ಬಂಗಾರಪ್ಪ ಪುತ್ರರಿಂದ ಸೊರಬ ಅಭಿವೃದ್ಧಿ ಅಸಾಧ್ಯ: ರಾಜು
ಸೊರಬ, ಎ.26: ತಾಲೂಕಿನ ಭೂಗೋಳಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲದ ಬಂಗಾರಪ್ಪಪುತ್ರರು ತಾಲೂಕನ್ನು ಅಭಿವೃದ್ಧಿಪಡಿಸಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜು. ಎಂ ತಲ್ಲೂರು ಲೇವಡಿ ಮಾಡಿದ್ದಾರೆ.
ತಾಲೂಕಿನ ಆನವಟ್ಟಿಯ ಆಝಾದ್ ನಗರದಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಬಂಗಾರಪ್ಪಪುತ್ರರಾದ ಶಾಸಕ ಮಧು ಬಂಗಾರಪ್ಪಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಅಪ್ಪನ ಉತ್ತರಾಧಿಕಾರಿಯಾಗಲು ಬಂದವರು. ತಂದೆಯಿಂದ ಬಳುವಳಿ ಬಂದ ಅಧಿಕಾರವನ್ನು ಅನುಭವಿಸಲು ಸಿದ್ದರಿದ್ದಾರೆಯೇ ಹೊರತು ಅಧಿಕಾರ ದೊರೆಯಲು ಕಾರಣರಾದ ಜನ ಸೇವೆ ಮಾಡಲು ಸಿದ್ಧರಿಲ್ಲ ಎಂದರು.
40 ವರ್ಷಗಳಿಂದ ತಾಲೂಕನ್ನು ಒಂದೇ ಕುಟುಂಬ ಆಳಿದ್ದು ಅಭಿವೃದ್ಧಿಯಲ್ಲಿ ತಾಲೂಕು ಹಿನ್ನಡೆ ಕಾಣಲು ಕಾರಣವಾ ಗಿದೆ. ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸುವವರೆಗೆ ತಾಲೂಕಿನ ಪ್ರಗತಿ ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಜಾತ್ಯತೀತ ಮನೋಭಾವದಿಂದ ಸೇವೆ ಮಾಡಲು ಇಚ್ಛಿಸಿದ್ದು ತಾಲೂಕಿನ ಎಲ್ಲಾ ಜನತೆ ಜಾತ್ಯತೀತವಾಗಿ ಹಾಗೂ ವರ್ಗಾತೀತವಾಗಿ ತನಗೆ ಮತ ನೀಡುವುದರ ಮೂಲಕ ಬೆಂಬಲಿಸಬೇಕೆಂದು ಮನವಿ ಮಾಡಿದರು.ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಆರೀಫುಲ್ಲಾ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರೇವಣಪ್ಪಟಿ.ಜಿ, ಸೈಯದ್ ಉಬೆೇದುಲ್ಲಾ, ರಫೀಕ್ ಅಹ್ಮದ್ ಪಟೇಲ್, ಅಹಮದ್ ಬೇಗ್, ರಫೀಕ್ ಜಾವಿದ್, ಅಲ್ಲಾಬಕ್ಷ್, ಹಬೀಬುಲ್ಲಾ ಮತ್ತಿತರರಿದ್ದರು.