ಜಿನ್ನಾರೊಂದಿಗೆ ಹೆಚ್ಚಿನ ಸಾಮ್ಯತೆ, ಸಂಬಂಧ ಯಾರದ್ದು?
ಬಂಗಾಳ ಮತ್ತು ಸಿಂಧ್ ಪ್ರಾಂತೀಯ ಸರಕಾರದಲ್ಲಿ ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾ ಮೈತ್ರಿ ಸರಕಾರದ ಪಾಲುದಾರರಾಗಿದ್ದದ್ದು ನಿಜವಲ್ಲವೇ? ಮುಸ್ಲಿಂ ಲೀಗ್ ಪಾಕಿಸ್ತಾನ ನಿಲುವಳಿಯನ್ನು ಅಂಗೀಕರಿಸಿದಾಗ ಹಿಂದೂ ಮಹಾಸಭಾ ಅದರ ಮಿತ್ರ ಪಕ್ಷವಾಗಿತ್ತು. ಭೂತಕಾಲವನ್ನು ಮರೆತುಬಿಡೋಣ; ಇವತ್ತು ಕೂಡ ಬಿಜೆಪಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಜೊತೆ ಮಿತ್ರ ಪಕ್ಷವಾಗಿ ಇಲ್ಲವೇ? ಹಿಂದೂ ಯುವವಾಹಿನಿಯು ಪಿಡಿಪಿ ಸರಕಾರದಿಂದ ಹೊರಬರುವಂತೆ ಬಿಜೆಪಿಯನ್ನು ಬಲಾತ್ಕರಿಸುತ್ತದೆಯೇ? ಒತ್ತಾಯಿಸುತ್ತದೆಯೇ?
ಭಾರತೀಯ ಉಪಖಂಡದಲ್ಲಿ ಮುಸ್ಲಿಮರ ಹಿತಾಸಕ್ತಿಗೆ ಆಕಾಂಕ್ಷೆಗೆ ಮುಹಮ್ಮದ್ ಅಲಿ ಜಿನ್ನಾರಷ್ಟು ಹಾನಿಯುಂಟು ಮಾಡಿದ ವ್ಯಕ್ತಿ ಇನ್ನೊಬ್ಬರಿಲ್ಲ. ಪ್ರಸಿದ್ಧ ನ್ಯಾಯವಾದಿಯಾಗಿದ್ದ (ಬಾಲಗಂಗಾಧರ ತಿಲಕರ ಪರವಾಗಿಯೂ ವಾದಿಸಿದ್ದ) ಜಿನ್ನಾರಂತಹ ಒಬ್ಬ ನ್ಯಾಯವಾದಿಗೆ ಭಾರತ ಒಂದು ಪ್ರಜಾಪ್ರಭುತ್ವವಾಗಿದೆಯೇ ಹೊರತು ಒಂದು ಹಿಂದೂ ರಾಜಪ್ರಭುತ್ವವಲ್ಲ ಎಂಬುದು ಯಾಕೆ ಅರ್ಥವಾಗಲಿಲ್ಲ?
ಮುಸ್ಲಿಂ ಜನಸಮುದಾಯವನ್ನು ಎರಡಾಗಿ (ಬಾಂಗ್ಲಾದೇಶದ ಉದಯದ ಬಳಿಕ ಮೂರಾಗಿ) ವಿಭಜಿಸುವ ಮೂಲಕ ಜಿನ್ನಾ ಮುಸ್ಲಿಮರ ಸ್ಥಿತಿಯನ್ನು ಶಾಶ್ವತವಾಗಿ ದುರ್ಬಲಗೊಳಿಸಿ ಅವರು ಭಾರತದಲ್ಲಿ ಅಲ್ಪಸಂಖ್ಯಾತರಾಗುವಂತೆ ಮಾಡಿದರು. ಜಿನ್ನಾ ಅವರ ಲೆಕ್ಕಾಚಾರ ಹಾಗೂ ವಿಚಾರ ತಪ್ಪು ಎಂಬುದನ್ನು ಪಾಕಿಸ್ತಾನದ ರಚನೆಯಾಗಿ ಮೊದಲ ಇಪ್ಪತ್ತೈದು ವರ್ಷಗಳಲ್ಲಿ ಆದ ಬಾಂಗ್ಲಾದೇಶದ ಸೃಷ್ಟಿ ರುಜುವಾತು ಪಡಿಸಿತ್ತು.
