ಚಂದ್ರಮೌಳಿ ಟಿಕೆಟ್ ನನ್ನಿಂದ ತಪ್ಪಿಲ್ಲ : ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಸ್ಪಷ್ಟನೆ
ಮಡಿಕೇರಿ,ಎ.26 :ಹೈಕೋರ್ಟ್ ವಕೀಲ ಹೆಚ್.ಎಸ್.ಚಂದ್ರಮೌಳಿ ಅವರಿಗೆ ಅಂತಿಮವಾಗಿ ಟಿಕೆಟ್ ತಪ್ಪಲು ನಾನು ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿರುವ ಬ್ರಿಜೇಶ್ ಕಾಳಪ್ಪ ಫೇಸ್ಬುಕ್ನಲ್ಲಿ ಏ.17 ರಂದೇ ನನ್ನ ಭಾವನೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದೆ, ಆದರೆ ಚಂದ್ರಮೌಳಿಯವರಿಗೆ ಟಿಕೆಟ್ ಘೋಷಣೆಯಾಗಿರುವುದು ಏ.20 ರಂದು ಎಂದು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೂಡ ಒಬ್ಬ ವಕೀಲನಾಗಿದ್ದು, ಯಾವುದೇ ಪ್ರಕರಣ ನನ್ನ ಮುಂದೆ ವಕಾಲತ್ತಿಗೆ ಬಂದಾಗ ನಾನು ವಾದಿಸಲೇಬೇಕಾಗಿದೆ, ಇದು ವೃತ್ತಿ ಧರ್ಮ ಕೂಡ ಹೌದು. ಆದರೆ ಟಿಕೆಟ್ ತಪ್ಪಿದ ಬೇಸರ ಮತ್ತು ಅಸಮಾಧಾನದ ಹಿನ್ನೆಲೆಯಲ್ಲಿ ಚಂದ್ರಮೌಳಿಯವರು ನನ್ನನ್ನು ಹಾವಿಗೆ ಹೋಲಿಸಿ ಮಾತನಾಡಿದ್ದಾರೆ.
ಅವರ ಬಗ್ಗೆ ಮತ್ತು ಅವರ ಹೋಲಿಕೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲವೆಂದಷ್ಟೇ ಹೇಳಿದ ಬ್ರಿಜೇಶ್ ಕಾಳಪ್ಪ, ಚೋಕ್ಸಿ ಲಾಯರ್ ಎಂಬ ಟೀಕೆಯನ್ನು ನಾನು ಮಾಡಿಲ್ಲವೆಂದು ಸ್ಪಷ್ಟಪಡಿಸಿದರು. ಫೇಸ್ಬುಕ್ನಲ್ಲಿ ಏ.20 ರ ನನ್ನ ಬರಹವನ್ನು ಅವರು ಓದಿದ್ದರೆ ಬಹುಶ: ಈ ರೀತಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲವೆಂದು ಬ್ರಿಜೇಶ್ ಕಾಳಪ್ಪ ಹೇಳಿದರು. ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ, ಎಐಸಿಸಿ ವಕ್ತಾರನಾಗಿ ಕಾರ್ಯನಿರ್ವಹಿಸುತ್ತಿರುವುದೂ ನಿಜ, ನಾನೊಬ್ಬ ಕಾಂಗ್ರೆಸ್ನ ಶಿಸ್ತಿನ ಸಿಪಾಯಿ ಎಂಬುವುದನ್ನು ಪುನರುಚ್ಚರಿಸಲು ಬಯಸುತ್ತೇನೆ ಎಂದು ಹೇಳಿದ ಬ್ರಿಜೇಶ್ ಕಾಳಪ್ಪ, ಚಂದ್ರಮೌಳಿ ಅವರು ಟಿಕೆಟ್ ತಪ್ಪಿದ ನಂತರ ಆಡಿದ ಮಾತುಗಳನ್ನು ನಾನು ಎಐಸಿಸಿ ವಕ್ತಾರನಾಗಿ ಪಕ್ಷದ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಬಂದ ಮೇಲೆ ಬಂಡಾಯ ಶಮನ
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಶುಕ್ರವಾರ ಜಿಲ್ಲೆಗೆ ಆಗಮಿಸಿದ ನಂತರ ಬಂಡಾಯ ಎದ್ದಿರುವವರು ಮತ್ತೆ ಪಕ್ಷದಲ್ಲೇ ಉಳಿಯಲಿದ್ದಾರೆ, ಆ ಮೂಲಕ ಜಿಲ್ಲೆಯಲ್ಲಿನ ಗೊಂದಲ, ಅಸಮಾಧಾನಗಳು ದೂರವಾಗಲಿದೆ ಎಂದು ಬ್ರಿಜೇಶ್ ಕಾಳಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳುವ ವಿಶ್ವಾಸವಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ಅವರು ಇದೇ ಸಂದರ್ಭ ವಿಶ್ವಾಸ ವ್ಯಕ್ತಪಡಿಸಿದರು.
ನಾನು ರಸ್ತೆ ಬದಿ ರಾಜಕಾರಣಿ !
