ಪತ್ನಿಯನ್ನು ಹಿಂಸಿಸಿದ ಆರೋಪಿ ಪತಿಯ ವಿದೇಶ ಪ್ರಯಾಣಕ್ಕೆ ಕೋರ್ಟ್ ತಡೆ
ಸಂತ್ರಸ್ತೆಗೆ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದಿಂದ ಸಹಕಾರ
ಉಡುಪಿ, ಎ.24: ಪತ್ನಿಗೆ ದುಬೈಯಲ್ಲಿ ಚಿತ್ರಹಿಂಸೆ ನೀಡಿದ ಪ್ರಕರಣದ ಆರೋಪಿ ತೀರ್ಥಹಳ್ಳಿಯ ಸಮೀರ್ ಅಹ್ಮದ್ ವಿಚಾರಣೆ ಮುಗಿಯುವವರೆಗೂ ದೇಶ ಬಿಟ್ಟು ತೆರಳದಂತೆ ಕಾರ್ಕಳದ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದೆ.
ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿಂದು ಕರೆದ ಸುದ್ದಿ ಗೋಷ್ಠಿಯಲ್ಲಿ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಬಾಗ್ ಈ ಮಾಹಿತಿ ನೀಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಸಮೀರ್ ಎ.21ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಆದರೆ ಆತ ಗೈರುಹಾಜರಾಗಿರುವ ಹಿನ್ನೆಲೆಯಲ್ಲಿ ಆತನ ಪಾರ್ಸ್ಪೋರ್ಟ್ನ್ನು ಕೂಡಲೇ ಒಪ್ಪಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ ಎಂದರು.
ಪ್ರಸ್ತುತ ಊರಿಗೆ ಬಂದಿರುವ ಆರೋಪಿ ಸಮೀರ್ ಅಹ್ಮದ್ ಯಾವುದೇ ಸಮಯದಲ್ಲೂ ದೇಶದಿಂದ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇರುವುದರಿಂದ ಆತನ ಪಾಸ್ಪೋರ್ಟ್ ವಶಪಡಿಸಿಕೊಳ್ಳುವಂತೆ ಪಾಸ್ಪೋರ್ಟ್ ಅಧಿಕಾರಿಗಳಿಗೆ ಕೂಡಲೇ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಯನ್ನು ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಕರಣದ ಹಿನ್ನೆಲೆ: ಉಡುಪಿ ಜಿಲ್ಲೆಯ ಆಯೇಷಾ ನಾಝ್ (ಹೆಸರು ಬದಲಾಯಿಸಲಾಗಿದೆ) ಪದವಿ ಶಿಕ್ಷಣ ಮುಗಿಸಿ, 2011ರಲ್ಲಿ ತೀರ್ಥಹಳ್ಳಿಯ ಅಬ್ದುಸ್ಸಮದ್ ಎಂಬವರ ಪುತ್ರ ಸಮೀರ್ನೊಂದಿಗೆ ವಿವಾಹವಾಗಿದ್ದಳು. ಬಳಿಕ ಪತಿ ವಿದೇಶಕ್ಕೆ ಹೋಗಿದ್ದು, ಆ ವೇಳೆ ಪತಿಯ ಮನೆಯಲ್ಲಿ ಅತ್ತೆ, ಮಾವ, ನಾದಿನಿಯರು ಕಿರುಕುಳ ನೀಡಲಾರಂಭಿಸಿದರು. ಎರಡು ತಿಂಗಳ ನಂತರ ಆಯಿಷಾ ದುಬೈಗೆ ತೆರಳಿ ತನ್ನ ಪತಿಯೊಂದಿಗೆ ವಾಸವಾಗಿದ್ದಳು. ಈ ವೇಳೆ ಪತಿ ಕೂಡಾ ಆಕೆಗೆ ಮಾನಸಿಕ ಕಿರುಕುಳ, ದೈಹಿಕ ಹಿಂಸೆ ನೀಡಲಾರಂಭಿಸಿದ. ಆಕೆ ಗರ್ಭಿಣಿಯಾದ ನಂತರ ಸಮೀರ್ ಆಕೆಯ ಬಗ್ಗೆ ತಾತ್ಸಾರ ಬೆಳೆಸಿಕೊಂಡಿದ್ದ. ಸುಮಾರು ನಾಲ್ಕು ತಿಂಗಳ ಕಾಲ ಸರಿಯಾದ ಪೌಷ್ಟಿಕಾಂಶ ಹಾಗೂ ವೈದ್ಯಕೀಯ ಚಿಕಿತ್ಸೆ ಸಿಗದೆ ಆಯೇಷಾ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಳು. ಈ ಹಿನ್ನೆಲೆಯಲ್ಲಿ 2012ರ ಆಗಸ್ಟ್ ತಿಂಗಳಲ್ಲಿ ಆಕೆ ಭಾರತಕ್ಕೆ ಬಂದು ತಾಯಿಮನೆ ಸೇರಿಕೊಂಡಿದ್ದಳು ಎಂದು ಶಾನುಭಾಗ್ ವಿವರಿಸಿದರು.
2013ರ ಫೆಬ್ರವರಿಯಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಬಳಿಕ ನಾಲ್ಕು ತಿಂಗಳ ಮಗುವಿನೊಂದಿಗೆ ಮತ್ತೆ ದುಬೈಗೆ ತೆರಳಿದಳು. ಆದರೆ ಹೆಣ್ಣು ಮಗು ಇಷ್ಟ ಇಲ್ಲದ ಸಮೀರ್ ಹಿಂಸೆ ಮತ್ತೆಯೂ ಮುಂದುವರಿದಿತ್ತು. ಕೊನೆಗೆ ಆಕೆ ಎಲ್ಲ ವಿಚಾರಗಳನ್ನು ತಂದೆತಾಯಿಯರ ಬಳಿ ಹೇಳಿಕೊಂಡಿದ್ದಳು ಎಂದು ಶಾನುಭಾಗ್ ತಿಳಿಸಿದರು.
