ಕಥುವಾ ನಂತರ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಶಾಸಕನ ಪರ ರ್ಯಾಲಿ
ಲಕ್ನೋ, ಎ.24: ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಕುಲ್ ದೀಪ್ ಸಿಂಗ್ ಸೇಂಗರ್ ಪರ ನೂರಕ್ಕೂ ಅಧಿಕ ಮಂದಿ ರ್ಯಾಲಿ ನಡೆಸಿರುವ ಬಗ್ಗೆ ವರದಿಯಾಗಿದೆ. ಬಂಗರ್ಮಾವು, ಸಫೀಪುರ್, ಬಿಘಾಪುರ್ ಹಾಗು ಸಮೀಪದ ಪ್ರದೇಶಗಳ ನೂರಾರು ಮಂದಿ ರ್ಯಾಲಿ ನಡೆಸಿದ್ದಾರೆ.
ಉನ್ನಾವೋ ಅತ್ಯಾಚಾರ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ಶಾಸಕ ಸೇಂಗರ್ ಅಮಾಯಕ ಎಂದು ರ್ಯಾಲಿಯಲ್ಲಿದ್ದವರು ಹೇಳಿದರು. ನಗರ ಪಂಚಾಯತ್ ಅಧ್ಯಕ್ಷ ಅನೂಜ್ ಕುಮಾರ್ ದೀಕ್ಷಿತ್ ನ ನೇತೃತ್ವದಲ್ಲಿ ರ್ಯಾಲಿ ನಡೆಯಿತು.
“ನಮ್ಮ ಶಾಸಕರ ಮಾಡಿದ ಪಿತೂರಿ ಇದು. ಶಾಸಕರು ಅಮಾಯಕರಾಗಿದ್ದು, ಸುಳ್ಳು ದೂರುಗಳನ್ನು ಹೊರಿಸಲಾಗಿದೆ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಗೆ ನಾವು ಒತ್ತಾಯಿಸುತ್ತೇವೆ” ಎಂದು ದೀಕ್ಷಿತ್ ಹೇಳಿದ್ದಾರೆ.
ಕಥುವಾ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲೂ ಆರೋಪಿಗಳ ಪರವಾಗಿ ಬಿಜೆಪಿ ಸಚಿವರ ನೇತೃತ್ವದಲ್ಲಿ ರ್ಯಾಲಿಯೊಂದು ನಡೆದಿತ್ತು. ಹಿಂದೂ ಏಕ್ತಾ ಮಂಚ್ ಈ ರ್ಯಾಲಿಯನ್ನು ಆಯೋಜಿಸಿತ್ತು. ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಿಜೆಪಿ ಶಾಸಕನನ್ನು ಬಂಧಿಸಲಾಗಿದೆ.