ಕಡೂರು: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ; ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ ವಶ
ಚಿಕ್ಕಮಗಳೂರು. ಎ.24: ಲಂಚ ಪಡೆಯುತ್ತಿದ್ದ ವೇಳೆ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಯೊಬ್ಬರು ಎಸಿಬಿ ಬೀಸಿದ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ಕಡೂರು ಪಟ್ಟಣದಲ್ಲಿ ವರದಿಯಾಗಿದೆ.
ಕಡೂರು ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿ ಹೇಮೇಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ ಎಂದು ತಿಳಿದು ಬಂದಿದ್ದು, ಇವರು ಬೀರೂರಿನ ಸೀತಮ್ಮ ಎಂಬವರ ಸೈಟ್ ನೋಂದಣಿಗೆ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದನ್ನು ಸೀತಮ್ಮ ಅವರ ಮನೆಗೆ ಹೋಗಿ ಕೇಳಿದ್ದನೆಂದು ಸೀತಮ್ಮ ಆರೋಪಿಸಿದ್ದಾರೆ.
ಈ ಸಂಬಂಧ ಸೀತಮ್ಮ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ಮಂಗಳವಾರ ಕಡೂರು ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕಾರಿ ಹೇಮೇಶ್ 12 ಸಾವಿರೂ. ಲಂಚವನ್ನು ಸೀತಮ್ಮರಿಂದ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಧಿಕಾರಿಯನ್ನು ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.
ದಾಳಿಯಲ್ಲಿ ಎಸಿಬಿ ಡಿವೈಎಸ್ಪಿ ನಾಗೇಶ್ಶೆಟ್ಟಿ, ಎಸ್ಸೈಗಳಾದ ಕೃಷ್ಣಮೂರ್ತಿ, ಬೃಜೇಶ್ ಮ್ಯಾಥಿವ್ ಭಾಗವಹಿಸಿದ್ದರು.
Next Story