ನ್ಯಾಯ ಸಿಕ್ಕೀತೇ?
ನ್ಯಾಯಕ್ಕಾಗಿ ಕಾದಿದ್ದಾರೆ ಸೇನೆಯಿಂದ ಮಾನವ ಕವಚವಾಗಿ ಬಳಸಲ್ಪಟ್ಟಿದ್ದ ಫಾರೂಕ್ ಅಹಮದ್ ದರ್
ಕಳೆದ ವರ್ಷ ಕಾಶ್ಮೀರದ ಬುಡ್ಗಾಮ್ನಲ್ಲಿ ಸೇನೆಯ ಮೇಜರ್ ಲೀತುಲ್ ಗೊಗೊಯಿ ಕಲ್ಲು ಎಸೆತದ ವಿರುದ್ಧ ತಮ್ಮ ಜೀಪ್ಗೆ ಮಾನವ ಕವಚವಾಗಿ ಬಳಸಿದ್ದ ಫಾರೂಕ್ ಅಹಮದ್ ದರ್ ಜೀವನ ಇದೀಗ ಅವಮಾನ ಮತ್ತು ಚುಚ್ಚುನುಡಿಗಳಿಂದ ಕೊನೆಯಾಗದ ಬವಣೆಯಾಗಿ ಬದಲಾಗಿದೆ.
ವೃತ್ತಿಯಲ್ಲಿ ಕುಸುರಿ ಕೆಲಸಗಾರನಾಗಿರುವ ದರ್ರನ್ನು ಕಳೆದ ವರ್ಷ ಎಪ್ರಿಲ್ 9ರಂದು ಕಲ್ಲೆಸೆತಗಾರರಿಂದ ಪಾರಾಗಲು ಮೇಜರ್ ಗೊಗೊಯಿ ತಮ್ಮ ಜೀಪಿನ ಮುಂದೆ ಮಾನವ ಕವಚದಂತೆ ಕಟ್ಟಿ ಹಾಕಿದ್ದರು. ಈ ಸುದ್ದಿ ಮತ್ತು ದರ್ರನ್ನು ಕಟ್ಟಿಹಾಕಿರುವ ಚಿತ್ರ ಪತ್ರಿಕೆಗಳ ಮುಖಪುಟದಲ್ಲಿ ಸ್ಥಾನಪಡೆಯುವ ಮೂಲಕ ಕಣಿವೆ ರಾಜ್ಯದಲ್ಲಿ ಜನರ ಮತ್ತು ಸೇನೆಯ ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲಿತ್ತು. ಇದು ನಡೆದು ಒಂದು ವರ್ಷ ಕಳೆದರೂ ಈ ಘಟನೆಯಿಂದ ದರ್ ಅನುಭವಿಸಿರುವ ಯಾತನೆ ಮತ್ತು ಮಾನಸಿಕ ಹಿಂಸೆ ಇನ್ನೂ ಕೊನೆಯಾಗಿಲ್ಲ. ಸರಕಾರಿ ಏಜೆಂಟ್ ಎಂದು ಆರೋಪಿಸಿ ಗ್ರಾಮಸ್ಥರು ದರ್ಗೆ ಬಹಿಷ್ಕಾರ ಹಾಕಿದ್ದಾರೆ. ಈ ಘಟನೆ ಮತ್ತು ಅದರ ನಂತರ ನಡೆದ ಬೆಳವಣಿಗೆಗಳಿಂದಾಗಿ ದರ್ ನಿದ್ರಾಹೀನತೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ಓರ್ವ ಕೂಲಿ ಕಾರ್ಮಿಕನಾಗಿಯೂ ಕೆಲಸ ಗಳಿಸಲು ವಿಫಲವಾಗಿರುವ 28ರ ಹರೆಯದ ದರ್ ತನ್ನ ಜೀವನ 12 ತಿಂಗಳ ಹಿಂದೆಯೇ ನಿಂತು ಹೋಗಿದೆ ಎಂದು ತಿಳಿಸುತ್ತಾರೆ. ಅಂದು ಶ್ರೀನಗರದಲ್ಲಿ ಲೋಕಸಭಾ ಚುನಾವಣೆಯ ದಿನವಾಗಿದ್ದು ಪ್ರತ್ಯೇಕವಾದಿ ಸಂಘಟನೆಗಳಿಂದ ಬಹಿಷ್ಕಾರಕ್ಕೆ ಕರೆ ನೀಡಲಾಗಿದ್ದರೂ ದರ್ ಧೈರ್ಯದಿಂದ ಮತ ಚಲಾಯಿಸಲು