ಅಧಿಕಾರ ದುರುಪಯೋಗದ ಬಗ್ಗೆ ಒಂದೇ ಒಂದು ದೂರು ನೀಡಿದರೂ ರಾಜಕೀಯ ನಿವೃತ್ತಿ: ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್
ಚಿಕ್ಕಮಗಳೂರು, ಎ.21: ಜನತಾ ಪಕ್ಷದ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಮಂತ್ರಿಯಾಗಿ ಜನರ ಸೇವೆ ಮಾಡಿದ್ದೇನೆ. ಸಂಸದನಾಗಿಯೂ ರಾಜ್ಯವನ್ನು ಪ್ರತಿನಿಧಿಸಿದ್ದೇನೆ. ವಿಧಾನಸಭೆ ಸಭಾಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಅಲ್ಲದೆ ರಾಜಕೀಯ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳನ್ನು ಜವಾಬ್ದಾರಿಯನ್ನೂ ನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಒಂದೇ ಒಂದು ದೂರು ನೀಡಿದರೂ ತಾನು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಸವಾಲು ಹಾಕಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಬೇಕೆಂದು ತಾನು ಪಕ್ಷದ ವರಿಷ್ಠರಿಗೆ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ವರಿಷ್ಠರು ತನ್ನನ್ನು ಚಿಕ್ಕಮಗಳೂರು ಕ್ಷೆತ್ರದಲ್ಲಿ ಪಕ್ಷದ ಹುರಿಯಾಳಾಗಿ ಕಣಕ್ಕಿಳಿಯಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ ಪಕ್ಷ ತಳೆದ ನಿಲುವಿನಂತೆ ಪ್ರಚಾರ ಕೈಗೊಂಡಿದ್ದೇನೆ. ಆದರೆ ಶಾಸಕ ಸಿ.ಟಿ ರವಿ ಸೇರಿದಂತೆ ತನ್ನ ವಿರೋಧಿಗಳು ಸೋಲುವ ಭೀತಿಯಿಂದಾಗಿ ತನ್ನ ವಿರುದ್ಧ ವೈಟ್ ಕಾಲರ್ ರಾಜಕಾರಣಿ, ಶಾಸಕನಾದಲ್ಲಿ ಜನರ ಕೈಗೆ ಸಿಗುವುದಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿರುವ ವ್ಯಕ್ತಿ ಎಂದು ಟೀಕಿಸುತ್ತಿದ್ದಾರೆ. ಆದರೆ ಈ ಆರೋಪಗಳು ಹತಾಶೆಯ ಪ್ರತೀಕವಾಗಿದ್ದು, ತಾನು ರಾಜಕೀಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳದಿರುವುದು ನಿಜವಾದರೂ ಪಕ್ಷ ನೀಡಿದ ಜವಬ್ದಾರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಕ್ರೀಯನಾಗಿದ್ದೆ. ಕಾರ್ಯಕ್ಷೇತ್ರ ವಿಶಾಲವಾಗಿದ್ದಾಗ ಅಲ್ಲಿರುವುದು ಅನಿವಾರ್ಯ. ರಾಜಕಾರಣಿಯಾದವನಿಗೆ ಕಣ್ಣು ಮತ್ತು ಕಿವಿ ಯಾವಾಗಲೂ ತೆರೆದಿರಬೇಕು. ಬಾಯಿ ಮುಚ್ಚಿರಬೇಕು. ಸಿ.ಟಿ.ರವಿ ಕಣ್ಣು, ಕಿವಿ ಮುಚ್ಚಿಕೊಂಡಿದ್ದಾರೆ. ಬಾಯಿಯನ್ನು ಮಾತ್ರ ತೆರದಿಟ್ಟುಕೊಂಡಿದ್ದಾರೆ. ಕ್ಷೇತ್ರದ ಜನರು ತನ್ನನು ಶಾಸಕನಾಗಿ ಆರಿಸಿ ಜವಾಬ್ದಾರಿ ನೀಡದಲ್ಲಿ ಆ ಜವಾಬ್ದಾರಿ, ಕಾರ್ಯಕ್ಷೇತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ. ವೈಟ್ ಕಾಲರ್ ರಾಜಕಾರಣಿ, ಹೊರಗಿನ ವ್ಯಕ್ತಿ ಎಂಬ ಟೀಕೆ ಕೇವಲ ಹತಾಶೆಯ ಪ್ರತೀಕ. ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರೂ ಈ ಕ್ಷೇತದವರಲ್ಲ. ತಾನು ಹೊರಗಿದ್ದು ರಾಜಕಾರಣ ಮಾಡಿದ್ದರೂ ಜಿಲ್ಲೆಗೆ ಅಗೌರವ ತರುವ ಕೆಲಸ ಮಾಡಿಲ್ಲ ಎಂದರು.
