ಮಂಗಳೂರಿಗೆ ಆಗಮಿಸಿದ ಯು.ಟಿ.ಖಾದರ್
ಮಂಗಳೂರು, ಮೇ 16: ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರೂ, ಮಾಜಿ ಸಚಿವರಾದ ಯು.ಟಿ.ಖಾದರ್ ಅವರು ಬೆಂಗಳೂರು ಈಗಲ್ಟನ್ ರೆಸಾರ್ಟ್ ನಿಂದ ಬುಧವಾರ ರಾತ್ರಿ ನೇರವಾಗಿ ಮಂಗಳೂರಿಗೆ ಆಗಮಿಸಿದ್ದಾರೆ.
ಗುರುವಾರ ರಮಝಾನ್ ತಿಂಗಳ ಉಪವಾಸ ಪ್ರಾರಂಭವಾಗುವುದರಿಂದ ಕಾಂಗ್ರೆಸ್ ವರಿಷ್ಟರ ಅನುಮತಿ ಕೋರಿ ಮಂಗಳೂರಿನ ತನ್ನ ಮನೆಗೆ ಪ್ರಯಾಣ ಬೆಳೆಸಿರುವ ಯು.ಟಿ.ಖಾದರ್ ಗುರುವಾರ ಬೆಳಗ್ಗೆ ಮತ್ತೆ ರೆಸಾರ್ಟ್ ತಲುಪಲಿದ್ದಾರೆ.
ಬುಧವಾರ ರಾತ್ರಿ ರಮಝಾನ್ ನ ತರಾವೀಹ್ ವಿಶೇಷ ನಮಾಝ್ ಮಾಡಿ, ಬೆಳಗ್ಗಿನ ನಮಾಝ್ ಗೆ ಮುಂಚಿತವಾಗಿ ಸಹರಿ ಉಪಹಾರ ಸೇವಿಸಿ ಪ್ರಥಮ ಉಪವಾಸದೊಂದಿಗೆ ನಮಾಝ್ ಬಳಿಕ ಪುನಃ ಬೆಂಗಳೂರಿಗೆ ವಿಮಾನದ ಮೂಲಕ ತೆರಳಲಿದ್ದಾರೆ. ಕಾಂಗ್ರೆಸ್ ನ ಎಲ್ಲಾ ಶಾಸಕರು ರೆಸಾರ್ಟ್ ನಲ್ಲಿದ್ದರೂ ಯು.ಟಿ.ಖಾದರ್ ಒಬ್ಬರಿಗೆ ಮಾತ್ರ ರಮಝಾನ್ ಅನುಮತಿ ನೀಡಲಾಗಿದೆ ಎಂದು ಅವರ ಮಾಧ್ಯಮ ಕಾರ್ಯದರ್ಶಿ ತಿಳಿಸಿದ್ದಾರೆ.
Next Story