ಹೀಗೆಲ್ಲಾ ಇರುವಾಗ ಭಾರತದಲ್ಲಿ ಮುಸ್ಲಿಮರು ಮತ್ತು ಎಎಂಯುವಿನ ವಿದ್ಯಾರ್ಥಿಗಳಿಗೆ ಜಿನ್ನಾ ಅವರ ವಿರುದ್ಧ ನಿಜವಾದ ಅಸಮಾಧಾನಗಳಿರುವುದು ಸಹಜ. ಆದ್ದರಿಂದ ಜಿನ್ನಾರಿಗೆ ನೀಡಲಾಗಿದ್ದ ಎಎಂಯು ವಿದ್ಯಾರ್ಥಿ ಸಂಘದ ಶಾಶ್ವತ ಸದಸ್ಯತ್ವವನ್ನು ಹಿಂದಕ್ಕೆ ಪಡೆಯಬೇಕೇ ಎಂಬ ಬಗ್ಗೆ ಅವರು ಚರ್ಚಿಸ ಬಯಸಬಹುದು. ಹೀಗಾಗಿ, ಅವರ ಭಾವಚಿತ್ರವನ್ನು ತೆಗೆದಿರುವುದರ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಜಿನ್ನಾರವರ ಸಿದ್ಧಾಂತದ ಅನುಮೋದನೆ ಎಂದು ಪರಿಗಣಿಸಲಾಗದು. ಅದು ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವರಿಗಿರುವ ಪ್ರಜಾಸತ್ತಾತ್ಮಕ ಹಕ್ಕಿನ ಪ್ರತಿಪಾದನೆ ಅಷ್ಟೇ ಅಲ್ಲದೆ ಬೇರೇನೂ ಅಲ್ಲ.
ನಿಜ ಹೇಳಬೇಕೆಂದರೆ ಆದಿತ್ಯನಾಥರ ಹಿಂದೂ ಯುವವಾಹಿನಿ, ಆರೆಸ್ಸೆಸ್, ವಿಎಚ್ಪಿ ಇತ್ಯಾದಿಗಳಿಗೆ ಜಿನ್ನಾರೊಂದಿಗೆ ರಾಷ್ಟ್ರೀಯವಾದಿ ಹಾಗೂ ದೇಶಪ್ರೇಮಿ ಮುಸ್ಲಿಮರಿಗಿಂತ ಹೆಚ್ಚಿನ ಸಾಮ್ಯತೆ, ಸಂಬಂಧ ಇದೆ. ಜಿನ್ನಾ ಅವರ ಹಾಗೆಯೇ ವಿಡಿ ಸಾವರ್ಕರ್ ಮತ್ತು ಎಂಎಸ್ ಗೊಳ್ವಾಲ್ಕರ್ರಂತಹ ಹಿಂದೂ ನಾಯಕರು ಹಿಂದೂಗಳು ಹಾಗೂ ಮುಸ್ಲಿಮರು ಎರಡು ವಿಶಿಷ್ಟ/ವಿಭಿನ್ನ ರಾಷ್ಟ್ರಗಳೆಂದು ನಂಬಿದ್ದರು. 1935ರ ಭಾರತ ಸರಕಾರದ ಕಾಯ್ದೆಯ ಪ್ರಕಾರ ಮತದಾನದ ಹಕ್ಕು ಹೊಂದಿದ್ದ ಸುಮಾರು ಶೇ. 11 ಮುಸ್ಲಿಮರಲ್ಲಿ ಹಲವಾರು ಮಂದಿ ಮುಸ್ಲಿಂ ಲೀಗನ್ನು ವಿರೋಧಿಸಿದ್ದರು ಮತ್ತು ಒಂದು ಬೃಹತ್ತಾದ ಬಹುಸಂಖ್ಯಾತ ಮುಸ್ಲಿಂ ಸಮುದಾಯದವರು ತಾವಾಗಿಯೇ ಇಷ್ಟಪಟ್ಟು ಭಾರತವನ್ನು ತಮ್ಮ ದೇಶ ಎಂದು ಆಯ್ದುಕೊಂಡರು.
