ಮತ್ತೆ ಬರುತ್ತಿದ್ದಾರೆ ಎಲ್ಲರ ಅಚ್ಚುಮೆಚ್ಚಿನ ಮುನ್ನಾಭಾಯ್ ಮತ್ತು ಸರ್ಕೀಟ್
ಇಲ್ಲಿದೆ ಸಂಪೂರ್ಣ ಮಾಹಿತಿ
ಬಾಲಿವುಡ್ ಪ್ರಸಿದ್ಧ ನಿರ್ದೇಶಕ ರಾಜ್ ಕುಮಾರ್ ಹಿರಾನಿಯವರ ನೂತನ ಚಿತ್ರ ಸಂಜಯ್ ದತ್ ಜೀವನಾಧಾರಿತ ‘ಸಂಜು’ ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ಭಾರತದ ಶ್ರೇಷ್ಟ ನಿರ್ದೇಶಕರಲ್ಲೊಬ್ಬರಾಗಿರುವ ಹಿರಾನಿ ತ್ರಿ ಈಡಿಯೆಟ್ಸ್, ಪಿಕೆಯಂತಹ ಚಿತ್ರಗಳನ್ನು ನಿರ್ದೇಶಿಸಿದ್ದರೂ ಅವರ ‘ಮುನ್ನಾ ಭಾಯ್ ಎಂಬಿಬಿಎಸ್’ ಹಾಗು ‘ಲಗೇ ರಹೋ ಮುನ್ನಾ ಭಾಯ್’ ಇಂದಿಗೂ ಜನರ ಫೇವರಿಟ್.
ಇದೀಗ ಮುನ್ನಾಭಾಯ್ ಹಾಗು ಸರ್ಕೀಟ್ ಜೋಡಿ ತೆರೆಮೇಲೆ ಮತ್ತೊಮ್ಮೆ ಮೋಡಿ ಮಾಡಲಿದೆ ಎನ್ನುವ ಸೂಚನೆಯನ್ನು ಹಿರಾನಿ ನೀಡಿದ್ದಾರೆ. ಔಟ್ ಲುಕ್ ಜೊತೆ ಮಾತನಾಡಿದ ಅವರು, “ಮೂರನೆ ಮುನ್ನಾಭಾಯ್ ಚಿತ್ರ ಮಾಡಲು ನಾವು ಇಚ್ಛಿಸಿದ್ದೆವು ಹಾಗು ಅದಕ್ಕಾಗಿ ಸಾಕಷ್ಟು ಬರೆದಿದ್ದೇವೆ. ಆದರೆ ಮೊದಲ ಎರಡು ಸ್ಕ್ರಿಪ್ಟ್ ಗಳ ಮಟ್ಟಕ್ಕೆ ಇದು ಬಂದಿರಲಿಲ್ಲ. ಇದೀಗ ನನಗೇನೋ ಸಿಕ್ಕಿದೆ. ಆದರೆ ಅದಕ್ಕೆ ಇನ್ನೂ ಬರೆಯಬೇಕಾಗಿದೆ” ಎಂದು ಹೇಳಿದರು.
ಮುನ್ನಾಭಾಯ್ ಪಾರ್ಟ್ 3 ಬರುತ್ತಿದೆ ಎನ್ನುವ ಮಾತುಗಳು ಈ ಹಿಂದೆ ಹಲವು ಬಾರಿ ಕೇಳಿ ಬಂದಿತ್ತಾದರೂ, ರಾಜಕುಮಾರ್ ಹಿರಾನಿಯಾಗಲೀ, ಸಂಜಯ್ ದತ್ ಆಗಲಿ ಈ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ಸ್ವತಃ ಹಿರಾನಿಯವರೇ ಮುನ್ನಾಭಾಯ್ ಸೀಕ್ವೆಲ್ ಬರಲಿದೆ ಎನ್ನುವುದನ್ನು ಹೇಳಿದ್ದಾರೆ.
ಸಂಜಯ್ ದತ್ ಹಾಗು ಅರ್ಷದ್ ವಾರ್ಸಿ ನಟಿಸಿದ್ದ ಮುನ್ನಾ ಭಾಯ್ ಎಂಬಿಬಿಎಸ್ ಕಮರ್ಶಿಯಲ್ ಚಿತ್ರವಾಗಿಯೂ, ಪ್ರಯೋಗಾತ್ಮಕ ಚಿತ್ರವಾಗಿಯೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಸದಾ ವಿಭಿನ್ನ ಕಥೆ, ಚಿತ್ರಕಥೆಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ರಾಜ್ ಕುಮಾರ್ ಈ ಬಾರಿ ‘ಸಂಜು’ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.