ತಲೆಗಾದ ಗಾಯಕ್ಕೆ ಚಿಕಿತ್ಸೆಗೆ ಬಂದವನ ಕಾಲು ಕೊರೆದ ವೈದ್ಯರು!
ಹೊಸದಿಲ್ಲಿ, ಎ.23: ತಲೆಗಾದ ಗಾಯಕ್ಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರಿಗೆ ವೈದ್ಯರು ಕಾಲಿಗೆ ಚಿಕಿತ್ಸೆ ನೀಡಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ.
ಅಪಘಾತವೊಂದರಲ್ಲಿ ವಿಜೇಂದ್ರ ತ್ಯಾಗಿ ಎಂಬವರ ಮುಖ ಹಾಗು ತಲೆಗೆ ಸಣ್ಣ ಗಾಯಗಳಾಗಿದ್ದು, ಅವರು ಟ್ರಾಮಾ ಸೆಂಟರ್ ಒಂದಕ್ಕೆ ದಾಖಲಾಗಿದ್ದರು. ಆದರೆ ವೈದ್ಯರು ಗೊಂದಲಕ್ಕೊಳಗಾಗಿ ಮತ್ತೊಬ್ಬ ರೋಗಿಗೆ ನೀಡಬೇಕಾದ ಚಿಕಿತ್ಸೆಯನ್ನು ವಿಜೇಂದ್ರರಿಗೆ ನೀಡಿದ್ದಾರೆ.
“ನನ್ನ ತಂದೆಯ ಬಲಗಾಲನ್ನು ಕೊರೆದ ವೈದ್ಯರು ಪಿನ್ ಒಂದನ್ನು ಹಾಕಿದರು. ಅನಸ್ತೇಶಿಯಾ ನೀಡಿದ್ದರಿಂದ ತಪ್ಪಿನ ಬಗ್ಗೆ ಎಚ್ಚರಿಸಲು ಸಾಧ್ಯವಾಗಲಿಲ್ಲ” ಎಂದು ವಿಜೇಂದ್ರರ ಪುತ್ರ ಅಂಕಿತ್ ತ್ಯಾಗಿ ಹೇಳಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಹಾಗು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನನ್ನ ತಂದೆಗೆ ಅಪಘಾತದಿಂದಾದ ಗಾಯಗಳ ನೋವು ಇನ್ನೂ ಇದೆ. ಆದರೆ ಈಗ ಅವರಿಗೆ ನಡೆಯಲೂ ಸಾಧ್ಯವಾಗುತ್ತಿಲ್ಲ” ಎಂದು ಅಂಕಿತ್ ಹೇಳುತ್ತಾರೆ. ವೈದ್ಯರ ವಿರುದ್ಧ ಯಾವುದೇ ಕಾನೂನು ಹೋರಾಟ ನಡೆಸಲು ರೋಗಿಯ ಕುಟುಂಬ ನಿರ್ಧರಿಸಿಲ್ಲ.