ವಿಚಿತ್ರವೆಂದರೆ, ಹಿಂದೂ ಬಲಪಂಥೀಯರಿಗೆ ಭಾರತವನ್ನು ಪ್ರೀತಿಸುವುದು ತಮ್ಮ ಧರ್ಮದ ಒಂದು ಭಾಗ ಎಂದು ತಿಳಿಯುವ ಮತ್ತು ತಾವು ಆಯ್ದುಕೊಂಡ ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧರಿರುವ ಈ ದೇಶಪ್ರೇಮಿ ಮುಸ್ಲಿಮರು ಒಂದು ಸಮಸ್ಯೆಯಾಗಿದ್ದಾರೆ. ಬಂಗಾಳ ಮತ್ತು ಸಿಂಧ್ ಪ್ರಾಂತೀಯ ಸರಕಾರದಲ್ಲಿ ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾ ಮೈತ್ರಿ ಸರಕಾರದ ಪಾಲುದಾರರಾಗಿದ್ದದ್ದು ನಿಜವಲ್ಲವೇ? ಮುಸ್ಲಿಂ ಲೀಗ್ ಪಾಕಿಸ್ತಾನ ನಿಲುವಳಿಯನ್ನು ಅಂಗೀಕರಿಸಿದಾಗ ಹಿಂದೂ ಮಹಾಸಭಾ ಅದರ ಮಿತ್ರ ಪಕ್ಷವಾಗಿತ್ತು. ಭೂತಕಾಲವನ್ನು ಮರೆತುಬಿಡೋಣ; ಇವತ್ತು ಕೂಡ ಬಿಜೆಪಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಜೊತೆ ಮಿತ್ರ ಪಕ್ಷವಾಗಿ ಇಲ್ಲವೇ? ಹಿಂದೂ ಯುವವಾಹಿನಿಯು ಪಿಡಿಪಿ ಸರಕಾರದಿಂದ ಹೊರಬರುವಂತೆ ಬಿಜೆಪಿಯನ್ನು ಬಲಾತ್ಕರಿಸುತ್ತದೆಯೇ? ಒತ್ತಾಯಿಸುತ್ತದೆಯೇ?
ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಎರಡೂ ಕೂಡ ವಿಭಾಜಕ ಹಾಗೂ ಪ್ರತಿಗಾಮಿ ಸಿದ್ಧಾಂತಗಳನ್ನು ಹೊಂದಿದ್ದವು. ಸಾವರ್ಕರ್ರ ಸಿದ್ಧಾಂತದ ಉತ್ತರಾಧಿಕಾರಿಗಳು ಈಗ ವಿಶ್ವವಿದ್ಯಾನಿಲಯಗಳನ್ನು ನಾಶಪಡಿಸುವ ಪಣತೊಟ್ಟಿದ್ದಾರೆ. ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್ಯು) ಬಳಿಕ ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯವು ಅವರ ದಾಳಿಯ ಗುರಿಯಾಗಿದೆ.
ಎಎಂಯು ಎರಡು ರಾಷ್ಟ್ರ ಸಿದ್ಧಾಂತವನ್ನು ಒಪ್ಪುವುದಿಲ್ಲ.
ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯವು ಧರ್ಮದ ಆಧಾರದಲ್ಲಿ ರಾಷ್ಟ್ರಗಳನ್ನು ರಚಿಸುವ, ನಿರ್ಮಿಸುವ ಪ್ರತಿಗಾಮಿ ಸಿದ್ಧಾಂತವನ್ನು ಒಪ್ಪುವುದಿಲ್ಲ. ಧರ್ಮದ ಹೆಸರಿನಲ್ಲಿ ನಿಜವಾಗಿಯೂ ರಾಷ್ಟ್ರಗಳನ್ನು ನಿರ್ಮಿಸುವುದಾದಲ್ಲಿ ಯಾಕಾಗಿ ಕ್ರಿಶ್ಚಿಯನ್ ದೇಶಗಳು ಇತರ ಕ್ರಿಶ್ಚಿಯನ್ ದೇಶಗಳ ವಿರುದ್ಧ ಮತ್ತು ಇಸ್ಲಾಂ ದೇಶಗಳು ಇತರ ಇಸ್ಲಾಂ ದೇಶಗಳ ವಿರುದ್ಧ ಕಾದಾಡುತ್ತವೆ? ಎಎಂಯು ಭಾರತದ ಏಕತೆ ಮತ್ತು ಸಮಗ್ರತೆಗೆ ಸಂಪೂರ್ಣವಾಗಿ ಬದ್ಧವಾಗಿದೆ. ಆದರೆ 1938ರಲ್ಲಿ ಜಿನ್ನಾರಿಗೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಆಜೀವ ಸದಸ್ಯತ್ವವನ್ನು ನೀಡಲಾಯಿತು ಎಂಬುದನ್ನೂ ಎಎಂಯು ಅಲ್ಲಗಳೆಯುವಂತಿಲ್ಲ. ಒಂದು ವಿದ್ಯಾರ್ಥಿ ಸಂಘಟನೆಯಾಗಿ ಎಎಂಯು ವಿದ್ಯಾರ್ಥಿ ಸಂಘವು ಕುಲಪತಿಗಳ ನಿಯಂತ್ರಣದಲ್ಲಿಲ್ಲ. ಹೀಗಾಗಿ ಅಲಿಗಡದ ಸಂಸದ ಸತೀಶ್ ಗೌತಮ್ ಸಂಘದ ಸಭಾಭವನದಲ್ಲಿರುವ ಜಿನ್ನಾರ ಭಾವಚಿತ್ರವನ್ನು ತೆಗೆಯುವಂತೆ ಹೇಳಿ ಬರೆದ ಪತ್ರವನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷರಿಗೆ ಕಳುಹಿಸಬೇಕಾಗಿತ್ತು ಮತ್ತು ಸಂಘದ ಮಹಾಸಭೆಯಲ್ಲಿ ಚರ್ಚಿಸದೆ ಸಂಘದ ಅಧ್ಯಕ್ಷರು ಕೂಡ ತಾನೇ ತೀರ್ಮಾನ ತೆಗೆದುಕೊಂಡು ಯಾವುದೇ ಭಾವಚಿತ್ರವನ್ನು ತೆಗೆಯುವಂತಿಲ್ಲ.