ತೆರಳಿದ್ದರು. ಆ ದಿನ ಪೊಲೀಸ್ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರು. ಘಟನೆಯ ಬಗ್ಗೆ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಮತ್ತು ಕೇಂದ್ರೀಯ ಸಂಸ್ಥೆಗಳು ದರ್ ಕಲ್ಲೆಸೆತಗಾರರಲ್ಲಿ ಓರ್ವರಾಗಿದ್ದರು ಎಂಬ ಸೇನೆಯ ಆರೋಪವನ್ನು ತಳ್ಳಿ ಹಾಕಿದ್ದರು ಮತ್ತು ದರ್ ನೀಡಿದ ಹೇಳಿಕೆ ನಿಜ ಎಂದು ತಿಳಿಸಿದ್ದರು. ಆ ದಿನ ಫಾರೂಕ್ ಅಹಮದ್ ದರ್ ಮತ ಚಲಾಯಿಸಿದ ನಂತರ ತನ್ನ ಸಹೋದರಿಯ ಮನೆಗೆ ತೆರಳುತ್ತಿದ್ದರು. ಈ ವೇಳೆ ಅವರನ್ನು ಹಿಡಿದ ಸೇನಾ ಜವಾನರು ದರ್ಗೆ ಸರಿಯಾಗಿ ಥಳಿಸಿ ಅವರನ್ನು ತಮ್ಮ ಜೀಪಿನ ಮುಂಭಾಗಕ್ಕೆ ಕಟ್ಟಿ ಹಾಕಿ ಸುಮಾರು 28 ಗ್ರಾಮಗಳಲ್ಲಿ ಮೆರವಣಿಗೆ ಮಾಡಿದ್ದರು ಎಂಬುದು ತನಿಖೆಯ ವೇಳೆ ಬಯಲಾಗಿತ್ತು. ಇದರಲ್ಲಿ ನನ್ನ ತಪ್ಪೇನಿತ್ತು? ಮತಗಟ್ಟೆಗೆ ತೆರಳಿ ಮತ ಹಾಕಿದ್ದೇ? ನನಗೀಗ ನಿದ್ದೆ ಬರುತ್ತಿಲ್ಲ. ಔಷಧಗಳು ಕೂಡಾ ನನ್ನ ಮೇಲೆ ಪರಿಣಾಮ ಬೀರುತ್ತಿಲ್ಲ. ಯಾರೂ ನನಗೆ ಕೆಲಸ ನೀಡುತ್ತಿಲ್ಲ ಎಂದು ದರ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾನು ಮತ ಚಲಾಯಿಸಿದ ಕಾರಣಕ್ಕೆ ನನ್ನ ಗ್ರಾಮಸ್ಥರು ನನಗೆ ಬಹಿಷ್ಕಾರ ಹಾಕಿದ್ದಾರೆ. ಆ ದಿನ ನಾನು ಮನೆಯಿಂದ ಹೊರ ಹೋಗಿರುವುದಕ್ಕೆ ಈಗ ಪಶ್ಚಾತ್ತಾಪಪಡುತ್ತಿದ್ದೇನೆ. ನಾನೇನು ರಾಜಕಾರಣಿಯಲ್ಲ ಮತ್ತು ಆಗಲೂ ಬಯಸುವುದಿಲ್ಲ. ಆದರೆ ಮತ ಚಲಾಯಿಸುವುದೇ ಅಪರಾಧವಾದರೆ ಮತ ಹಾಕಲು ಯಾರು ಬರುತ್ತಾರೆ ಎಂದು ದರ್ ಪ್ರಶ್ನಿಸುತ್ತಾರೆ. ತನ್ನ ತಾಯಿ ಫಿಝಾ ಬೇಗಮ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಆಕೆಯ ಚಿಕಿತ್ಸೆಗೂ ತನ್ನ ಬಳಿ ಹಣವಿಲ್ಲ ಎಂದು ದರ್ ದುಃಖ ದಿಂದ ತಿಳಿಸಿದ್ದಾರೆ.