ಪ್ರತಿಷ್ಠಾನಕ್ಕೆ ದೂರು: 2017ರ ಮಾರ್ಚ್ ತಿಂಗಳಲ್ಲಿ ಆಯೇಷಾ ತಾಯಿ ಮನೆಗೆ ಹಿಂದಿರುಗಿದ್ದು, ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿಗೆ ಪತ್ರ ಬರೆದು, ತನ್ನ ಸಂಸಾರ ಸರಿ ಮಾಡಿಕೊಡಬೇಕಾಗಿ ವಿನಂತಿಸಿದಳು. ವರ್ಷವೊಂದು ಕಳೆದರೂ ಆಕೆಯ ಪತಿಯಾಗಲಿ, ಅವರ ಮನೆಯವರಾಗಲಿ ಯಾವುದೇ ಸಂಧಾನಕ್ಕೆಗಿ ಬರಲಿಲ್ಲ ಎಂದು ಶಾನುಭಾಗ್ ಹೇಳಿದರು. ಕೆಲದಿನಗಳ ಹಿಂದೆ ಗಂಡನಿಂದ ವಂಚಿತಳಾಗಿ ನ್ಯಾಯ ಪಡೆದ ಐರೋಡಿ ಗ್ರಾಮದ ಅಮಿತಾಳ ಕತೆಯನ್ನು ತಿಳಿದ ಆಯೇಷಾ, ಪ್ರತಿಷ್ಠಾನವನ್ನು ಸಂಪರ್ಕಿಸಿದಳು. ನನಗೆ ಹಾಗೂ ಮಗಳಿಗೆ ಪತಿಯಿಂದ ಮಾಸಾಶನವನ್ನು ಕೊಡಿಸಿ ಎಂದು ಆಯೇಷಾ ಕಾರ್ಕಳದ ಸಿವಿಲ್ ನ್ಯಾಯಾಲಯಕ್ಕೆ ದೂರಿಕೊಂಡಿದ್ದಳು. ಈ ಸಂಬಂಧ ಅನೇಕ ಬಾರಿ ಸಮನ್ಸ್ ಕಳುಹಿಸಿದರೂ ಸಮೀರ್ ಕೋರ್ಟ್ಗೆ ಹಾಜರಾಗದಿದ್ದಾಗ ನ್ಯಾಯಾಲಯವು ಆಯೇಷಾ ಹಾಗೂ ಮಗುವಿಗೆ ಪ್ರತೀ ತಿಂಗಳು 5,000 ರೂ. ನೀಡಬೇಕೆಂದು ಸಮೀರ್ಗೆ ಆದೇಶಿಸಿತು. ಈ ಆದೇಶ ನೀಡಿ ಇಂದಿಗೆ ನಾಲ್ಕು ತಿಂಗಳಾ ದರೂ ಸಮೀರ್ ಅದನ್ನು ಪಾಲಿಸಿಲ್ಲ ಎಂದು ಶಾನುಭಾಗ್ ಆರೋಪಿಸಿದರು.
ಇದೀಗ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ನಿರ್ದೇಶನದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿಗಳು ಕಾರ್ಕಳ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ದೂರು ದಾಖಲಿಸಿದ್ದಾರೆ. ಅದರಂತೆ ನ್ಯಾಯಾಲಯವು, ಈ ದೂರಿನ ವಿಚಾರಣೆಗೆ ಮುಗಿಯುವವರೆಗೆ ಸಮೀರ್ ದೇಶ ಬಿಟ್ಟು ಹೋಗದಂತೆ ಆದೇಶಿಸಿದೆ ಎಂದು ಅವರು ಹೇಳಿದರು.
*ಮಹಿಳೆಯ ರಕ್ಷಣೆಗೆ ಯುವಕರ ತಂಡ
ಪತಿಯಿಂದ ಹಿಂಸೆಗೆ ಒಳಗಾಗಿ ನ್ಯಾಯ ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿ ರುವ ಸಂತ್ರಸ್ತ ಮಹಿಳೆಯ ರಕ್ಷಣೆಗೆ ಸುಮಾರು 25 ಮಂದಿಯ ತಂಡವೊಂದು ಸಜ್ಜಾಗಿದೆ. ಮುಂದೆ ನ್ಯಾಯ ಕೇಳಿ ಬರುವ ಮಹಿಳೆಯರಿಗೆ ಯಾವುದೇ ತೊಂದರೆ ಆಗ ಬಾರದೆಂಬ ಉದ್ದೇಶದಿಂದ ಈ ತಂಡ ರಚಿಸಲಾಗಿದೆ. ಈ ತಂಡದಲ್ಲಿ ಎಲ್ಲ ಧರ್ಮ ದವರು ಇದ್ದಾರೆ ಎಂದು ಡಾ.ರವೀಂದ್ರನಾಥ್ ಶಾನುಭಾಗ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತೆ ಆಯೇಷಾ ವಕೀಲರಾದ ವಿಜಯಲಕ್ಷ್ಮೀ, ನಿವೇದಿತಾ ಬಾಳಿಗಾ, ವಿದ್ಯಾ ಶಾನುಭಾಗ್, ಚಂದ್ರಕಲಾ ಪೂಜಾರಿ ಉಪಸ್ಥಿತರಿದ್ದರು.