ಮೋದಿ ಸರಕಾರದ ಆಡಳಿತದಲ್ಲಿ ಪ್ರತಿ ವರ್ಷ 30ಲಕ್ಷ ಉದ್ಯೋಗ ನಶಿಸುತ್ತಿದೆ: ರಾಜೀವ್ ಸತವ್
ಬೆಂಗಳೂರು, ಎ.26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ಬಂದಾಗಿನಿಂದ ಪ್ರತಿವರ್ಷ 30ಲಕ್ಷ ಉದ್ಯೋಗಗಳು ನಶಿಸುತ್ತಿವೆ ಎಂದು ಗುಜರಾತ್ ಕಾಂಗ್ರೆಸ್ ಉಸ್ತುವಾರಿ ಹಾಗೂ ಸಂಸದ ರಾಜೀವ್ ಸತವ್ ತಿಳಿಸಿದರು.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಯುವ ಜನತೆಯ ಜನಸಂಖ್ಯಾನುಸಾರ 2028ರ ವೇಳೆಗೆ 34ಕೋಟಿ ಕೋಟಿ ಉದ್ಯೋಗ ಸೃಷ್ಟಿಯಾಗಬೇಕು. ಅಂದರೆ ಪ್ರತಿ ವರ್ಷ ಕನಿಷ್ಟ 3ರಿಂದ 4ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಾಗುವುದಕ್ಕಿಂತ, ಇರುವ ಉದ್ಯೋಗವೆ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಕನಿಷ್ಟ 2ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದು ಹೇಳಿದರು. ಆದರೆ, ನೋಟು ನಿಷೇಧ ಹಾಗೂ ಜಿಎಸ್ಟಿ ಜಾರಿಯಿಂದಾಗಿ ಸುಮಾರು 27ಕ್ಷೇತ್ರಗಳಲ್ಲಿ ಉದ್ಯೋಗ ಕಡಿಮೆಯಾಗಿದೆ. ಕೃಷಿ ಕ್ಷೇತ್ರ ಒಂದರಲ್ಲಿಯೆ 1.49ಕೋಟಿ ಉದ್ಯೋಗ ಇಲ್ಲವಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವ್ಯಾಪಂ ಹಗರಣ, ಎಸ್ಸೆಸ್ಸಿ ಹಗರಣ ಮತ್ತು ಉದ್ಯೋಗಕ್ಕಾಗಿ ಹಣ ಹಗರಣಗಳು ಭಾರತದ ಭವಿಷ್ಯವನ್ನೆ ಬಲಿ ತೆಗೆದುಕೊಂಡಿವೆ. ಎಸ್ಸೆಸ್ಸಿ(ಸ್ಟಾಫ್ ಸೆಲೆಕ್ಷನ್ ಕಮಿಷನ್) ಹಗರಣದಿಂದ ಸರಕಾರಿ ಉದ್ಯೋಗ ಸಂಸ್ಥೆಗಳ ಕುರಿತು ದೇಶದ ಜನತೆ ವಿಶ್ವಾಸ, ನಂಬಿಕೆ ಕಳೆದುಕೊಂಡಂತಾಗಿದೆ. ಸುಮಾರು 50ಸಾವಿರ ಉದ್ಯೋಗಗಳಿಗೆ 2ಕೋಟಿ ಮಂದಿ ಅರ್ಜಿ ಹಾಕಿದ್ದರು. ಇವರೆಲ್ಲರ ಭವಿಷ್ಯಕ್ಕೆ ಕೇಂದ್ರ ಸರಕಾರದ ಬಿಜೆಪಿ ಆಡಳಿತ ಕೊಡಲಿಪೆಟ್ಟು ನೀಡಿದೆ ಎಂದು ಅವರು ಕಿಡಿಕಾರಿದರು.
ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ್ ಮಾತನಾಡಿ, ಉದ್ಯೋಗ ಸೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಇರುವ ಉದ್ಯೋಗವನ್ನೆ ನಿರ್ಮೂಲನೆ ಮಾಡುವ ಮೂಲಕ ದೇಶದ ಆಶಾಕಿರಣವಾದ ಯುವಜನತೆಯ ಭವಿಷ್ಯವನ್ನು ನಾಶ ಮಾಡಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಹಾಗೂ ಬಿಜೆಪಿ ಆಡಳಿತವಿರುವ ಇತರೆ ರಾಜ್ಯಗಳಿಗೆ ಹೋಲಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 5ವರ್ಷಗಳಲ್ಲಿ 15ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಆದರೆ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿರುವ ಲಕ್ಷಾಂತರ ವೈದ್ಯಕೀಯ, ಎಂಜಿನಿಯರ್ ವಿದ್ಯಾರ್ಥಿಗಳು ಕನಿಷ್ಟ ಮಟ್ಟದ ಉದ್ಯೋಗಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಮಾಜಿ ಸಂಸದ ಮುಹಮ್ಮುದ್ ಅಝರುದ್ದೀನ್ ಉಪಸ್ಥಿತರಿದ್ದರು.