ಮುಂಬೈ: ರೈತನಿಗೆ ಸಿಕ್ಕಿತು 2ನೆ ಮಹಾಯುದ್ಧದ ಸಜೀವ ಬಾಂಬ್
ಸಾಂದರ್ಭಿಕ ಚಿತ್ರ
ಮುಂಬೈ, ಎ. 26: ಮುಂಬೈಯಿಂದ 93 ಕಿ.ಮೀ. ದೂರದಲ್ಲಿರುವ ಪಾಲ್ಘಾರ್ ಜಿಲ್ಲೆಯ ವಾಡಾದ ರೈತ ಮಹೇಂದ್ರ ಶಂಕರ್ ಪಾಟೀಲ್ ಮಳೆಗಾಲಕ್ಕೆ ಪೂರ್ವಭಾವಿಯಾಗಿ ಬುಧವಾರ ತನ್ನ ಹೊಲ ಉಳುತ್ತಿದ್ದಾಗ 2ನೇ ಮಹಾಯುದ್ಧದ ಬಾಂಬ್ ಪತ್ತೆಯಾಗಿದೆ.
ವಾಡಾ ತಾಲೂಕಿನ ದೇವ್ಲಿ ಗ್ರಾಮದಲ್ಲಿ ವಾಸಿಸುತ್ತಿರುವ ಪಾಟೀಲ್ ಈ ಬಾಂಬ್ ನೋಡಿ ಆತಂಕಗೊಂಡು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ತಹಶೀಲ್ದಾರರು ಅದು ಜೀವಂತ ಬಾಂಬ್ ಎಂಬುದನ್ನು ದೃಢಪಡಿಸಿದ್ದಾರೆ. ‘‘ಭತ್ತ ಬೆಳೆಸಲು ನಾನು ಹೊಲ ಉಳುತ್ತಿದ್ದೆ. ಇದ್ದಕ್ಕಿದ್ದಂತೆ ಗಟ್ಟಿಯಾದ ವಸ್ತುವೊಂದು ನೇಗಿಲಿಗೆ ತಗುಲಿತು. ಅದು ಬಾಂಬ್ನಂತೆ ಕಾಣುತ್ತಿದ್ದುದರಿಂದ ನನಗೆ ಭಯವಾಯಿತು. ನಾನು ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಇತರ ರೈತರನ್ನು ಕರೆದೆ. ಅನಂತರ ಪೊಲೀಸರಿಗೆ ಮಾಹಿತಿ ನೀಡಿದೆ’’ ಎಂದು ಪಾಟೀಲ್ ಹೇಳಿದ್ದಾರೆ. ಕೂಡಲೇ ವಾಡಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸುಧಾಮ್ ಶಿಂದೆ, ವಾಡೆ ತಹಶೀಲ್ದಾರ್ ದಿನೇಶ್ ಕುರ್ಹಾಡೆ ಸ್ಥಳಕ್ಕೆ ಧಾವಿಸಿದರು ಹಾಗೂ ಅದು ಬಾಂಬ್ ಎಂಬುದನ್ನು ದೃಢಪಡಿಸಿದರು. ‘‘ಇದು ಸಜೀವ ಬಾಂಬ್’’ ಎಂದು ವಾಡಾದ ಉಪ ತಹಶೀಲ್ದಾರ ವಿಠಲ್ ಗೋಸಾವಿ ತಿಳಿಸಿದ್ದಾರೆ.
‘‘ನಾವು ಬಾಂಬ್ ನಿಷ್ಕಿಯ ದಳಕ್ಕೆ ಮಾಹಿತಿ ನೀಡಿದೆವು. ಅವರು ಬುಧವಾರ ಸಂಜೆ ಆಗಮಿಸಿದರು. ಆದರೆ, ಅದನ್ನು ನಿಷ್ಕ್ರಿಯಗೊಳಿಸಲು ಅವರಿಗೆ ಸಾಧ್ಯವಾಗಿಲ್ಲ.’’ ಎಂದು ಗೋಸಾವಿ ತಿಳಿಸಿದ್ದಾರೆ. ‘‘ಈಗ ನಾವು ಬಾಂಬ್ ನಿಷ್ಕ್ರಿಯಗೊಳಿಸಲು ಬಿಡಿಡಿಎಸ್ ತಂಡವನ್ನು ಕಳುಹಿಸಲು ಮುಂಬೈಯಲ್ಲಿರುವ ಭಾರತೀಯ ಸೇನೆಗೆ ಪತ್ರ ಬರೆದಿದ್ದೇವೆ.’’ ಎಂದು ಅವರು ಹೇಳಿದ್ದಾರೆ. ಈ ಬಾಂಬ್ ಎರಡನೇ ಮಹಾಯುದ್ಧಕ್ಕೆ ಸೇರಿದ್ದಾಗಿರಬಹುದು. ಆ ಸಂದರ್ಭ ಬ್ರಿಟೀಶರು ವಾಡಾದ 13 ಗ್ರಾಮಗಳನ್ನು ತೆರವುಗೊಳಿಸಿದ್ದರು ಹಾಗೂ ಈ ಪ್ರದೇಶವನ್ನು ತಾತ್ಕಾಲಿಕವಾಗಿ ಸ್ಫೋಟಕ ಸಂಗ್ರಹಿಸುವ ಹಾಗೂ ಸೇನಾ ಕಂಟೋನ್ಮೆಂಟ್ ಆಗಿ ಪರಿವರ್ತಿಸಿದ್ದರು. ಬಾಂಬ್ ಅನ್ನು ಪರಿಶೀಲಿಸಲು ನಾವು ಸೇನೆಯನ್ನು ಕಾಯುತ್ತಿದ್ದೇವೆ ಎಂದು ಗೋಸಾವಿ ತಿಳಿಸಿದ್ದಾರೆ.