4 ಜಿಲ್ಲೆಗಳ ಕಾಂಗ್ರೆಸ್ ಪ್ರಚಾರ ಸಮಿತಿ ಉಸ್ತುವಾರಿ ವೀಕ್ಷಕರಾಗಿ ಫಾರೂಕ್ ಉಳ್ಳಾಲ ನೇಮಕ
ಮಂಗಳೂರು, ಎ.24: ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಚುನಾವಣಾ ಪ್ರಚಾರ ಸಮಿತಿಯು ದ.ಕ., ತುಮಕೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾ ಉಸ್ತುವಾರಿ ವೀಕ್ಷಕರಾಗಿ ಫಾರೂಕ್ ಉಳ್ಳಾಲ್ ಅವರನ್ನು ನೇಮಕಗೊಳಿಸಿ ಆದೇಶಿಸಿದೆ.
ಉತ್ತಮ ಸಂಘಟಕ, ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರರಾಗಿದ್ದ ಫಾರೂಕ್ ಉಳ್ಳಾಲ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಜವಾಬ್ದಾರಿ ವಹಿಸಿದ್ದಾರೆ.
ದ.ಕ. ಸಹಿತ ಜವಾಬ್ದಾರಿ ವಹಿಸಿರುವ ನಾಲ್ಕು ಜಿಲ್ಲೆಗಳಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರ ಮತ್ತು ಅಭ್ಯರ್ಥಿಗಳ ನೇರ ಸಂಪರ್ಕವನ್ನಿಟ್ಟು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸೂಕ್ತ ನಿರ್ದೇಶನ, ಕಾರ್ಯಕರ್ತರ ಸ್ಫೂರ್ತಿಯನ್ನು ಇಮ್ಮಡಿಗೊಳಿಸಲು ಅಗತ್ಯ ಪ್ರಚಾರ ವೈಖರಿಯನ್ನು ಕೈಗೊಳ್ಳಬೇಕು. ಅದೇರೀತಿ ನಾಲ್ಕು ಜಿಲ್ಲೆಗಳ ಕ್ಷೇತ್ರವಾರು ಸಮೀಕ್ಷೆಯನ್ನು, ಕುಂದುಕೊರತೆಗಳನ್ನೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಕೇಂದ್ರ ಕಚೇರಿಗೆ ವರದಿ ಮಾಡುವಂತೆ ಫಾರೂಕ್ರಿಗೆ ನೀಡಿರುವ ಆದೇಶ ಪತ್ರದಲ್ಲಿ ಡಿಕೆಶಿ ಸೂಚಿಸಿದ್ದಾರೆ.