ಅಂತಹ ಒಂದು ಚರ್ಚೆ ಎಲ್ಲ ರೀತಿಯ ಅಭಿಪ್ರಾಯಗಳು ಅಭಿವ್ಯಕ್ತಿಗೆ ಅವಕಾಶ ಮಾಡಿಕೊಡುತ್ತಿತ್ತು. ಆದರೆ ತೀವ್ರಗಾಮಿ ಹಿಂದೂ ಬಲಪಂಥೀಯರಿಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಪ್ರಾಮಾಣಿಕ ಚರ್ಚೆಗಳಲ್ಲಿ ನಂಬಿಕೆ ಇಲ್ಲ. ತಮ್ಮ ಆಕ್ರಮಣಕಾರಿ ದಾಳಿಕೋರ ನಡೆಯಿಂದಾಗಿ ಅವರು ಅನಗತ್ಯವಾದ ಒಂದು ವಿವಾದವನ್ನು ಸೃಷ್ಟಿಸಿದ್ದಾರೆ. ಎಎಂಯು ವಿದ್ಯಾರ್ಥಿ ಸಂಘದ ಪ್ರತಿಷ್ಠಿತ ಆಜೀವ ಸದಸ್ಯತ್ವವನ್ನು ಮಹಾತ್ಮಾ ಗಾಂಧಿ, ನೆಹರೂ, ಚಂದ್ರಶೇಖರ್ ಆಜಾದ್ ಮತ್ತು ಬಿ.ಆರ್. ಅಂಬೇಡ್ಕರ್ರಂತಹ ಮೇಧಾವಿಗಳಿಗೆ ನೀಡ ಲಾಗಿದೆ. ಅಲ್ಲದೆ ಜಿನ್ನಾ ಎಎಂಯುಗೆ ದೇಣಿಗೆ ನೀಡಿದರೆಂಬುದನ್ನು ಅಲ್ಲಗಳೆ ಯುವಂತಿಲ್ಲ ಮತ್ತು ಅವರ ವೀಲುನಾಮೆಯಲ್ಲಿ ಓರ್ವ ಫಲಾನುಭವಿ ಎಂದು ಆ ಸಂಸ್ಥೆಯ ಹೆಸರನ್ನು ಅವರು ಉಲ್ಲೇಖಿಸಿದ್ದರು ಎನ್ನಲಾಗಿದೆ. ಜಿನ್ನಾರವರು ನಿಧನ ಹೊಂದಿದಾಗ ಭಾರತದ ಸಂಸತ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಿಲ್ಲವೇ? ಉಪಪ್ರಧಾನಿಯಾಗಿ ಎಲ್. ಕೆ. ಅಡ್ವಾಣಿಯವರು ಕೂಡಾ ಜಿನ್ನಾರವರ ಸಮಾಧಿಗೆ ಭೇಟಿ ನೀಡಿದ್ದರು; ಅವರನ್ನು ಓರ್ವ ಶ್ರೇಷ್ಠ ಜಾತ್ಯತೀತವಾದಿ ಎಂದು ಬಣ್ಣಿಸಿದ್ದರು. ಹೀಗಾಗಿ ಎಎಂಯುನ ಪ್ರತಿಭಟನಾನಿರತ ವಿದ್ಯಾರ್ಥಿಗಳ ‘‘ಜಿನ್ನಾ ತೊ ಬಹನಾ ಹೈ’’(ಜಿನ್ನಾ ಕೇವಲ ಒಂದು ನೆಪಮಾತ್ರ)ಘೋಷಣೆಯಲ್ಲಿ ಸತ್ಯಾಂಶ ಇದೆ.
ಕೃಪೆ: thewire.in