ನನ್ನನ್ನು ಕೆಲವರು ವೀಕ್ಎಂಡ್ ರಾಜಕಾರಣಿ ಎಂದು ಟೀಕಿಸಿದ್ದನ್ನು ನೋಡಿದ್ದೇನೆ, ಆದರೆ ಪಕ್ಷದ ಕೆಲಸಕ್ಕಾಗಿ ಪಕ್ಷ ಸಂಘಟನೆಗಾಗಿ ನಾನು ರಸ್ತೆ ಬದಿ ರಾಜಕಾರಣಿಯಾಗಲು ಕೂಡ ಸಿದ್ಧನಿದ್ದೇನೆ ಎಂದು ಬ್ರಿಜೇಶ್ ಕಾಳಪ್ಪ ಮಾರ್ಮಿಕವಾಗಿ ನುಡಿದರು.
ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಶತ ಸಿದ್ಧವೆಂದು ವಿಶ್ವಾಸ ವ್ಯಕ್ತಪಡಿಸಿರುವ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ,
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿರುವ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.
ದಕ್ಷಿಣ ಕರ್ನಾಟಕವನ್ನು ಸರ್ವಾಂಗೀಣ ರೀತಿಯಲ್ಲಿ ಅಭಿವೃದ್ಧಿಗೊಳಿಸಿದ ಮಾದರಿಯಲ್ಲೇ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡುವ ಮತ್ತು ಪ್ರೊ.ಬಿ.ಎಂ.ನಂಜುಂಡಪ್ಪ ವರದಿಯನ್ನು ಸಮಗ್ರ ಕರ್ನಾಟಕ ಅಭಿವೃದ್ಧಿ ದೃಷ್ಟಿಕೋನದಿಂದ ಜಾರಿಗೊಳಿಸಲು ಮುಖ್ಯಮಂತ್ರಿಗಳು ಚಾಮುಂಡೇಶ್ವರಿ ಮತ್ತು ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಚ್ಛ ಮತ್ತು ದಕ್ಷ ಆಡಳಿತ ಹಾಗೂ ಅನೇಕ ಭಾಗ್ಯಗಳು ಜನ ಮೆಚ್ಚುಗೆ ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪರವಾದ ವಾತಾವರಣವಿದೆ. ಇದೇ ಮಾದರಿಯ ಕಾಂಗ್ರೆಸ್ ಅಲೆ ಕೊಡಗಿನಲ್ಲಿ ಕೂಡ ಇದೆ ಎಂದು ಬ್ರಿಜೇಶ್ ಕಾಳಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ಕೃಷ್ಣ ನದಿ ನೀರಿನ ಹಂಚಿಕೆ ಅಥವಾ ಮಹದಾಯಿ ನದಿ ನೀರಿನ ಹಂಚಿಕೆ ಕುರಿತಂತೆ ಉಂಟಾಗಿರುವ ತಾರತಮ್ಯ ಭಾವನೆ, ಗೊಂದಲದ ವಾತಾವರಣಗಳನ್ನು ಪ್ರತ್ಯೇಕ ರಾಜ್ಯ ಕೇಳುವ ಮೂಲಕ ಪರಿಹರಿಸಬಹುದೆಂಬ ನಂಬಿಕೆ ಹುಸಿಯಾಗಿದೆ. ಮೈಸೂರಿನವರೇ ಆಗಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಯಿಂದೂ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬಾದಾಮಿಯಿಂದಲೂ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯ ಅವರು ಸಮಗ್ರ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಸಂಕಲ್ಪವನ್ನು ಹೊಂದಿದ್ದಾರೆ ಎಂದು ಬ್ರಿಜೇಶ್ ಕಾಳಪ್ಪ ವ್ಯಾಖ್ಯಾನಿಸಿದರು.
ಸಿಎಸ್, ಡಿಎಸ್ ಹಾಗೂ ಸಿ4 ಮಾಡಿರುವ ಸಮೀಕ್ಷೆಗಳನ್ನು ಮಾತ್ರ ನಾವು ನಂಬುತ್ತೇವೆ. 2008 ರಲ್ಲಿ ಬಿಜೆಪಿ 110 ಸ್ಥಾನಗಳನ್ನು ಪಡೆಯುತ್ತದೆ, 2013 ರಲ್ಲಿ ಕಾಂಗ್ರೆಸ್ 120 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದ್ದ ಸಿಎಸ್, ಡಿಎಸ್ ಹಾಗೂ ಸಿ4 ಸಮೀಕ್ಷೆ ನಿಜವಾಗಿತ್ತು. ಈ ಬಾರಿಯೂ ಮೂರು ಸಂಸ್ಥೆಗಳು ನೀಡಿರುವ ಸಮೀಕ್ಷೆಗಳು ನಿಜವಾಗುವ ಎಲ್ಲಾ ಸಾಧ್ಯತೆಗಳಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದು ಬ್ರಿಜೇಶ್ ಕಾಳಪ್ಪ ವಿಶ್ವಾಸ ವ್ಯಕ್ತಪಡಿಸಿದರು.