ಕಾಂಡ ಕೋಶ ಚಿಕಿತ್ಸೆ ಕಾನೂನು ತಿದ್ದುಪಡಿಗೆ ಶಿಫಾರಸು: ಐಸಿಎಂಆರ್ ಆಕ್ಷೇಪ
ಎಪ್ರಿಲ್ 29ರಂದು ಐಸಿಎಂಆರ್ ತನ್ನ ಆಕ್ಷೇಪಣೆ ಸಲ್ಲಿಸಿದೆ. ಕನಿಷ್ಠ ಕುಶಲತೆಯ ಕಾಂಡಕೋಶಗಳನ್ನೂ ಔಷಧದ ವ್ಯಾಖ್ಯೆಯಡಿ ಸೇರಿಸಬೇಕೆಂದು ಸಲಹೆ ನೀಡಿದೆ. ಪ್ರಸ್ತಾವಿತ ತಿದ್ದುಪಡಿಯಲ್ಲಿ ಕನಿಷ್ಠ ಕುಶಲತೆಯ ಕಾಂಡಕೋಶ ಎಂಬ ಪದವನ್ನು ಕೈಬಿಟ್ಟಿರುವ ಕಾರಣ ವೈದ್ಯರಿಗೆ ಪ್ರಮಾಣೀಕರಿಸದ ಹಾಗೂ ಅನಿಯಂತ್ರಿತ ಕಾಂಡಕೋಶ ಚಿಕಿತ್ಸಾ ಪದ್ಧತಿಯನ್ನು ನಡೆಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದೆ.
ಕಾಂಡ ಕೋಶ(ಸ್ಟೆಮ್ಸೆಲ್)ಗಳ ಚಿಕಿತ್ಸಾ ಕಾರ್ಯವಿಧಾನಗಳನ್ನು ನಿಯಂತ್ರಿಸುವ ಉದ್ದೇಶದಿಂದ 1945ರ ಔಷಧ ಮತ್ತು ಪ್ರಸಾಧನ ಕಾಯ್ದೆಗೆ ತಿದ್ದುಪಡಿ ಕೋರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಡಿರುವ ಶಿಫಾರಸಿಗೆ ‘ದಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’ ಆಕ್ಷೇಪ ಸೂಚಿಸಿದೆ. ಕನಿಷ್ಠ ಕುಶಲತೆಯ ಕಾಂಡ ಕೋಶಗಳೆಂದು ಕರೆಯಲಾಗುವ ಕೆಲವು ವಿಧದ ಸಂಸ್ಕರಿಸಿದ ಕಾಂಡ ಕೋಶಗಳನ್ನು ಹೊಸ ಔಷಧ ಎಂಬ ವ್ಯಾಖ್ಯಾನದಿಂದ ಹೊರಗಿಡುವಂತೆ ತಿದ್ದುಪಡಿಯಲ್ಲಿ ಸೂಚಿಸಲಾಗಿದೆ. ಮಾರುಕಟ್ಟೆಯ ಅನುಮೋದನೆ ಪಡೆಯುವ ಮೊದಲು ಇಂತಹ ಕೋಶಗಳ ಪರಿಣಾಮ ಹಾಗೂ ಸುರಕ್ಷತೆಯನ್ನು ವೈದ್ಯಕೀಯ ಪ್ರಯೋಗದ ಮೂಲಕ ಪರೀಕ್ಷಿಸುವ ಅಗತ್ಯವಿಲ್ಲ. ಈ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತರೆ ದೇಶದಲ್ಲಿ ಪ್ರಮಾಣೀಕರಿಸದ ಕಾಂಡಕೋಶ ಚಿಕಿತ್ಸಾ ವಿಧಾನವನ್ನು ನ್ಯಾಯಸಮ್ಮತ ಗೊಳಿಸಿದಂತಾಗುತ್ತದೆ. ಪ್ರಸ್ತಾವಿತ ತಿದ್ದುಪಡಿಯನ್ನು ಎಪ್ರಿಲ್ 4ರಂದು ಪ್ರಕಟಿಸಲಾಗಿದ್ದು ಇದಕ್ಕೆ ಆಕ್ಷೇಪ/ಸಲಹೆಗಳಿದ್ದರೆ ಮೇ 20ರ ಒಳಗೆ ಸೂಚಿಸುವಂತೆ ತಿಳಿಸಲಾಗಿದೆ. ‘ದಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’ (ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ- ಐಸಿಎಂಆರ್) ಎಪ್ರಿಲ್ 