ದಾವೂದ್ ಇಬ್ರಾಹಿಂ ಆಸ್ತಿಗಳ ಜಪ್ತಿಗೆ ಸುಪ್ರೀಂಕೋರ್ಟ್ ಆದೇಶ
ಹೊಸದಿಲ್ಲಿ, ಎ.20: ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂಗೆ ಸೇರಿರುವ ಆಸ್ತಿಗಳನ್ನು ಜಪ್ತಿ ಮಾಡುವಂತೆ ಸುಪ್ರೀಂಕೋರ್ಟ್ ಇಂದು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಮುಂಬೈನಲ್ಲಿರುವ ದಾವೂದ್ ಆಸ್ತಿಗಳನ್ನು ವಶಕ್ಕೆ ಪಡೆಯುತ್ತಿರುವುದನ್ನು ಪ್ರಶ್ನಿಸಿ ದಾವೂದ್ ಕುಟುಂಬ ಸದಸ್ಯರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಜಸ್ಟಿಸ್ ಆರ್.ಕೆ.ಅಗರವಾಲ್ ಅವರಿದ್ದ ಸುಪ್ರೀಂಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಕಳೆದ ವರ್ಷದ ನವೆಂಬರ್ನಲ್ಲಿ ದಕ್ಷಿಣ ಮುಂಬೈನಲ್ಲಿರುವ ದಾವೂದ್ ಮಾಲಕತ್ವದ ಮೂರು ಆಸ್ತಿಗಳನ್ನು 11.58 ಕೋ.ರೂ.ಗೆ ಹರಾಜು ಮಾಡಲಾಗಿತ್ತು. ಕೇಂದ್ರ ಹಣಕಾಸು ಸಚಿವಾಲಯ, ಕಳ್ಳ ಸಾಗಣೆ ಹಾಗೂ ವಿದೇಶಿ ವಿನಿಮಯ ಆಸ್ತಿಯ ಖರ್ಚು ಕಾಯ್ದೆಯ ಅಡಿ ದಾವೂದ್ ಆಸ್ತಿಯನ್ನು ಹರಾಜಿಗಿಟ್ಟಿತ್ತು. ಡೆಲ್ಲಿ ಝೈಕಾ, ಶಬ್ನಂ ಗೆಸ್ಟ್ಹೌಸ್ ಹಾಗೂ ದಮರ್ವಾಲಾ ಬಿಲ್ಡಿಂಗ್ನ ಆರು ಕೊಠಡಿಗಳನ್ನು ಹರಾಜು ಮಾಡಲಾಗಿತ್ತು.
ದಾವೂದ್ಗೆ ಭಾರತದಲ್ಲಿ ಮಾತ್ರವಲ್ಲ ಬ್ರಿಟಿನ್ನಲ್ಲೂ ಆಸ್ತಿಪಾಸ್ತಿಯಿದೆ ಎಂದು 2 ತಿಂಗಳ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದೆ.