಲ್ಲಿ ನಿರೀಕ್ಷಿತ ಮಟ್ಟಕ್ಕೆ ಏರಲಾಗಲಿಲ್ಲ. ಪ್ರಪಂಚದಲ್ಲಿ 50ಕ್ಕಿಂತ ಹೆಚ್ಚು ರಾಷ್ಟ್ರಗಳು ಸಾಂದರ್ಭಿಕ ಬದಲಾವಣೆಗಳನ್ನು ಮಾಡಿಕೊಂಡು ಸಾರ್ವಜನಿಕ ನಿರ್ವಹಣೆಯ ತಾತ್ವಿಕತೆಯನ್ನು ಅಳವಡಿಸಿಕೊಂಡಿವೆ. ವೃತ್ತಿಪರ ಹಾಗೂ ಆಡಳಿತದಲ್ಲಿ ಮತ್ತು ಸರಕಾರದ ಅಭಿವೃದ್ಧಿ ಯೋಜನೆಗಳಲ್ಲಿ ಬದ್ಧತೆಯನ್ನು ಹೊಂದಿದ ತತ್ವಗಳನ್ನು ಪಾಲಿಸುವಲ್ಲಿ ನಿಷ್ಠರಾದವರನ್ನೇ ನೆಚ್ಚಿಕೊಂಡಿದೆ. ಬೇರೆ ಬೇರೆ ದೇಶಗಳಿಂದ ವೈವಿಧ್ಯಮಯವಾದ ಉದಾಹರಣೆಗಳನ್ನು ಖಂಡ್ವಾಲರು ಸಾಕಷ್ಟು ಕಟ್ಟಿಕೊಡುತ್ತಾ, ಕಾರ್ಯತತ್ಪರತೆಯ ಆಂತರ್ಯವನ್ನು ಬಿಚ್ಚಿಡುತ್ತಾರೆ. ಇದನ್ನು ಕಾರ್ಯಾಚರಣೆಗೆ ತಂದ ದೇಶಗಳಲ್ಲಿನ ಪರಿಣಾಮಗಳು ಅತ್ಯುತ್ತಮವಾಗಿವೆ.
4. ನಮ್ಮ ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ಸಾಕಷ್ಟು ನ್ಯೂನತೆಗಳಿವೆ. ಚುನಾವಣಾ ಪದ್ಧತಿಯಂತೆ, ಒಟ್ಟು ಚಲಾವಣೆಯಾದ ಮತಗಳೇ ಶೇ. 40ಕ್ಕಿಂತ ಕಡಿಮೆ ಇದ್ದರೆ; ಅದರಲ್ಲಿ ಹೆಚ್ಚು ಮತಗಳು ಯಾರಿಗೆ ಬಿದ್ದರೂ ಚುನಾವಣೆಗೆ ನಿಂತ ಆ ವ್ಯಕ್ತಿ ಗೆಲ್ಲುತ್ತಾನೆ/ಳೆ. ಇದು ‘‘ಮತ ಬ್ಯಾಂಕ್’’ ರಾಜಕಾರಣವನ್ನು ಪೋಷಿಸುತ್ತದೆ. ಶಾಸಕಾಂಗದಲ್ಲಿ ತೀವ್ರ ತರದ ಅಪರಾಧ ಎಸಗುವವರ ಸಂಖ್ಯೆ ಹೆಚ್ಚುತ್ತಿದೆ ಎಂಬುದಾಗಿ ನಮ್ಮ ಅಂಕೆ-ಸಂಖ್ಯೆಗಳು ಸಾಬೀತು ಪಡಿಸುತ್ತಲಿವೆ. ಅಷ್ಟೇ ಸಂಖ್ಯೆಯಲ್ಲಿ ಅವರ ವಿರುದ್ಧ ಇರುವ ಕೇಸುಗಳು ಬಾಕಿಯಾಗಿಯೇ ಇವೆ. ಲೇಖಕರು ಇದಕ್ಕಾಗಿ ಕೇಸುಗಳನ್ನು ಶೀಘ್ರ ವಿಲೇವಾರಿ ಮಾಡುವ ವ್ಯವಸ್ಥೆಯೊಂದನ್ನು ರೂಪಿಸಲು ಸಲಹೆ ನೀಡುತ್ತಾರೆ. ಕೋರ್ಟು ತನ್ನ ತೀರ್ಮಾನವನ್ನು ತಿಳಿಸುವವರೆಗೂ ಅವರಿಗೆ ಚುನಾವಣೆಗೆ ನಿಲ್ಲುವ ಹಕ್ಕನ್ನು ಕೊಡಬಾರದು.
