ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನಕ್ಕೆ ಪ್ರಧಾನಿ ಚಾಲನೆ
ಬೋಪಾಲ, ಎ.24: ದೇಶದ ಪಂಚಾಯತ್ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಯೋಜನೆ ‘ರಾಷ್ಟ್ರೀಯ ಗ್ರಾಮಸ್ವರಾಜ್ ಅಭಿಯಾನಕ್ಕೆ ’ ರಾಷ್ಟ್ರೀಯ ಪಂಚಾಯತ್ರಾಜ್ ದಿನಾಚರಣೆ ಸಂದರ್ಭ ಮಧ್ಯಪ್ರದೇಶದ ಮಾಂಡ್ಲ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದರು.
ಮಾಂಡ್ಲ ಜಿಲ್ಲೆಯ ರಾಮನಗರದಲ್ಲಿ ರಾಷ್ಟ್ರೀಯ ಪಂಚಾಯತ್ರಾಜ್ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೋದಿ, ಬಳಿಕ ಆದಿವಾಸಿ ದಿನದ ಅಂಗವಾಗಿ ಆಯೋಜಿಸಲಾಗಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಬುಡಕಟ್ಟು ಅಥವಾ ಆದಿವಾಸಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 5 ವರ್ಷಗಳ ಅವಧಿಯ ಯೋಜನೆಯನ್ನು ಸರಕಾರ ರೂಪಿಸಿದೆ ಎಂದು ಈ ಸಂದರ್ಭ ಮೋದಿ ಹೇಳಿದರು.
ಅಲ್ಲದೆ ಮಧ್ಯಪ್ರದೇಶದ ಆದಿವಾಸಿ ಪ್ರದೇಶಗಳ ಅಭಿವೃದ್ಧಿಗೆ ನೀಲನಕಾಶೆಯೊಂದನ್ನು ಇದೇ ವೇಳೆ ಪ್ರಧಾನಿ ಅನಾವರಣಗೊಳಿಸಿದರು. ಈ ಯೋಜನೆಯಡಿ ಬುಡಕಟ್ಟು ಪಂಚಾಯತ್ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ 2 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುವುದು. ಸರಕಾರದ ಇ-ಆಡಳಿತ ಯೋಜನೆ ಅನುಷ್ಠಾನದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಪಂಚಾಯತ್ಗಳನ್ನು ಪ್ರಧಾನಿ ಮೋದಿ ಗೌರವಿಸಿದರು. ಗ್ರಾಮವನ್ನು ಬಯಲುಶೌಚ ಮುಕ್ತಗೊಳಿಸುವಲ್ಲಿ ಹಾಗೂ ಹೊಗೆಮುಕ್ತ(ಸೀಮೆಎಣ್ಣೆಯ ಬದಲು ಎಲ್ಪಿಜಿ ಬಳಕೆ)ಗೊಳಿಸುವಲ್ಲಿ ಉತ್ತಮ ಸಾಧನೆ ತೋರಿದ ಪಂಚಾಯತ್ಗಳನ್ನು ಗೌರವಿಸಲಾಯಿತು.ಅಲ್ಲದೆ ಇಂದ್ರಧನುಷ್ ಅಭಿಯಾನ(ರೋಗ ನಿರೋಧಕ ಚುಚ್ಚುಮದ್ದು ಹಾಕಿಸುವ ಕಾರ್ಯಕ್ರಮ) ಹಾಗೂ ಸೌಭಾಗ್ಯ ಯೋಜನೆ(ಗ್ರಾಮದ ಸಂಪೂರ್ಣ ವಿದ್ಯುದೀಕರಣ)ಯಲ್ಲಿ ಶೇ.100ರ ಸಾಧನೆ ತೋರಿದ್ದಕ್ಕಾಗಿ ಈ ಗ್ರಾಮಪಂಚಾಯತ್ ಆಡಳಿತವನ್ನು ಪ್ರಧಾನಿ ಶ್ಲಾಘಿಸಿದರು. ಇದೇ ಸಂದರ್ಭ ಮನೇರಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆಯ ಎಲ್ಪಿಜಿ ಬಾಟ್ಲಿಂಗ್(ಸಿಲಿಂಡರ್ಗೆ ತುಂಬುವ) ಸ್ಥಾವರಕ್ಕೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದರು. ಅಲ್ಲದೆ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.