29ರಂದು ತನ್ನ ಆಕ್ಷೇಪವನ್ನು ಸಲ್ಲಿಸಿದೆ. ಮನುಷ್ಯನ ದೇಹದ ಭಾಗಗಳಾದ ಕರುಳು ಬಳ್ಳಿ ಅಥವಾ ಭ್ರೂಣದಿಂದ ಕಾಂಡಕೋಶಗಳನ್ನು ಪಡೆಯಲಾಗುತ್ತಿದ್ದು ಇವು ದೇಹದಲ್ಲಿ ವಿಭಿನ್ನ ವಿಶಿಷ್ಟ ಕೋಶಗಳಾಗಿ ಬೆಳೆಯುತ್ತವೆ(ನರ ಕೋಶ ಅಥವಾ ರಕ್ತದ ಕೋಶ). ಮೂಳೆ ಮಜ್ಜೆಯಿಂದ ಪಡೆದ ಕಾಂಡ ಕೋಶಗಳನ್ನು ಲ್ಯುಕೇಮಿಯ ಸಹಿತ ರಕ್ತದ ಕ್ಯಾನ್ಸರ್ನ ಚಿಕಿತ್ಸಾ ಕ್ರಮದಲ್ಲಿ ಯಶಸ್ವಿಯಾಗಿ ಬಳಸಲಾಗಿದೆ. ರೋಗಿಗೆ ಆತನದ್ದೇ ಕಾಂಡ ಕೋಶಗಳನ್ನು ಬಳಸಿ ಚಿಕಿತ್ಸೆ ನೀಡುವ ವಿಧಾನವನ್ನು ಸ್ವಯಂ ಕೊಡುಗೆ ವಿಧಾನ ಹಾಗೂ ಇತರ ವ್ಯಕ್ತಿಗಳಿಂದ ಕಾಂಡಕೋಶಗಳನ್ನು ದೇಣಿಗೆ ಪಡೆಯುವ ವಿಧಾನವನ್ನು ಅನ್ಯರ ಕೊಡುಗೆ ವಿಧಾನ ಎಂದು ಕರೆಯಲಾಗುತ್ತದೆ. ಇನ್ನೂ ಕೆಲವು ಕಾಂಡಕೋಶ ಚಿಕಿತ್ಸಾ ವಿಧಾನವನ್ನು ಅನುಸರಿಸಲಾಗುತ್ತಿದೆಯಾದರೂ ಇವುಗಳ ಪರಿಣಾಮಕಾರಿತ್ವ ಹಾಗೂ ಸುರಕ್ಷತೆ ಇನ್ನೂ ಪ್ರಮಾಣಿತಗೊಂಡಿಲ್ಲ. ಭಾರತದಲ್ಲಿ ಕಾಂಡ ಕೋಶಗಳ ಬಳಕೆಯನ್ನು ನಿಯಂತ್ರಿಸುವ ಯಾವುದೇ ಕಾನೂನು ಇಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಕೆಲವು ಚಿಕಿತ್ಸೆಗಳಿಗೆ ಮಾತ್ರ ಕಾಂಡ ಕೋಶ ಚಿಕಿತ್ಸಾ ವಿಧಾನವನ್ನು ಅಂಗೀಕರಿಸಿದ್ದು, ಇತರ ಚಿಕಿತ್ಸೆಗಳಿಗೆ ಇವುಗಳ ಬಳಕೆಯನ್ನು ಪ್ರಮಾಣೀಕರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಔಷಧ ಮತ್ತು ಪ್ರಸಾಧನ ಕಾಯ್ದೆಗೆ ತಿದ್ದುಪಡಿ ತರಲು ಆರೋಗ್ಯ ಸಚಿವಾಲಯ ಬಯಸಿದೆ. ತಿದ್ದುಪಡಿಗೆ ಅನುಮೋದನೆ ದೊರೆತರೆ, ಕಾಂಡ ಕೋಶಗಳನ್ನು ಔಷಧಗಳ ವಿಭಾಗದಲ್ಲಿ ವರ್ಗೀಕರಿಸುವ ಮೂಲಕ ಇವನ್ನು ಭಾರತೀಯ ಔಷಧ ಮಹಾ ನಿಯಂತ್ರಕರ ವ್ಯಾಪ್ತಿಗೆ ತರಲಾಗುತ್ತದೆ. ವ್ಯಕ್ತಿಯ ದೇಹದಿಂದ ಪಡೆದ ಕಾಂಡಕೋಶಗಳನ್ನು ಸ್ವಚ್ಛಗೊಳಿಸುವುದು, ಜಾಲಾಡುವುದು, ಗಾತ್ರವನ್ನು ಮರುರೂಪಿಸುವುದು ಇತ್ಯಾದಿ ಕೆಲವು ಪ್ರಕ್ರಿಯೆಗಳಿಗೆ ಒಳಪಡಿಸಿ ಬಳಿಕ ಅದೇ ವ್ಯಕ್ತಿಯ ದೇಹದೊಳಗೆ ಸೇರಿಸಲಾಗುತ್ತದೆ.
