ಉಡುಪಿ: 16 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಉಡುಪಿ, ಎ.23: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಐದನೇ ದಿನವಾದ ಇಂದು ಉಡುಪಿ ಜಿಲ್ಲೆಯಲ್ಲಿ 16 ಅಭ್ಯರ್ಥಿಗಳಿಂದ ಒಟ್ಟು 37 ನಾಮಪತ್ರಗಳು ಸಲ್ಲಿಕೆಯಾಗಿವೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯಥಿಯಾಗಿ ಕೆ.ಗೋಪಾಲ ಪೂಜಾರಿ 4, ಜೆಡಿಎಸ್ ಅಭ್ಯರ್ಥಿಯಾಗಿ ಸಿ.ರವೀಂದ್ರ ಯಾನೆ ರವಿ ಶೆಟ್ಟಿ, ಜನತಾದಳ ಯುನೈಟೆಡ್ ಅಭ್ಯರ್ಥಿಯಾಗಿ ಮಂಜುನಾಥ ಕೆ. ನಾಲ್ಕು ನಾಮ ಪತ್ರ, ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿಯ ಅಭ್ಯರ್ಥಿ ಯಾಗಿ ಅಬ್ದುಲ್ ಅಝೀಝ್ ಮೂರು ನಾಮಪತ್ರ ಸಲ್ಲಿಸಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಿರಣ್ ಕುಮಾರ್ ಕೊಡ್ಗಿ 2 ನಾಮಪತ್ರ, ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಪ್ರಕಾಶ್ ಶೆಟ್ಟಿ, ಆರ್ಪಿಐ ಅಭ್ಯರ್ಥಿಯಾಗಿ ಸುಧಾಕರ 2 ನಾಮಪತ್ರ ಸಲ್ಲಿಸಿದರು. ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ 4 ನಾಮಪತ್ರ, ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ 4 ನಾಮಪತ್ರ ಹಾಗೂ ಭಾರತೀಯ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಶೇಖರ್ ಹಾವಂಜೆ 2 ನಾಮಪತ್ರ ಸಲ್ಲಿಸಿದರು.
ಕಾಪು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ 4 ನಾಮಪತ್ರ, ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್.ಮೆಂಡನ್ ನಾಮ ಪತ್ರ ಸಲ್ಲಿಸಿದರು. ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಅಶ್ರಫ್ ಅಲಿ, ಸುಮಂತ ಕೆ.ಪೂಜಾರಿ, ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್, ಬಿಎಸ್ಪಿ ಅಭ್ಯರ್ಥಿ ಉದಯ ಕುಮಾರ್ ಎರಡು ನಾಮಪತ್ರ ಸಲ್ಲಿಸಿದರು.