ಶಿವಮೊಗ್ಗ: 566 ವ್ಯಾಪಾರಿ ಸಂಸ್ಥೆಗಳ ವಿರುದ್ಧ ಮೊಕದ್ದಮೆ ದಾಖಲು
ಶಿವಮೊಗ್ಗ, ಎ. 24: ದೋಷಪೂರಿತ ತೂಕ ಮತ್ತು ಅಳತೆ ಪರಿಕರಗಳನ್ನು ಬಳಸುವುದು, ತೂಕ ಮತ್ತು ಅಳತೆಯಲ್ಲಿ ವಂಚಿಸುವುದು, ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ವ್ಯಾಪಾರಿ ಸಂಸ್ಥೆಗಳನ್ನು ಗುರುತಿಸಿ 566 ಮೊಕದ್ದಮೆ ದಾಖಲಿಸಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಹೆಚ್.ಎಸ್.ರಾಜು ಅವರು ತಿಳಿಸಿದ್ದಾರೆ.
2017ರ ಎಪ್ರಿಲ್ನಿಂದ 2018ರ ಮಾರ್ಚ್ ಅಂತ್ಯದವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಲ್ಲೆಯಲ್ಲಿ 945 ವ್ಯಾಪಾರಸ್ಥರ ಹಾಗೂ ಕೈಗಾರಿಕಾ ಕೇಂದ್ರಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇದಲ್ಲದೆ ವ್ಯಾಪಾರ, ವ್ಯವಹಾರ ನಡೆಸುವವರು ಬಳಸುವ ತೂಕ ಮತ್ತು ಅಳತೆ ಪರಿಕರಗಳ ಪರಿಶೀಲನೆ ನಡೆಸಿ 1,15,80,906ರೂ. ಶುಲ್ಕ ವಸೂಲಿ ಮಾಡಲಾಗಿದೆ. ವಂಚನೆ ಆರೋಪದಲ್ಲಿ ದಾಖಲಾದ ಮೊಕದ್ದಮೆಗಳ ಪೈಕಿ 563 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಿ, ತಪ್ಪಿತಸ್ಥರಿಂದ 5,39,000ರೂ. ದಂಡ ವಸೂಲಿ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿ, ಚಿಲ್ಲರೆ ಸೀಮೆಎಣ್ಣೆ ಮಾರಾಟಗಾರರು, ಸಗಟು ವ್ಯಾಪಾರಸ್ಥರು, ಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಹೆಚ್.ಎಸ್.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.