ಶ್ರೀಜಿತ್ ಕಸ್ಟಡಿ ಸಾವು: ಸಿಬಿಐ ತನಿಖೆಗೆ ಆಗ್ರಹಿಸಿ ಚೆನ್ನಿತಲರಿಂದ ಉಪವಾಸ ಧರಣಿ
ಕೊಚ್ಚಿ,ಎ.23: ಇಲ್ಲಿಯ ವರಪುಝಾದಲ್ಲಿ ಎಸ್.ಆರ್.ಶ್ರೀಜಿತ್(26) ಕಸ್ಟಡಿ ಸಾವು ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ರಮೇಶ ಚೆನ್ನಿತಲ ಅವರು ಸೋಮವಾರ ಮರೀನ್ ಡ್ರೈವ್ ಮೈದಾನದಲ್ಲಿ 24 ಗಂಟೆಗಳ ಉಪವಾಸ ಮುಷ್ಕರವನ್ನು ಆರಂಭಿಸಿದರು.
ಕಸ್ಟಡಿ ಸಾವಿನ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದ ಪ್ರತಿಪಕ್ಷ ನಾಯಕರೂ ಆಗಿರುವ ಅವರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶ್ರೀಜಿತ್ ಸಾವಿನ ಹೊಣೆಯನ್ನು ಹೊತ್ತುಕೊಂಡು ಗೃಹಖಾತೆಯನ್ನು ತ್ಯಜಿಸಬೇಕು ಎಂದೂ ಆಗ್ರಹಿಸಿದರು.
ವ್ಯಕ್ತಿಯೋರ್ವನ ಸಾವಿಗೆ ಸಂಬಂಧಿಸಿದಂತೆ ಶ್ರೀಜಿತ್ನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಆತ ಎ.9ರಂದು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಕಸ್ಟಡಿಯಲ್ಲಿ ಚಿತ್ರಹಿಂಸೆ ಇದಕ್ಕೆ ಕಾರಣವೆಂದು ಸಂಬಂಧಿಕರು ಆರೋಪಿಸಿದ್ದಾರೆ.
ಆರೋಪವನ್ನು ನಿರಾಕರಿಸಿರುವ ಪೊಲೀಸರು,ತಾವು ವಶಕ್ಕೆ ತೆಗೆದುಕೊಳ್ಳುವ ಮುನ್ನವೇ ಶ್ರೀಜಿತ್ ಘರ್ಷಣೆಯೊಂದರಲ್ಲಿ ಗಾಯಗೊಂಡಿದ್ದ ಎಂದು ಸಮರ್ಥಿಸಿಕೊಂಡಿದ್ದಾರೆ.
ಶ್ರೀಜಿತ್ನ ಸಾವಿಗೆ ಕಾರಣವಾದ ಘಟನೆಗಳ ತನಿಖೆಗಾಗಿ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವರಪುಝಾ ಎಸ್ಐ ದೀಪಕ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು,ಅಲುವಾ(ಗ್ರಾಮಾಂತರ)ಎಸ್ಪಿ ಎ.ವಿ.ಜಾರ್ಜ್ ಅವರನ್ನು ತ್ರಿಶೂರು ಪೊಲೀಸ್ ಅಕಾಡೆಮಿಗೆ ವರ್ಗಾವಣೆ ಮಾಡಲಾಗಿದೆ.