ಸಂಕಷ್ಟದಲ್ಲಿದ್ದ ಮಹಿಳೆಗೆ ನೆರವಾಗಿದ್ದ ಸ್ವಸಹಾಯ ಗುಂಪಿನ ಅಧ್ಯಕ್ಷೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದರು!
ಚಿತ್ರ ಕೃಪೆ :ANI
ಬಾಲಾಸೋರ(ಒಡಿಶಾ),ಎ.19: ಸಂಕಷ್ಟದಲ್ಲಿದ್ದ ಮಹಿಳೆಯೋರ್ವಳನ್ನು ಬೆಂಬಲಿಸಿದ್ದಕ್ಕಾಗಿ ಗ್ರಾಮಸ್ಥರು ಸ್ಥಳೀಯ ಸ್ವಸಹಾಯ ಗುಂಪೊಂದರ ಅಧ್ಯಕ್ಷೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಪೈಶಾಚಿಕ ಘಟನೆ ಬಾಲಾಸೋರ ಜಿಲ್ಲೆಯ ಮನಿತ್ರಿ ಚಂದನಪುರ ಗ್ರಾಮದಲ್ಲಿ ನಡೆದಿದೆ.
ಎ.14ರಂದು ಘಟನೆ ಸಂಭವಿಸಿದ್ದು,ಸ್ವಸಹಾಯ ಗುಂಪಿನ ಅಧ್ಯಕ್ಷೆ ಸತ್ಯಭಾಮಾ ಬೆಹೆರಾ ಅವರು ತಮ್ಮ ಖಾಸಗಿ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಮತ್ತು ಸ್ಥಳೀಯ ಸಾಮಾಜಿಕ ಪದ್ಧತಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಆಕೆಯನ್ನು ಕಂಬವೊಂದಕ್ಕೆ ಕಟ್ಟಿಹಾಕಿ ಕ್ರೂರವಾಗಿ ಥಳಿಸಿದ್ದಾರೆ. ಕಿರುಕುಳಕ್ಕೊಳಗಾಗಿದ್ದ ಮಹಿಳೆಗೆ ಬೆಹೆರಾ ನೆರವಾಗುತ್ತಿರುವುದು ಗ್ರಾಮದ ಮುಖ್ಯಸ್ಥರಿಗೆ ಪಥ್ಯವಾಗಿರಲಿಲ್ಲ.
ನಾವು ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದು ಬೆಹೆರಾ ಸುದ್ದಿಗಾರರಿಗೆ ತಿಳಿಸಿದರು.
ಘಟನೆಯ ಬಳಿಕ ಸಿಮುಲಿಯಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಬೆಹೆರಾರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ತನಿಖೆಯು ಆರಂಭಗೊಂಡಿದೆ. ಘಟನೆಗೆ ಏನು ಕಾರಣವಾಗಿತ್ತು ಎನ್ನುವುದನ್ನು ತಿಳಿದುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ತನಿಖಾಧಿಕಾರಿ ಸಂಜಯ ಕುಮಾರ ಪರಿದಾ ತಿಳಿಸಿದರು.