ಐಸಿಎಂಆರ್ನ ಆಕ್ಷೇಪಣೆಯಲ್ಲಿ ಏನಿದೆ:
ಎಪ್ರಿಲ್ 29ರಂದು ಐಸಿಎಂಆರ್ ತನ್ನ ಆಕ್ಷೇಪಣೆ ಸಲ್ಲಿಸಿದೆ. ಕನಿಷ್ಠ ಕುಶಲತೆಯ ಕಾಂಡಕೋಶಗಳನ್ನೂ ಔಷಧದ ವ್ಯಾಖ್ಯೆಯಡಿ ಸೇರಿಸಬೇಕೆಂದು ಸಲಹೆ ನೀಡಿದೆ. ಪ್ರಸ್ತಾವಿತ ತಿದ್ದುಪಡಿಯಲ್ಲಿ ಕನಿಷ್ಠ ಕುಶಲತೆಯ ಕಾಂಡಕೋಶ ಎಂಬ ಪದವನ್ನು ಕೈಬಿಟ್ಟಿರುವ ಕಾರಣ ವೈದ್ಯರಿಗೆ ಪ್ರಮಾಣೀಕರಿಸದ ಹಾಗೂ ಅನಿಯಂತ್ರಿತ ಕಾಂಡಕೋಶ ಚಿಕಿತ್ಸಾ ಪದ್ಧತಿಯನ್ನು ನಡೆಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದೆ. ಕನಿಷ್ಠ ಕುಶಲತೆಯ ಕಾಂಡಕೋಶವನ್ನು ಚಿಕಿತ್ಸಾ ಪದ್ಧತಿಯಲ್ಲಿ ಬಳಸಿದರೂ, ಇದಕ್ಕೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ ಹಾಗೂ ಕಾಂಡಕೋಶ ಸಂಶೋಧನೆಗಾಗಿನ ಸಾಂಸ್ಥಿಕ ಸಮಿತಿಯಿಂದ ಅನುಮತಿ ಪಡೆಯಬೇಕು ಎಂದು ಐಸಿಎಂಆರ್ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ ಎಂದು ಐಸಿಎಂಆರ್ ಸಹಾಯಕ ಮಹಾನಿರ್ದೇಶಕಿ ಡಾ ಗೀತಾ ಜೋತ್ವಾನಿ ತಿಳಿಸಿದ್ದಾರೆ. ಆಟಿಸಂ, ಸ್ನಾಯುಕ್ಷಯ, ಬೆನ್ನುಹುರಿ ಗಾಯ, ಮೆದುಳಿನ ಪಕ್ಷವಾತ ಮುಂತಾದ ರೋಗಗಳಿಗೆ ಚಿಕಿತ್ಸಾ ಪದ್ಧತಿಯಾಗಿ ಕಾಂಡಕೋಶ ಚಿಕಿತ್ಸಾ ಪ್ರಕ್ರಿಯೆಯನ್ನು ಭಾರತದ ಹಲವು ವೈದ್ಯರು ಅನುಸರಿಸುತ್ತಿದ್ದಾರೆ. ಆದರೆ ಈ ಚಿಕಿತ್ಸಾ ಪದ್ಧತಿ ರೋಗಿಗಳ ಸ್ಥಿತಿಯನ್ನು ಸುಧಾರಿಸಿರುವ ಬಗ್ಗೆ ಯಾವುದೇ ವೈದ್ಯಕೀಯ ಮಾಹಿತಿ ಇವರಲ್ಲಿ ಇಲ್ಲ ಎಂದು ಐಸಿಎಂಆರ್ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ. ಪ್ರಸ್ತಾವಿತ ತಿದ್ದುಪಡಿಯನ್ನು ಭಾರತೀಯ ಔಷಧ ಮಹಾನಿಯಂತ್ರಕ ಡಾ ಎಸ್.