ಊನಾ ಪ್ರಕರಣದ ಸಂತ್ರಸ್ತರಿಗೆ ಗೋರಕ್ಷಕರಿಂದ ಬೆದರಿಕೆ: ಪೊಲೀಸರಿಗೆ ದೂರು
ಪ್ರಕರಣ ಹಿಂದೆಗೆಯಲು ಒತ್ತಡ
ಅಹ್ಮದಾಬಾದ್, ಎ.26: ಗುಜರಾತ್ ನ ಊನಾದಲ್ಲಿ ಗೋರಕ್ಷಕರ ದಾಳಿಗೊಳಗಾದ ದಲಿತ ಯುವಕರಿಗೆ ಪ್ರಕರಣದ ಆರೋಪಿಗಳು ಬೆದರಿಕೆಯೊಡ್ಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹಲ್ಲೆಗೊಳಗಾದ ಏಳು ರೈತರಲ್ಲಿ ಇಬ್ಬರು ಆರೋಪಿಸಿದ್ದಾರೆ.
ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬೈಕ್ ನಲ್ಲಿ ಬಂದ ಇಬ್ಬರು ಬೆದರಿಸಿದ್ದಾರೆ ಎಂದು ರಮೇಶ್ ಸಾರ್ವಿಯಾ ಹಾಗು ಅಶೋಕ್ ಸಾರ್ವಿಯಾ ದೂರಿನಲ್ಲಿ ತಿಳಿಸಿದ್ದಾರೆ.
"ನಾನು ಮತ್ತು ಅಶೋಕ್ ಉನಾದಿಂದ ಮೋಟಾಗೆ ಹಿಂದಿರುಗುತ್ತಿದ್ದಾಗ ನಮ್ಮ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಜಾಮೀನಿನಲ್ಲಿರುವ ಕಿರಣ್ ಎಂಬಾತ ನಮ್ಮನ್ನು ಬೆದರಿಸಿದ. ಪ್ರಕರಣವನ್ನು ಹಿಂದೆಗೆಯಬೇಕು ಎಂದು ಕಿರಣ್ ಹಾಗು ಮತ್ತೊಬ್ಬ ಬೆದರಿಕೆ ಹಾಕಿದ" ಎಂದು ರಮೇಶ್ ಹೇಳಿದ್ದಾರೆ.
“ಅವರಿಬ್ಬರು ನೀಡಿರುವ ಆಧಾರದಲ್ಲಿ ಎಫ್ ಐಆರ್ ದಾಖಲಿಸಲಾಗುವುದು” ಎಂದು ಪೊಲೀಸ್ ಅಧಿಕಾರಿ ಹಿತೇಶ್ ಜೋಯ್ಸರ್ ತಿಳಿಸಿದ್ದಾರೆ. 2016 ಜುಲೈನಲ್ಲಿ ಗೋರಕ್ಷಕರು 7 ಮಂದಿ ದಲಿತರ ಮೇಲೆ ಹಲ್ಲೆ ನಡೆಸಿದ್ದರು. ರಮೇಶ್, ವಾಸ್ ರಾಮ್, ಅಶೋಕ್ ಹಾಗು ಬೇಚರ್ ರನ್ನು ಕಾರಿಗೆ ಕಟ್ಟಿಹಾಕಿ, ಬಟ್ಟೆ ಬಿಚ್ಚಿ ಮೆರವಣಿಗೆ ನಡೆಸಿದ್ದರು.