5. ಸರಕಾರ, ವ್ಯಾಪಾರ ವಹಿವಾಟು ಮತ್ತು ನಾಗರಿಕ ಸಮಿತಿಗಳು ಆಧುನಿಕ ಸಮಾಜದ ಮೂಲಭೂತ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳ ಧ್ಯೇಯೋದ್ದೇಶಗಳಲ್ಲಿ ಪರಸ್ಪರ ಹೊಂದಾಣಿಕೆಯ ಅಗತ್ಯವನ್ನು ಲೇಖಕರು ಕಂಡುಕೊಳ್ಳುತ್ತಾರೆ. ಅವರ ಮಧ್ಯದಲ್ಲಿ ಸಹಯೋಗದ ಅಗತ್ಯವನ್ನು ಬೇರ್ಪಡಿಸಲಾಗದಷ್ಟು ಗಟ್ಟಿಗೊಳಿಸಬೇಕು. ಸಾರ್ವಜನಿಕರ ಕ್ಷೇಮಾಭಿವೃದ್ಧಿಗಾಗಿ ಇರುವ ಸರಕಾರದ ಯೋಜನೆಗಳಲ್ಲಿ ಈ ಸಂಸ್ಥೆಗಳ ಸಹಯೋಗ ಇರಲೇ ಬೇಕು ಎನ್ನುವುದು ಲೇಖಕರ ಬಲವಾದ ಅಭಿಪ್ರಾಯವಾಗಿದೆ. ಇವರೆಲ್ಲರೂ ಒಟ್ಟಾಗಿ ಶ್ರಮಿಸಿದರೆ ಒಳ್ಳೆಯ ನಾಗರಿಕ ಮೇಲ್ಮೆಯನ್ನು ಸಾಧಿಸಬಹುದು. ಈ ಪುಸ್ತಕವು ಅಂತಹ ಹಲವು ಜೀವಂತ ಉದಾಹರಣೆಗಳನ್ನು ನೀಡುತ್ತದೆ.
6. ಯುವಕರ ಬಲವರ್ಧನೆಯನ್ನು ಮಾಡುವುದಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ, ಲೇಖಕರು ಹೆಚ್ಚಿನ ಪ್ರೋತ್ಸಾಹವನ್ನು ಸಮರ್ಥಿಸುತ್ತಾರೆ. ವಾರ್ಷಿಕ 1 ಮಿಲಿಯ ಯುವಕ ಯುವತಿಯರನ್ನು, ಜಾಗರೂಕತೆಯಿಂದ ಗುರುತಿಸಿ, ಅವರನ್ನು ಪೂರ್ಣ ಪ್ರಮಾಣದ ತರಬೇತಿಯಲ್ಲಿ ತೊಡಗಿಸಬೇಕು. ಅವರು ನಿಜವಾಗಿಯೂ ಅದರಲ್ಲಿ ಮಿಂದೇಳಬೇಕು. ಸಾಮಾಜಿಕ ಬದಲಾವಣೆಯ ಹರಿಕಾರರಾಗಿ ಹೊರಹೊಮ್ಮಬೇಕು. ಅತ್ಯುತ್ತಮ ನಾಗರಿಕರಾಗಬೇಕು. ಈ ಪುಸ್ತಕದಲ್ಲಿ ಅದಕ್ಕೆ ಬೇಕಾಗುವ ಪಠ್ಯಕ್ರಮ, ಬೋಧನ ಶಾಸ್ತ್ರ, ಕಲಿಕಾ ಸಾಮಗ್ರಿ, ಭೌತಿಕ ಸಲಕರಣೆಗಳು, ಅಂದಾಜು ಖರ್ಚು, ಕಾರ್ಯಕ್ರಮ ನಿರ್ವಹಣೆಯ ಬಗ್ಗೆ ಮಾಹಿತಿಗಳನ್ನು ನೀಡುತ್ತಾರೆ. ಇವುಗಳಿಗಾಗಿ ದೇಶವು ವಾರ್ಷಿಕ ರೂ.20,000 ಕೋಟಿ ರೂ. ಖರ್ಚು ಮಾಡಬೇಕು. ಇದು ಸರಕಾರದ ವಾರ್ಷಿಕ ಆದಾಯದ ಕೇವಲ ಶೇ.1ರಷ್ಟು ಆಗುತ್ತದೆ. ಆದರೆ, ದೇಶಕ್ಕೆ ಮಿಲಿಯಾಂತರ ಯೋಗ್ಯ ಯುವ ಜನಾಂಗವನ್ನು ಒಳ್ಳೆಯ ಪ್ರಜೆಗಳನ್ನಾಗಿ ತಯಾರಿಸಿಕೊಡುತ್ತದೆ. ಇವರು ನಿಜವಾದ ಬದಲಾವಣೆಯ ಹರಿಕಾರರು. ಇವರು ದೇಶದಲ್ಲಿ ತರಬೇಕಾದ ಉದ್ದೇಶಿತ ಬದಲಾವಣೆಗೆ ತಮ್ಮ ಕೈಯಲ್ಲಾದ ದೇಣಿಗೆಯನ್ನು ನೀಡಬಲ್ಲರು. ಎಂಬ ಆಶಯವನ್ನು ಪುಸ್ತಕವು ಬಿಂಬಿಸುತ್ತದೆ.