ಇದು ಸಂವಿಧಾನದ ಉಲ್ಲಂಘನೆಯಲ್ಲವೇ?
ಮಾನ್ಯರೇ,
ಜಾತಿ ಧರ್ಮಾಧರಿತ ಸಂವಿಧಾನವನ್ನು ಒಪ್ಪಿಕೊಂಡಿರುವ ನಮ್ಮ ದೇಶದಲ್ಲಿ ನಿರ್ದಿಷ್ಟ ಧರ್ಮ, ಜಾತಿಯನ್ನು ಪ್ರತಿನಿಧಿಸುವ ಸನ್ಯಾಸಿಗಳು ಸಕ್ರಿಯ ರಾಜಕಾರಣಕ್ಕೆ ಇಳಿದಿರುವುದು ಸಂವಿಧಾನದ ಉಲ್ಲಂಘನೆಯಲ್ಲವೇ? ಇವರು ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಜಾತಿ ಧರ್ಮಾತೀತರಾಗಿ ಕರ್ತವ್ಯ ನಿರ್ವಹಿಸುವುದಾಗಿ ಹೇಗೆ ಪ್ರತಿಜ್ಞೆ ಕೈಗೊಳ್ಳುತ್ತಾರೆ?
ಹಾಗೊಂದು ವೇಳೆ ಕೈಗೊಂಡರೆ ಅವರು ತಕ್ಷಣ ಒಂದು ಧರ್ಮಕ್ಕೆ ಸಂಬಂಧಪಟ್ಟ ತಮ್ಮ ಕಾವಿ ವಸ್ತ್ರವನ್ನು ತ್ಯಜಿಸಿ ಸಾಮಾನ್ಯರಂತೆ ಉಡುಗೆ ಧರಿಸಿಕೊಳ್ಳಬೇಕಲ್ಲವೇ? ತಾವು ಸನ್ಯಾಸ ದೀಕ್ಷೆ ಪಡೆದ ಮಠದ ಸಂಪರ್ಕವನ್ನು ಅಧಿಕೃತವಾಗಿ ಕಡಿದುಕೊಳ್ಳಬೇಕಲ್ಲವೇ? ಇಂದು ಶಾಸಕ, ಮಂತ್ರಿ, ಮುಖ್ಯಮಂತ್ರಿ ಆಗಿರುವ ಕಷಾಯಧಾರಿಗಳು ಅದನ್ನು ಮಾಡಿಲ್ಲ. ಬದಲಿಗೆ ಕೇವಲ ಒಂದು ಜಾತಿ, ಧರ್ಮದವರ ಪರವಹಿಸುವ, ಅನ್ಯಮತಗಳನ್ನು ದ್ವೇಷಿಸುವ ಮತಾಂಧರಾಗಿದ್ದಾರೆ. ಕೋಮುವಾದಿಗಳು ತೋರಿಕೆಗಾದರೂ ದಲಿತರ ಮನೆಯಲ್ಲಿ ಊಟ ಮಾಡುತ್ತಾರೆ. ಆದರೆ ಮಠದ ಯತಿಗಳು ರಾಜಕಾರಣಿಗಳಾದರೆ ಅಷ್ಟನ್ನಾದರೂ ಮಾಡಬಲ್ಲರೇ? ಕೇವಲ ಮಡಿ ಮೈಲಿಗೆ ಆಡಂಬರದ ಢಾಂಬಿಕ ಭಕ್ತಿಗಳನ್ನು ಪ್ರದರ್ಶಿಸುವ, ಅನ್ಯಧರ್ಮೀಯರ ವಿಷಯದಲ್ಲಿ ಎಂತಹ ಕ್ರೌರ್ಯವನ್ನೂ ಬೆಂಬಲಿಸುವ ಇವರಿಗೆ ಟಿಕೆಟ್ ನೀಡುವುದಾದರೆ ಇತರ ಧರ್ಮಗಳ ಧಾರ್ಮಿಕ ಮುಖಂಡರೂ ರಾಜಕಾರಣಿಗಳಾಗಬಹುದಲ್ಲ?