ಸಿದ್ಧಾಂತಗಳನ್ನು ಹೇರುತ್ತಿರುವ ಕಾರಣದಿಂದ ನಾನು ಬಿಜೆಪಿಗೆ ವಿರುದ್ಧವಾಗಿದ್ದೇನೆ: ಪ್ರಕಾಶ್ ರೈ
ಮಂಡ್ಯ, ಎ.21: ಯಾವ ರಾಜಕೀಯ ಪಕ್ಷದ ಮೇಲೂ ನನಗೆ ನಂಬಿಕೆಯಿಲ್ಲ. ಏಕೆಂದರೆ ಎಲ್ಲಾ ಪಕ್ಷಗಳು ನಂಬಿಕೆ ಕಳೆದುಕೊಂಡಿವೆ. ಎಲ್ಲಾ ಪಕ್ಷಗಳಲ್ಲೂ ದೊಡ್ಡ ಕಳ್ಳರು, ಸಣ್ಣ ಕಳ್ಳರು ಇದ್ದಾರೆ ಎಂದು ನಟ, ನಿರ್ದೇಶಕ ಪ್ರಕಾಶ್ ರೈ ಹೇಳಿದರು.
ಮಂಡ್ಯದ ಕಾರ್ಯನಿರತ ಪತ್ರಕರ್ತರ ಸಂಘದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೌರಿಲಂಕೇಶ್ ಹತ್ಯೆಯ ನಂತರ ನಾನು ಎಚ್ಚರವಾದೆ. ಆನಂತರ ನಾನು ಏನೇ ಮಾತಾಡಿದರೂ ವಿವಾದವಾಗುತ್ತಿದೆ. ನಾನು ನಿಷ್ಟುರವಾಗಿ, ಹೆದರಿಕೆಯಿಲ್ಲದೆ ಮಾತನಾಡುತ್ತೇನೆ. ಹಾಗಾಗಿ ನನ್ನ ಮಾತುಗಳು ವಿವಾದವಾಗುತ್ತಿವೆ ಎಂದರು.
ಕೋಮುವಾದ ಈ ದೇಶಕ್ಕೆ ದೊಡ್ಡ ರೋಗವಾಗಿದೆ. ಆದರೆ ಇಲ್ಲಿ ಎಲ್ಲರೂ ಬದುಕಬೇಕು. ನಾವು ಹೀಗೆ ಇರಬೇಕು ಅನ್ನೋದನ್ನ ಬಲವಂತಪಡಿಸುತ್ತಿರುವ, ಸಿದ್ಧಾಂತಗಳನ್ನ ಹೇರುತ್ತಿರುವ ಕಾರಣ ನಾನು ಬಿಜೆಪಿಗೆ ವಿರುದ್ಧವಾಗಿದ್ದೇನೆ. ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಬೇಕು. ಹೀಗಾಗಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಲ್ಲಿ ಅರಿವು ಮೂಡಿಸುವ ಯತ್ನ ಮಾಡುತ್ತಿದ್ದೇನೆ. ಮೊದಲು ನಮ್ಮನ್ನ ಕೊಲ್ಲುವ ರಾಕ್ಷಸನಿಂದ ರಕ್ಷಿಸಿಕೊಳ್ಳಬೇಕು, ಉಳಿದ ರಾಕ್ಷಸರ ಬಗ್ಗೆ ಆ ಮೇಲೆ ನೋಡಿಕೊಳ್ಳೋಣ ಎಂದು ಪ್ರಕಾಶ್ ರೈ ಹೇಳಿದರು.