ಬಾಲಕಿಯ ಅತ್ಯಾಚಾರ, ಹತ್ಯೆ: ಅಮೆಮಾರ್ ನಲ್ಲಿ ಪ್ರತಿಭಟನೆ
ಫರಂಗಿಪೇಟೆ, ಎ. 23: ಕಥುವಾದಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರ, ಹತ್ಯೆ ಮತ್ತು ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ 14 ಹರೆಯದ ಬಾಲಕಿಯ ಅತ್ಯಾಚಾರ ಖಂಡಿಸಿ ಮತ್ತು ದೇಶದಾದ್ಯಂತ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ಬದ್ರಿಯಾ ಮಸೀದಿ ಮತ್ತು ಮದರಸ ಅಮೆಮಾರ್ ಆಡಳಿತ ಸಮಿತಿ ವತಿಯಿಂದ ಪ್ರತಿಭಟನಾ ದರಣಿ ನಡೆಯಿತು.
ಬಾಲಕಿಯ ಮೇಲೆ ನಡೆದ ಕ್ರೂರತೆಯನ್ನು ಖಂಡಿಸಿ, ಮಾತನಾಡಿದ ಮಸೀದಿಯ ಖತೀಬ್ ಅಬೂಸ್ವಾಲಿಹ್ ಪೈಝಿ ದೇಶದಾದ್ಯಂತ ಈ ಪೈಶಾಚಿಕ ಕೃತ್ಯದ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟಿಸಿದ ಕಾರಣದಿಂದ ಕೇಂದ್ರ ಸರಕಾರ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಿಗೆ ಗಲ್ಲು ಶಿಕ್ಷೆ ಕಾನೂನನ್ನು ಜಾರಿಗೆ ತಂದಿದೆ ಇದು ಶ್ಲಾಘನೀಯ, ಸಾಕಷ್ಟು ಆಮಿಷ, ಬೆದರಿಕೆ, ಒತ್ತಡದ ನಡುವೆಯೂ ಬಾಲಕಿಯ ಮೇಲೆ ನಡೆದ ಅತೀ ಕ್ರೂರತೆಯನ್ನು ಬಯಲಿಗೆಳೆದು ಸಮಾಜಕ್ಕೆ ತೋರಿಸಿದ ಅಧಿಕಾರಿಗಳ ದಿಟ್ಟತನವನ್ನು ಶ್ಲಾಘಿಸಿದರು.
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ, ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಉಪಾಧ್ಯಕ್ಷ ಅಬ್ದುಲ್ ಖಾದರ್ ಎಫ್.ಎ ಈ ಸಂದರ್ಭದಲ್ಲಿ ಮಾತನಾಡಿದರು.
ಪ್ರತಿಭಟನಕಾರರು ಪ್ಲೇಕಾರ್ಡ್ ಹಿಡಿದು ಬಾಲಕಿಗೆ ನ್ಯಾಯಕ್ಕಾಗಿ ಘೋಷಣೆ ಕೂಗಿದರು. ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಸಿದ್ದೀಖ್ ಎಮ್.ಎಸ್, ಕೋಶಾಧಿಕಾರಿ ಮುಸ್ತಫ, ಕಾರ್ಯದರ್ಶಿ ಮಹಮ್ಮದ್ ಶಾಫಿ, ಸದಸ್ಯರಾದ ಜಮಾಲ್, ಸುಲೈಮಾನ್ ಉಸ್ತಾದ್ ಇಬ್ರಾಹಿಂ, ಉಮರಬ್ಬ, ಉಸ್ಮಾನ್ ಹಾಗೂ ಪುದು ಗ್ರಾಮ ಪಂಚಾಯತ್ ಸದಸ್ಯರಾದ ಅಕ್ತಾರ್ ಹಸೈನ್, ಅಬ್ದುಲ್ ರಝಾಕ್, ಪೈಝಲ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಬಶೀರ್ ತಂಡೆಲ್ ಉಪಸ್ಥಿತರಿದ್ದರು.