ಟಿಕೆಟ್ ಘೋಷಣೆಯ ಬಳಿಕ ಜಿಲ್ಲೆಯ ಕೆಲ ಟಿಕೆಟ್ ಆಕಾಂಕ್ಷಿಗಳು ಅಸಮಧಾನಗೊಂಡಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಭೆಗಳನ್ನು ನಡೆಸಿ ಗೊಂದಲಗಳಿಗೆ ತೆರೆ ಎಳೆಯಲಾಗಿದೆ. ಕಡೂರು, ತರೀಕೆರೆ ಕ್ಷೇತ್ರಗಳಲ್ಲಿ ಈ ಬಗ್ಗೆ ಸಭೆಗಳು ನಡೆದಿದ್ದು, ಎಲ್ಲವೂ ಸರಿಯಾಗಿದೆ ಎಂದ ಅವರು, ಐದೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಬಿರುಸಿನ ಪ್ರಚಾರ ನಡೆಸುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ 5 ವರ್ಷಗಳಲ್ಲಿ ನೀಡಿದ ಉತ್ತಮ ಆಡಳಿತ ಹಾಗೂ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಜನಾದೇಶಕ್ಕಾಗಿ ಮತಯಾಚನೆ ಮಾಡಲಾಗುವುದು ಎಂದರು.
ಕ್ಷೇತ್ರದ ಶಾಸಕ ಸಿ.ಟಿ.ರವಿ ಕಳೆದ 15 ವರ್ಷಗಳ ಅವಧಿಯಲ್ಲಿ ಜಿಲ್ಲೆ ಹಾಗೂ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಕಡೆಗಣಿಸಿದ್ದಾರೆ. ಜಿಲ್ಲೆಯನ್ನು ಮಾದರಿಯಾಗಿ ರೂಪಿಸುವಂತಹ ಅವಕಾಶವನ್ನು ಜನತೆ ನೀಡಿದ್ದರೂ ಅವರು ಅದನ್ನು ನಿರ್ಲಕ್ಷ್ಯಿಸಿದ್ದಾರೆ. ಬಿಜೆಪಿ ಶಾಸಕರಿಗೆ ಅನುದಾನ ಒದಗಿಸುವಲ್ಲಿ ಸಿಎಂ ಸಿದ್ದರಾಮಯ್ಯ ತಾರತಮ್ಯ ಮಾಡುತ್ತಿದ್ದಾರೆಂದು ಶಾಸಕ ರವಿ ಆರೋಪಿಸುತ್ತಿದ್ದು, ಮತ್ತೊಂದೆಡೆ ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಭಾರೀ ಅಭಿವೃದ್ಧಿ ಮಾಡಿದ್ದೇನೆಂದು ಹೇಳುತ್ತಿದ್ದಾರೆ. ಆದರೆ ಭಾರೀ ಅಭಿವೃದ್ಧಿಗೆ ಅನುದಾನ ನೀಡಿದ್ದು ಯಾರೆಂದು ರವಿ ಸ್ಪಷ್ಟಪಡಿಸಲಿ ಎಂದ ಅವರು, ರಾಜ್ಯ ಸರಕಾರ ಎಲ್ಲ ಶಾಸಕರಿಗೆ ತಾರತಮ್ಯ ಮಾಡದೇ ಅನುದಾನ ನೀಡಿದ್ದಾರೆ. ಸಿ.ಟಿ.ರವಿಗೆ ಅನುದಾನ ಸಿಕ್ಕಿಲ್ಲ ಎಂದರೆ ಅದಕ್ಕೆ ರವಿ ಅವರ ಸಾಮರ್ಥ್ಯದ ವೈಫಲ್ಯವೇ ಹೊರತು ರಾಜ್ಯ ಸರಕಾರ ತಾರತಮ್ಯ ಮಾಡಿಲ್ಲ ಎಂದು ಬಿ.ಎಲ್.ಶಂಕರ್ ಹೇಳಿದರು.
