ಬಿಜೆಪಿಯ 5ನೇ ಪಟ್ಟಿ ಬಿಡುಗಡೆ: ವರುಣಾ, ಬಾದಾಮಿ ಅಭ್ಯರ್ಥಿಗಳ ಹೆಸರಿಲ್ಲ
ಬೆಂಗಳೂರು, ಎ. 24: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು, ಅರಸೀಕೆರೆ ಕ್ಷೇತ್ರದಿಂದ ಮಾಜಿ ಸಚಿವ ವಿ. ಸೋಮಣ್ಣ ಪುತ್ರ ಡಾ.ಅರುಣ್ ಸೋಮಣ್ಣ ಸ್ಪರ್ಧಿಸಲು ನಿರಾಕರಿಸಿದ ಕಾರಣ ಆ ಕ್ಷೇತ್ರಕ್ಕೆ ಬೆಂಗಳೂರು ನಗರ ಜಿ.ಪಂ.ಮಾಜಿ ಸದಸ್ಯ ಮರಿಸ್ವಾಮಿಗೆ ಟಿಕೆಟ್ ನೀಡಲಾಗಿದೆ.
ಮೇಲುಕೋಟೆ ಕ್ಷೇತ್ರದೀಂದ ಈ ಹಿಂದೆ ಪ್ರಕಟಿಸಿದ್ದ ಅಭ್ಯರ್ಥಿ ಮಂಜುನಾಥ್ ಹಿಂದೆ ಸರಿದಿದ್ದರಿಂದ ಶಿವಲಿಂಗೇಗೌಡಗೆ ಬಿ ಫಾರಂ ವಿತರಿಸಲಾಗಿದೆ. ಸಕಲೇಶಪುರ ಮೀಸಲು ಕ್ಷೇತ್ರದಿಂದ ಸೋಮಶೇಖರ್, ಮಧುಗಿರಿಯಿಂದ ರಮೇಶ್ ರೆಡ್ಡಿ, ಶಿರಾ ಕ್ಷೇತ್ರದಿಂದ ಎಸ್.ಆರ್.ಗೌಡ, ಶಿಡ್ಲಘಟ್ಟದಿಂದ ಎಚ್.ಸುರೇಶ್, ಶ್ರೀನಿವಾಸಪುರ ಕ್ಷೇತ್ರದಿಂದ ಡಾ.ವೇಣುಗೋಪಾಲ್, ಮಂಡ್ಯ ನಗರ ಕ್ಷೇತ್ರದಿಂದ ಚಂದಗಾಲ ಶಿವಣ್ಣ ಇವರ ಹೆಸರು ಪ್ರಕಟಿಸಲಾಗಿದ್ದು, ಎಲ್ಲ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಕೊನೆಯ ಕ್ಷಣದಲ್ಲಿ ಮೈಸೂರಿನ ವರುಣಾ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಸಮ್ಮತಿಸದ ಕಾರಣ ಆ ಕ್ಷೇತ್ರಕ್ಕೆ ಬಸವರಾಜು ಅವರಿಗೆ ಬಿಜೆಪಿ ಬಿಫಾರಂ ನೀಡಲಾಗಿದೆ. ಬಾದಾಮಿ ಕ್ಷೇತ್ರದಿಂದ ಶ್ರೀರಾಮುಲು ನಾಮಪತ್ರ ಸಲ್ಲಿಸಿದ್ದಾರೆ.