ಸುಂಟಿಕೊಪ್ಪ: ಮೂವರ ಮೇಲೆ ಚಾಕುವಿನಿಂದ ಇರಿದು ಪರಾರಿಯಾದ ಯುವಕ
ಸುಂಟಿಕೊಪ್ಪ,ಎ.24: ಕ್ಷುಲ್ಲಕ ಕಾರಣಕ್ಕೆ ಕಲಹ ನಡೆದು ವ್ಯಕ್ತಿಯೊರ್ವ ಮೂವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ಪರಾರಿಯಾದ ಘಟನೆ ಸಮೀಪದ ಮಾರುತಿ ನಗರದಲ್ಲಿ ನಡೆದಿದೆ.
ಕುಶಾಲನಗರ ಸಮೀಪದ ಕಡುವಿನ ಹೊಸಹಳ್ಳಿ ನಿವಾಸಿಯಾಗಿದ ಪಾರ್ವತಿ ಅವರ ಪುತ್ರ ಪುಟ್ನಂಜ ಎಂಬಾತನೇ ಚೂರಿದ ಇರಿದ ಆರೋಪಿಯಾಗಿದ್ದಾನೆ.
ಕೆಲವು ದಿನಗಳಿಂದ ಪುಟ್ನಂಜ ಮತ್ತು ಕುಮಾರನ ನಡುವೆ ಆಗಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗುತ್ತಿತ್ತು ಎನ್ನಲಾಗಿದೆ. ಆ ಕಲಹ ಭಾನುವಾರ ರಾತ್ರಿಯು ನಡೆದು ಕೋಪಗೊಂಡ ಕುಮಾರ ಸುಂಟಿಕೊಪ್ಪ ಪಟ್ಟಣಕ್ಕೆ ಆಗಮಿಸಿ ತನ್ನ ಸ್ನೇಹಿತರಾದ ಸತೀಶ್ ಪೂಜಾರಿ ಮತ್ತು ಸತೀಶ್ ಎಂಬುವವರನ್ನು ಕರೆದುಕೊಂಡು ಮಾರುತಿ ನಗರಕ್ಕೆ ತೆರಳಿ ಪುಟ್ನಂಜನೊಡನೆ ಜಗಳಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ. ಕುಪಿತಗೊಂಡ ಪುಟ್ನಂಜ ತನ್ನ ಬಳಿಯಲ್ಲಿದ್ದ ಚಾಕುವಿನಿಂದ ಕುಮಾರನ ಕೈ, ಮುಖದ ಭಾಗಕ್ಕೆ ಇರಿದಿದ್ದಾನೆ. ತಡೆಯಲು ಹೋದ ಕುಮಾರನ ಗೆಳೆಯರಾದ ಟಿಸಿಎಲ್ ತೋಟದ ನಿವಾಸಿ ಸತೀಶ್ ಪೂಜಾರಿಗೆ ಹೊಟ್ಟೆಭಾಗಕ್ಕೆ ಮತ್ತು ಸುಂಟಿಕೊಪ್ಪ ಒಂದನೇ ವಿಭಾಗದ ನಿವಾಸಿ ಪೈಂಟರ್ ಸತೀಶ್ ಎಂಬಾತನಿಗೆ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.
ವಿಷಯವರಿತ ಸುಂಟಿಕೊಪ್ಪ ಪಿಎಸ್ಐ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಪರಾರಿಯಾಗಿರುವ ಆರೋಪಿ ಪುಟ್ನಂಜನ ವಿರುದ್ದ ಕೊಲೆ ಪ್ರಯತ್ನದ ಆರೋಪದಡಿ(307) ಮೊಕದ್ದಮೆ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಆರೋಪಿಯ ಕುರುಹು ಸಿಕ್ಕಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08276-262333 ಗೆ ಮಾಹಿತಿ ನೀಡುವಂತೆ ಜಯರಾಂ ಮನವಿ ಮಾಡಿಕೊಂಡಿದ್ದಾರೆ.