ಚಿಕ್ಕಮಗಳೂರು ನಗರಕ್ಕೆ ಯಗಚಿ ನೀರು ತಂದಿದ್ದು ಮಾಜಿ ಸಚಿವ ಸಗೀರ್ ಅಹ್ಮದ್, ರೈಲ್ವೆಯೋಜನೆಗೆ ಅಡಿಗಲ್ಲು ಹಾಕಿದ್ದು ಜನತಾಪಕ್ಷ ಸರಕಾರ. ಶಾಸಕರಾಗಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವರೂ ಆಗಿದ್ದವರು. ಈ ಅವಧಿಯಲ್ಲಿ ಅವರು ಕಡೂರು, ತರೀಕೆರೆಯ ನೀರಾವರಿ ಸಮಸ್ಯೆಗೆ ಶಾಶ್ವತ ಯೋಜನೆ ರೂಪಿಸಬಹುದಿತ್ತು. ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕರಗಡ ಯೋಜನೆ ಜಾರಿಗೂ ಕ್ರಮ ವಹಿಸಬಹುದಿತ್ತು. ಜಿಲ್ಲೆಯಲ್ಲಿ ಲಭ್ಯವಿರುವ ನೀರನ್ನು ಬಯಲು ಸೀಮೆಗೆ ನೀಡುವ ಬಗ್ಗೆ ಶಾಶ್ವತ ಯೋಜನೆ ಜಾರಿ ಮಾಡುವ ಬಗ್ಗೆ ದೂರದೃಷ್ಟಿತನ ಪ್ರದರ್ಶಿಸದೇ ಕೇವಲ ಗುತ್ತಿಗೆದಾರರಿಗೆ ಅನುಕೂಲವಾಗುವ ಕೆಲಸಗಳ ಬಗ್ಗೆ ರವಿ ಆಸಕ್ತಿ ವಹಿಸಿದ್ದರ ಫಲವಾಗಿ ಜಿಲ್ಲೆಯ ಜನರು ನೀರಾವರಿ ಸೌಲಭ್ಯದಿಂದ ವಂಚಿತರಾಗು ಗುಳೇ ಹೋಗುವಂತಾಗಿದೆ. ಈ ಕಾರಣಕ್ಕೆ ಜಿಲ್ಲೆಯ ಜನತೆ 15 ವರ್ಷಗಳಿಂದ ಬಿಜೆಪಿಯ ಶಾಸಕರು, ಸಂಸದರ ಹಿಡಿತದಲ್ಲಿದ್ದ ಜಿಲ್ಲೆಯಲ್ಲಿ ಮತದಾರರು ಕಾಂಗ್ರೆಸ್ ಸರಕಾರದ ಆಡಳಿತ ಮೆಚ್ಚಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಧಿಕಾರ ನೀಡಲು ಬಯಸಿದ್ದಾರೆಂದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ಕುಮರ್, ಎ.ಎನ್.ಮಹೇಶ್, ಎಂ.ಎಲ್.ಮೂರ್ತಿ, ಶಾಂತೇಗೌಡ, ನಗರಸಭೆ ಸದಸ್ಯ ಹನೀಫ್, ಶಿವನಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಮಂತ್ರಿಯಾಗಿ, ಸಂಸದರಾಗಿ, ವಿಧಾನಸಭಾಕ್ಷರಾಗಿರುವ ಬಿ.ಎಲ್.ಶಂಕರ್ ಅವರಂತಹ ಸಜ್ಜನ ರಾಜಕಾರಣಿ ಸಿಗುವುದು ಅಪರೂಪ. ಇಂತವರು ದೂರದೃಷ್ಟಿ ಇರುವವರು ಕ್ಷೇತ್ರವನ್ನು ಪ್ರತಿನಿಧಿಸಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ. ಕಳೆದ 15 ವರ್ಷಗಳಲ್ಲಿ ಸಿ.ಟಿ.ರವಿಗೆ ನಗರದಲ್ಲಿರುವ ಮೂರು ರಸ್ತೆಗಳ ಅಭಿವೃದ್ಧಿಗೆ ಮಾಡಲು ಸಾಧ್ಯವಾಗಿಲ್ಲ.
- ಸಗೀರ್ ಅಹ್ಮದ್, ಮಾಜಿ ಸಚಿವ
23ಕ್ಕೆ ನಾಮಪತ್ರ ಸಲ್ಲಿಕೆ:
ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿದೆ. ರಾಜ್ಯದ ಭೂಪಟದಲ್ಲಿ ಜಿಲ್ಲೆಯನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲೂ ದೂರದೃಷ್ಟಿಯ ಪರಿಕಲ್ಪನೆ ನನ್ನಲ್ಲಿದೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಜನರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಎ.23ರಂದು ಸೋಮವಾರ ತಾನು ನಾಮಪತ್ರ ಸಲ್ಲಿಸುತ್ತೇನೆ. ತನಗೆ ಹಣ ಮಾಡುವ ಆಸೆ ಇಲ್ಲ. ತನ್ನ ಕುಟುಂಬದಲ್ಲಿ ಗುತ್ತಿಗೆದಾರರೂ ಯಾರೂ ಇಲ್ಲ. ಕುಟುಂಬದಿಂದ ಯಾರಾದರೂ ರಾಜಕೀಯಕ್ಕೆ ಬಂದಲ್ಲಿ ತಾನು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಯುತ್ತೇನೆ.
- ಬಿ.ಎಲ್.ಶಂಕರ್,