ಸಂಸತ್ತಿನಲ್ಲಿ ವೈದ್ಯರ ಪ್ರತಿನಿಧಿ ಬೇಕು: ಡಾ.ಹಬೀಬ್ ರಹ್ಮಾನ್
ಐಎಂಎ ಟ್ರಸ್ಟ್ ಬೆಳ್ಳಿಹಬ್ಬ ಮತ್ತು ಸಂಸ್ಥಾಪಕರ ದಿನಾಚರಣೆ
ಮಂಗಳೂರು, ಎ.24: ಐಎಂಎ ಟ್ರಸ್ಟ್ ಇದರ ಬೆಳ್ಳಿಹಬ್ಬ ಮತ್ತು ಸಂಸ್ಥಾಪಕರ ದಿನಾಚರಣೆ ಇತ್ತೀಚಿಗೆ ನಗರದ ಐಎಂಎ ಸಭಾಂಗಣದಲ್ಲಿ ನಡೆಯಿತು.
ಭಾರತೀಯ ವೈದ್ಯಕೀಯ ಸಂಘ ( ಐಎಂಎ)ದ ಮಂಗಳೂರು ಶಾಖೆ ಹಾಗೂ ಐಎಂಎ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ನಿಟ್ಟೆ ವಿವಿ ಕುಲಪತಿ ಎನ್ ವಿನಯ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಐಎಂಎ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಮಾತನಾಡಿ, ಇಂದು ವೈದ್ಯರು ಎಲ್ಲ ಸ್ಥರಗಳಲ್ಲಿ ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಸರಕಾರಗಳು ಅರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಖರ್ಚು ಮಾಡುತ್ತಿವೆ. ಹೆಚ್ಚು ಖರ್ಚು ಮಾಡುತ್ತಿರುವುದು ಖಾಸಗಿ ಕ್ಷೇತ್ರ. ಆದರೂ ವೈದ್ಯರು ಹಾಗೂ ಆಸ್ಪತ್ರೆಗಳ ವಿರುದ್ಧ ವಿವಿಧ ಆರೋಪಗಳನ್ನು ಹೊರಿಸಲಾಗುತ್ತಿದೆ. ಯುರೋಪಿಯನ್ ದೇಶಗಳಲ್ಲಿ ಅಲ್ಲಿನ ಕಾನೂನು ರಚನೆ ಮಾಡುವಾಗ ವೈದ್ಯರ ಅಭಿಪ್ರಾಯ ಪಡೆಯಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ನಾವು ಹೋರಾಟ ಮಾಡಿ ನಮ್ಮ ಅಭಿಪ್ರಾಯ ಮುಂದಿಡಬೇಕಾಗುತ್ತದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲೂ ಭಾರೀ ಬದಲಾವಣೆಗಳು ಆಗುತ್ತಿವೆ. ಇವೆಲ್ಲವುಗಳ ಹೊರತಾಗಿಯೂ ಒಬ್ಬ ವೈದ್ಯ ಒಬ್ಬ ಉತ್ತಮ ಮನುಷ್ಯನಾಗಿರಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಐಎಂಎಗೆ ಬಹಳ ಜವಾಬ್ದಾರಿಯಿದೆ. ವೈದ್ಯರ ಧ್ವನಿಯಾಗಿ ಐಎಂಎ ಸಂಸತ್ತಿನಲ್ಲಿ ಪ್ರಾತಿನಿಧ್ಯ ಪಡೆಯಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ.ಆರ್.ಎಸ್.ಮಹಾಲೆ, ಡಾ.ಆನಂದ್ ವಿ. ಶೆಟ್ಟಿ, ಡಾ.ಸಿ.ಆರ್.ಕಾಮತ್, ಡಾ.ಕೆ.ವಿ.ದೇವಾಡಿಗ, ಡಾ.ಕೆ.ಆರ್.ಶೆಟ್ಟಿ, ಡಾ.ಸಿ.ಆರ್.ಬಲ್ಲಾಳ್, ಡಾ.ಸುಭಾಶ್ಚಂದ್ರ ಶೆಟ್ಟಿ, ಡಾ.ಡಿ.ಕೆ.ಅಬ್ದುಲ್ ಹಮೀದ್, ಡಾ.ಭಾಸ್ಕರ್ ಶೆಟ್ಟಿ ಕೆ., ಡಾ.ಸಿ.ಪಿ.ಹಬೀಬ್ ರಹ್ಮಾನ್, ಡಾ.ಎಚ್.ಎಸ್.ಬಲ್ಲಾಳ್, ಡಾ.ವಿಷ್ಣು ಕಾಣಿಯೂರ್, ಡಾ.ಬಿ.ವಸಂತ್ ಶೆಟ್ಟಿ, ಡಾ.ಶಾಂತಾರಾಮ್ ಶೆಟ್ಟಿ, ಡಾ.ಎಚ್.ಟಿ.ಮನೋರಮಾ ರಾವ್ ಮತ್ತಿತರರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಡಾ.ಕೆ.ಆರ್.ಕಾಮತ್ ಉಪಸ್ಥಿತರಿದ್ದರು.