ಈಶ್ವರ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ದೇಶದಲ್ಲಿ ಕಾಂಡಕೋಶ ಉತ್ಪಾದನೆಯಲ್ಲಿ ಏಕರೂಪತೆ ಹಾಗೂ ಸ್ಪಷ್ಟತೆ ತರಲು ಈ ತಿದ್ದುಪಡಿಯನ್ನು ಶಿಫಾರಸು ಮಾಡಲಾಗಿದೆ ಎಂದವರು ತಿಳಿಸಿದ್ದಾರೆ. ಆದರೆ ಭಾರತೀಯ ಔಷಧ ಮಹಾನಿಯಂತ್ರಕರು ಕಾಂಡಕೋಶ ಚಿಕಿತ್ಸೆಯನ್ನು ನಿಯಂತ್ರಿಸುವ ಬಗ್ಗೆ ಸಲಹೆ ನೀಡಲು 2017ರ ಜನವರಿ 31ರಂದು ರಚಿಸಿರುವ ಉಪಸಮಿತಿ -ಔಷಧ ತಾಂತ್ರಿಕ ಸಲಹಾ ಮಂಡಳಿ ಇದುವರೆಗೂ ಸಭೆಯನ್ನೇ ಸೇರಿಲ್ಲ. ಅಲ್ಲದೆ ತಮಗೆ ಕರಡು ಅಧ್ಯಾದೇಶದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಉಪಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಭಾರತದಲ್ಲಿ ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿರುವ ಕಾಂಡಕೋಶ ಉದ್ದಿಮೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರವೊಂದನ್ನು ರೂಪಿಸುವಂತೆ 2001ರಲ್ಲಿ ಆರೋಗ್ಯ ಇಲಾಖೆಯು ಐಸಿಎಂಆರ್ ಮತ್ತು ಡಿಸಿಜಿಐಗೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಐಸಿಎಂಆರ್ ರೂಪಿಸಿದ ಇತ್ತೀಚಿನ ಮಾರ್ಗದರ್ಶಿ ಸೂತ್ರ 2017ರಲ್ಲಿ ಸಂಶೋಧಿಸಿ ರೂಪಿಸಿದ ಮಾರ್ಗದರ್ಶಿಯಾಗಿದೆ. ಕಾಂಡಕೋಶ ಉದ್ದಿಮೆಯನ್ನು ನಿಯಂತ್ರಿಸುವ ಏಕೈಕ ಮಾರ್ಗವೆಂದರೆ, ಏನು ಮಾಡಬೇಕು, ಏನು ಮಾಡಬಾರದು ಎಂದು ಸೂಚಿಸುವ ಒಂದು ಕಾನೂನನ್ನು ರೂಪಿಸುವುದಾಗಿದೆ. ಆದರೆ ಪ್ರಸ್ತಾವಿತ ತಿದ್ದುಪಡಿಯು ದುಬಾರಿ ದರ ವಿಧಿಸಿ ಕಾಂಡಕೋಶ ಚಿಕಿತ್ಸೆಯನ್ನು ಮುಂದುವರಿಸಲು ವೈದ್ಯರಿಗೆ ಆಸರೆ ಒದಗಿಸಿದಂತಾಗಿದೆ ಎಂದು ಐಸಿಎಂಆರ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಡಕೋಶ ಚಿಕಿತ್ಸಾ ಕ್ರಮ ಒದಗಿಸುವ ವೈದ್ಯರು ಈ ರೀತಿಯ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಸೂಚಿಸುವ ಮಾಹಿತಿಗಳನ್ನು ತಮ್ಮ ಚಿಕಿತ್ಸಾ ಕೇಂದ್ರದಲ್ಲಿ ಪ್ರದರ್ಶಿಸಬೇಕು ಎಂದು ಕಳೆದ ವರ್ಷ ಐಸಿಎಂಆರ್ ವೈದ್ಯರಿಗೆ ಸೂಚಿಸಿತ್ತು.