ಮಡಿಕೇರಿ ಕ್ಷೇತ್ರ: ಸಹೋದರಿ ಕೆ.ಪಿ. ಚಂದ್ರಕಲಾ ಜೊತೆ ಚುನಾವಣಾ ಪ್ರಚಾರಕ್ಕಿಳಿದ ನಟ ಜೈ ಜಗದೀಶ್
ಮಡಿಕೇರಿ,ಎ.24: ತಮ್ಮ ಸಹೋದರಿ ಕೆ.ಪಿ. ಚಂದ್ರಕಲಾ ಅವರು ಕಾಂಗ್ರೆಸ್ ಪಕ್ಷದಿಂದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಜೈ ಜಗದೀಶ್, ತಮ್ಮೆಲ್ಲ ಚಿತ್ರರಂಗದ ಚಟುವಟಿಕೆಗಳನ್ನು ಬದಿಗೊತ್ತಿ ಪ್ರಚಾರಕ್ಕಿಳಿಯಲಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಸ್ಪರ್ಧೆಗೆ ತಮ್ಮ ಸಹೋದರಿಗೆ ಕೆ.ಪಿ. ಚಂದ್ರಕಲಾ ಅವರಿಗೆ ಕಾಂಗ್ರೆಸ್ ಹೈಕಮಾಂಡ್ನಿಂದ ತಂದ ‘ಬಿ’ ಫಾರಂ ಅನ್ನು ಗಾಂಧಿ ಮೈದಾನದ ಬಳಿ ನೀಡಿದ ಜೈಜಗದೀಶ್, ಸಹೋದರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು. ಈ ಸಂದರ್ಭ ಸ್ಥಳದಲ್ಲಿ ಜೈಜಗದೀಶ್ ಅವರ ಪತ್ನಿ ವಿಜಯಲಕ್ಷ್ಮೀ ಸಿಂಗ್, ಚಂದ್ರಕಲಾ ಅವರ ಸಹೋದರಿಯರಾದ ಭಾನುಮತಿ, ರತ್ನ ಮತ್ತು ಶೈಲ ಮತ್ತು ಕುಟುಂಬವರ್ಗವಿದ್ದು, ಶುಭ ಕೋರಿದರು.
ಅಣ್ಣನಾಗಿ ಪ್ರಚಾರ ಮಾಡುವೆ: ಪ್ರಸ್ತುತ ತಾನು ಯಾವುದೇ ರಾಜಕೀಯ ಪಕ್ಷಗಳ ಪರ ಗುರುತಿಸಿಕೊಂಡಿಲ್ಲ. ಓರ್ವ ಕಲಾವಿದನಾಗಿ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದು ಸರಿಯಲ್ಲವೆಂದು ಅಭಿಪ್ರಾಯಿಸಿದ ಜೈಜಗದೀಶ್, ತನ್ನ ಸಹೋದರಿಯೇ ಇದೀಗ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನೆಲ್ಲ ಚಿತ್ರರಂಗದ ಕಾರ್ಯಚಟುವಟಿಕೆಗಳನ್ನು ಚುನಾವಣೆ ಪೂರ್ಣಗೊಳ್ಳುವವರೆಗೆ ಬದಿಗಿರಿಸಿ, ಕ್ಷೇತ್ರದ ಉದ್ದಕ್ಕೂ ಸಹೋದರಿಯ ಪರವಾಗಿ ಅಣ್ಣನಾಗಿ ಪ್ರಚಾರ ಕಾರ್ಯ ನಡೆಸುವುದಾಗಿ ತಿಳಿಸಿದರು.