ಫಾರೂಕ್ ಅಹಮದ್ ದರ್ಗೆ ಎದುರಾದ ಸಂಕಷ್ಟವನ್ನು ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಸಿನೆಮಾ ‘ಬಾಗಿ 2’ನಲ್ಲಿ ತೋರಿಸಲಾಗಿದೆ. ಈ ಸಿನೆಮಾದಲ್ಲೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಎಂಬ ಕಾರಣಕ್ಕೆ ಸೇನಾ ಅಧಿಕಾರಿಯೊಬ್ಬರು ವ್ಯಕ್ತಿಯೊಬ್ಬನನ್ನು ತಮ್ಮ ಜೀಪ್ಗೆ ಕಟ್ಟಿ ಹಾಕುವಂತೆ ತೋರಿಸಲಾಗಿದೆ. ಈ ದೃಶ್ಯದ ಮೂಲಕ ಸಿನೆಮಾವು ಮಾನವ ಹಕ್ಕುಗಳ ಉಲ್ಲಂಘನೆಯನ್ನು ವೈಭವೀಕರಿಸಿದೆ ಎಂಬ ಆರೋಪಗಳು ಕೇಳಿಬಂದಿತ್ತು. ಜುಲೈಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಾನವ ಹಕ್ಕುಗಳ ಆಯೋಗವು ಫಾರೂಕ್ ದರ್ಗೆ ಹತ್ತು ಲಕ್ಷ ರೂ. ಪರಿಹಾರ ನೀಡಿತ್ತು. ಆದರೆ ಈ ರೀತಿ ಹಣ ನೀಡಲು ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಸಬೂಬು ನೀಡಿ ರಾಜ್ಯದ ಪಿಡಿಪಿ-ಬಿಜೆಪಿ ಸರಕಾರ ದರ್ಗೆ ಪರಿಹಾರ ನೀಡಲು ನಿರಾಕರಿಸಿತ್ತು. ಪರಿಹಾರದ ಸುದ್ದಿ ನನಗೆ ಮತ್ತಷ್ಟು ಸಂಕಷ್ಟ ತಂದಿತು. ನನ್ನ ಮನೆ ಸಮೀಪದ ಜನರು ನಾನು ಪರಿಹಾರ ಪಡೆಯುವ ಬಗ್ಗೆ ಚುಚ್ಚುಮಾತುಗಳನ್ನು ಆಡಲು ಆರಂಭಿಸಿದರು ಮತ್ತು ನನ್ನ ವಿರುದ್ಧ ಟೀಕೆಗಳನ್ನು ಮಾಡಿದರು. ನಾನು ಕಲ್ಲೆಸೆದಿದ್ದೇನೆ ಎಂದು ಸಾಬೀತಾದರೆ ನನ್ನನ್ನು ಗಲ್ಲಿಗೇರಿಸಿ. ಇಲ್ಲವಾದರೆ ನನ್ನ ಈಗಿನ ಪರಿಸ್ಥಿತಿಗೆ ಕಾರಣರಾದವರನ್ನು ಶಿಕ್ಷಿಸಿ ಎಂದು ಫಾರೂಕ್ ದರ್ ಆಗ್ರಹಿಸುತ್ತಾರೆ. ಕಣಿವೆಯಲ್ಲಿ ನ್ಯಾಯ ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಅಂತರ್ರಾಷ್ಟ್ರೀಯ ಮಂಡಳಿಯ ಮುಖ್ಯಸ್ಥ ಮುಹಮ್ಮದ್ ಆಶಾನ್ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಫಾರೂಕ್ ದರ್ಗೆ ಪರಿಹಾರ ನೀಡಲು ನಿರಾಕರಿಸಿರುವ ರಾಜ್ಯದ ನಿರ್ಧಾರದ ಬಗ್ಗೆ ಪರಿಶೀಲನಾ ಅರ್ಜಿಯನ್ನು ಹಾಕಿದ್ದಾರೆ. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯದಲ್ಲೂ ಮೇಲ್ಮನವಿಯನ್ನು ಸಲ್ಲಿಸಲಾಗಿದೆ. ಒಂದು ದಿನ ನಮಗೆ ನ್ಯಾಯ ಸಿಗುತ್ತದೆ ಎಂದು ಹೇಳುತ್ತಾರೆ ಮುಹಮ್ಮದ್ ಆಶಾನ್. ‘ಬಾಗಿ 2’ ಸಿನೆಮಾದ ನಿರ್ದೇಶಕರು ಮತ್ತು ನಿರ್ಮಾಪಕರ ಮೇಲೆಯೂ ದೂರು ದಾಖಲಿಸಲು ಆಶಾನ್ ಯೋಚಿಸುತ್ತಿದ್ದಾರೆ.