ಆದರೆ ಯಾವುದೇ ಮಹತ್ವದ ಮಾಹಿತಿಯನ್ನು ಇದುವರೆಗೆ ಒದಗಿಸಿಲ್ಲ. ಕೆಲವು ವೈದ್ಯರು ಕಲ್ಪಿತ ಸಿದ್ಧಾಂತಗಳನ್ನು ಸಲ್ಲಿಸಿದ್ದಾರೆ. ಆದರೆ ಇದು ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ವೈಜ್ಞಾನಿಕ ದಾಖಲೆಯನ್ನು ಯಾರೂ ಸಲ್ಲಿಸಿಲ್ಲ ಎಂದು ಐಸಿಎಂಆರ್ನ ಮೂಲಗಳು ತಿಳಿಸಿವೆ. ಸೂಕ್ತ ನಿಯಂತ್ರಕ ವ್ಯವಸ್ಥೆಯಿಲ್ಲದ ಕಾರಣ ರೋಗಿಗಳನ್ನು ಶೋಷಿಸಲು ಸುಲಭವಾಗುತ್ತದೆ. ಮ್ಯಾಜಿಕಲ್ ಕಾಂಡಕೋಶ ಥೆರಪಿ ಹೆಸರಿನಲ್ಲಿ ಅಸಹಾಯಕ ಕುಟುಂಬದವರಿಂದ ಭಾರೀ ಮೊತ್ತವನ್ನು ವಸೂಲು ಮಾಡಿದ ಹಲವಾರು ಉದಾಹರಣೆಗಳು ನಮ್ಮೆದುರು ಇವೆ. ಕಾಂಡಕೋಶ ಚಿಕಿತ್ಸಾ ವಿಧಾನಕ್ಕೆ ನಿಯಂತ್ರಣ ಹೇರದಿದ್ದರೆ ವೈದ್ಯಕೀಯ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರಬಹುದು ಎಂದು ಜಾಗತಿಕ ಆರೋಗ್ಯ ವಿಷಯದ ಕುರಿತು ಸಂಶೋಧನೆ ನಡೆಸುತ್ತಿರುವ ಡಾ. ಅನಂತ ಭಾನ್ ಹೇಳಿದ್ದಾರೆ. ಕಾಂಡಕೋಶ ಚಿಕಿತ್ಸಾ ಕ್ಷೇತ್ರದಲ್ಲಿ ಇರುವ ವೈದ್ಯರು ಕಾಂಡಕೋಶ ಚಿಕಿತ್ಸಾ ಪ್ರಕ್ರಿಯೆಗೆ ಶಿಫಾರಸು ಮಾಡಲಾಗಿರುವ ಪ್ರಸ್ತಾವನೆಯನ್ನು ಸ್ವಾಗತಿಸಿದ್ದಾರೆ. ಪ್ರಸ್ತಾವಿತ ಬದಲಾವಣೆಗಳು ಪ್ರಗತಿಪರವಾಗಿದ್ದು ಜಪಾನ್, ಕೊರಿಯಾ ಮತ್ತು ಅಮೆರಿಕದಲ್ಲಿ ಆಗಿರುವಂತೆ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ‘ಸ್ಟೆಮ್ ಸೆಲ್ ಸೊಸೈಟಿ ಆಫ್ ಇಂಡಿಯಾ’ದ ಅಧ್ಯಕ್ಷ ಡಾ ಅಲೋಕ್ ಶರ್ಮ ತಿಳಿಸಿದ್ದಾರೆ. ಪ್ರಸ್ತಾವಿತ ಬದಲಾವಣೆ ಭಾರತದಲ್ಲಿ ಕಾಂಡಕೋಶ ಚಿಕಿತ್ಸಾ ಕ್ರಮದ ಬೆಳವಣಿಗೆಗೆ ಸಹಕಾರಿಯಾಗಿರಬೇಕು ಹಾಗೂ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ಲಕ್ಷಾಂತರ ರೋಗಿಗಳಿಗೆ ಇಂತಹ ಚಿಕಿತ್ಸಾ ಕ್ರಮ ಲಭ್ಯವಾಗಬೇಕು ಎಂದವರು ತಿಳಿಸಿದ್ದಾರೆ.
ಕೃಪೆ: scroll.in